ಬ್ರ್ಯಾಂಡ್ ಬೆಂಗಳೂರು: ಒಳಚರಂಡಿ ನೀರಿನ ಸಂಸ್ಕರಣೆಗೆ ಸರ್ಕಾರದಿಂದ ಹೊಸ ಪ್ಲಾನ್
ಕರ್ನಾಟಕ ಸರ್ಕಾರವು ಬೆಂಗಳೂರಿನ ಒಳ ಚರಂಡಿ ಸಮಸ್ಯೆ ಮತ್ತು ನೀರಿನ ಕೊರತೆಯ ಸಮಸ್ಯೆಗಳನ್ನು ನಿವಾರಿಸಲು 5000 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಲ್ಲಿ 195 ಕಿ.ಮೀ ಉದ್ದದ ಚರಂಡಿ ನಿರ್ಮಾಣ, 9 ಹೊಸ ಕೊಳಚೆ ನೀರು ಶುದ್ಧೀಕರಣ ಘಟಕಗಳು ಸೇರಿವೆ. ವರ್ಲ್ಡ್ ಬ್ಯಾಂಕ್ 3500 ಕೋಟಿ ರೂಪಾಯಿ ಸಾಲ ನೀಡಲಿದೆ. ಈ ಯೋಜನೆಯು ನೀರಿನ ಸದ್ಬಳಕೆ ಮತ್ತು ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರು, ಮಾರ್ಚ್ 09: ಪ್ರತಿ ಬಾರಿ ಮಳೆಗಾಲದಲ್ಲಿ ಎದುರಾಗುವ ಪ್ರವಾಹದ ಸ್ಥಿತಿ, ಇತ್ತ ಬೇಸಿಗೆಗೆ ಸುಡು ಬಿಸಿಲಿನ ತಾಪಕ್ಕೆ ನೀರಿನ ಅಭಾವ, ಪದೇ ಪದೇ ಬದಲಾಗುವ ಹವಾಮಾನಕ್ಕೆ ತಕ್ಕಂತೆ ಬ್ರ್ಯಾಂಡ್ ಬೆಂಗಳೂರನ್ನು (Brand Bengaluru) ಸಜ್ಜುಗೊಳಿಸಲು ಸರ್ಕಾರ (Karnataka Government) ಹೊಸದೊಂದು ಪ್ಲಾನ್ಗೆ ಸಜ್ಜಾಗಿದೆ. ಬೆಂಗಳೂರಿನ ಚರಂಡಿಗಳ ನಿರ್ವಹಣೆ ನೀರಿನ ವ್ಯವಸ್ಥೆಯನ್ನು ಬಲಗೊಳಿಸಲು ಹೊಸ ಯೋಜನೆ ರೂಪಿಸಲು ಜಲಮಂಡಳಿ, ಬಿಬಿಎಂಪಿಯ ಮೂಲಕ ಹೊಸ ಹೊಸ ಪ್ರಯೋಗ ಮಾಡಲು ತಯಾರಿ ನಡೆದಿದೆ. ಸದ್ಯ ವರ್ಲ್ಡ್ ಬ್ಯಾಂಕ್ನಲ್ಲಿ ಸಾಲ ಪಡೆಯಲು ಹೊರಟಿರುವ ಸರ್ಕಾರ ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಹೊಸ ಟಚ್ ಕೊಡಲು ಮುಂದಾಗಿದೆ.
ಸರ್ಕಾರದ ಬ್ರ್ಯಾಂಡ್ ಬೆಂಗಳೂರಿನ ಕನಸಿಗೆ ಕೈಜೋಡಿಸಿರೋ ಜಲಮಂಡಳಿ 148 MLD ಸಾಮರ್ಥ್ಯದ 9 ಕೊಳಚೆನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಚಿಂತನೆ ನಡೆಸಿದೆ. ಅಲ್ಲದೇ 195 ಕಿಲೋಮೀಟರ್ ಉದ್ದದ ಚರಂಡಿ ನಿರ್ಮಾಣ ಮಾಡುವ ಮೂಲಕ ಮಳೆನೀರು ಸರಾಗವಾಗಿ ಹರಿದು ಪ್ರವಾಹಸ್ಥಿತಿ ಎದುರಾಗದಂತೆ ತಡೆಯಲು ತಯಾರಿ ನಡೆಸಿದೆ.
ಇನ್ನು ಚರಂಡಿಗಳ ನಿರ್ವಹಣೆ, ಸ್ವಯಂಚಾಲಿತ ಒಳಚರಂಡಿ ನೀರು ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಿ, ನೀರಿನ ಸದ್ಬಳಕೆ, ಅಂತರ್ಜಲ ಹೆಚ್ಚಳದ ಜೊತೆಗೆ ರಾಜಧಾನಿಯಲ್ಲಿ ಎದುರಾಗುವ ಪ್ರವಾಹದ ಸ್ಥಿತಿ ನಿಭಾಯಿಸಲು ಸರ್ಕಾರ ಮುಂದಾಗಿದೆ. ಇನ್ನು 5 ಸಾವಿರ ಕೋಟಿ ವೆಚ್ಚದ ಈ ಪ್ರಾಜೆಕ್ಟ್ನಲ್ಲಿ 3,500 ಕೋಟಿ ಹಣವನ್ನು ವರ್ಲ್ಡ್ ಬ್ಯಾಂಕ್ ಸಾಲ ನೀಡಲಿದ್ದು, ಉಳಿದ ಹಣವನ್ನು ಸರ್ಕಾರ ಹಾಗೂ ಬಿಬಿಎಂಪಿ ಹಾಗೂ ಜಲಮಂಡಳಿಯ ಬೊಕ್ಕಸದಿಂದ ಹೊಂದಿಸಲು ತಯಾರಿ ನಡೆದಿದೆ.
ಇದನ್ನೂ ಓದಿ: Viral : ಬೆಂಗಳೂರು ವಿಶೇಷ ಚೇತನರಿಗೆ ತಕ್ಕ ಊರಲ್ಲ, ಇದು ಬ್ರ್ಯಾಂಡ್ ಬೆಂಗಳೂರು ತಂದ ಪರಿಸ್ಥಿತಿ
ಸದ್ಯ ಬೆಂಗಳೂರಲ್ಲಿ ಪದೇ ಪದೇ ಎದುರಾಗುವ ನೀರಿನ ಸಮಸ್ಯೆ ಹಾಗೂ ಮಳೆ ನೀರಿನಿಂದಾಗುವ ಪ್ರವಾಹ ತಡೆಗೆ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಯಲ್ಲಿ ಈ ಯೋಜನೆಗೆ ತಯಾರಿ ನಡೆದಿದ್ದು, ಸದ್ಯ ಈ ಪ್ಲಾನ್ ಎಷ್ಟರಮಟ್ಟಿಗೆ ಫಲ ನೀಡುತ್ತೆ ಎಂಬುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:48 am, Sun, 9 March 25