ತ್ರಿಪುರದ ವಿದ್ಯಾರ್ಥಿಯ ಭೀಕರ ಹತ್ಯೆಗೆ ಕಠಿಣ ಕ್ರಮದ ಭರವಸೆ ನೀಡಿದ ಸಿಎಂ; ಮರಣೋತ್ತರ ಪರೀಕ್ಷೆಯಲ್ಲೇನಿದೆ?
ತ್ರಿಪುರದ ವಿದ್ಯಾರ್ಥಿಯ ಹತ್ಯೆ ಇದೀಗ ನಾನಾ ಆಯಾಮಗಳನ್ನು ಪಡೆಯುತ್ತಿದೆ. ಈ ಪ್ರಕರಣದ ಹೆಚ್ಚಿನ ತನಿಖೆಗೆ ನೇಪಾಳಕ್ಕೆ ಪೊಲೀಸರು ತಂಡವನ್ನು ಕಳುಹಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ. 17 ದಿನಗಳ ಜೀವನ್ಮರಣದ ಹೋರಾಟದ ಬಳಿಕ ಆತ ಡಿ. 26ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಈ ಹತ್ಯೆ ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ.

ಡೆಹ್ರಾಡೂನ್, ಡಿಸೆಂಬರ್ 29: ಡೆಹ್ರಾಡೂನ್ನಲ್ಲಿ ಓದುತ್ತಿದ್ದ ತ್ರಿಪುರದ ವಿದ್ಯಾರ್ಥಿಯ ಹತ್ಯೆಯಲ್ಲಿ ಭಾಗಿಯಾಗಿರುವ ಆರನೇ ಆರೋಪಿಯನ್ನು ಬಂಧಿಸಲು ಉತ್ತರಾಖಂಡದ (Uttarakhand) ಪೊಲೀಸರು ನೇಪಾಳಕ್ಕೆ ತಮ್ಮ ತಂಡವನ್ನು ಕಳುಹಿಸಿದ್ದಾರೆ. 24 ವರ್ಷದ ಏಂಜೆಲ್ ಚಕ್ಮಾ ಎಂಬ ಯುವಕ ಡೆಹ್ರಾಡೂನ್ನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದ. ಆತನ ಮೇಲೆ ಡಿಸೆಂಬರ್ 9ರಂದು 6 ಜನರ ಗುಂಪೊಂದು ಸಣ್ಣ ಜಗಳದ ಬಳಿಕ ಹಲ್ಲೆ ಮಾಡಿದ್ದರು. 17 ದಿನಗಳ ಜೀವನ್ಮರಣದ ಹೋರಾಟದ ಬಳಿಕ ಆತ ಡಿ. 26ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಈ ಹತ್ಯೆ ಜನಾಂಗೀಯ ಹಲ್ಲೆಯೆಂಬ ಹಣೆಪಟ್ಟಿ ಪಡೆದು ದೊಡ್ಡ ಸುದ್ದಿಯಾಗಿತ್ತು.
ಈ ಪ್ರಕರಣದ 6 ಆರೋಪಿಗಳಲ್ಲಿ ಐವರನ್ನು ಬಂಧಿಸಲಾಗಿದೆ. ಆದರೆ ನೇಪಾಳದ ಕಾಂಚನಪುರ ಜಿಲ್ಲೆಯ ನಿವಾಸಿ ಯಜ್ಞರಾಜ್ ಅವಸ್ಥಿ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ 25,000 ರೂ. ಬಹುಮಾನ ಘೋಷಿಸಿರುವ ಪೊಲೀಸರು, ಆತನನ್ನು ಪತ್ತೆಹಚ್ಚಲು ನೇಪಾಳಕ್ಕೆ ತಂಡವನ್ನು ಕಳುಹಿಸಿದ್ದಾರೆ.
ಇದನ್ನೂ ಓದಿ: ಉನ್ನಾವ್ ಲೈಂಗಿಕ ದೌರ್ಜನ್ಯ ಪ್ರಕರಣ; ಕುಲದೀಪ್ ಸೆಂಗಾರ್ ಜಾಮೀನು ರದ್ದತಿಗೆ ಸುಪ್ರೀಂ ಕೋರ್ಟ್ ತಡೆ
ತ್ರಿಪುರದ ಯುವಕನ ಹತ್ಯೆಯಿಂದ ಆಕ್ರೋಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಎಚ್ಚರಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಆ ಯುವಕನ ತಂದೆ ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯಲ್ಲಿ ಜವಾನರಾಗಿದ್ದಾರೆ.
ಇದನ್ನೂ ಓದಿ: 524 ವರ್ಷ ಹಿಂದಿನ ತ್ರಿಪುರ ಸುಂದರಿ ದೇವಸ್ಥಾನದ ವಿಶೇಷತೆ, ಇತಿಹಾಸವೇನು?
ತನ್ನ ವಿರುದ್ಧದ ಜನಾಂಗೀಯ ಹೇಳಿಕೆಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಕೊಲೆಯಾದ ತ್ರಿಪುರದ ವಿದ್ಯಾರ್ಥಿಯ ವೈದ್ಯಕೀಯ ವರದಿಯು ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದೆ ಎಂಬುದನ್ನು ತೋರಿಸಿದೆ. ತಲೆಗೆ ಗಾಯದ ಜೊತೆಗೆ, ಆತನ ತೋಳುಗಳು ಮತ್ತು ಪಾದಗಳಿಗೆ ಅನೇಕ ಗಾಯಗಳಾಗಿದ್ದವು. ಬೆನ್ನುಮೂಳೆಯು ಗಂಭೀರ ಹಾನಿಗೊಳಗಾಗಿತ್ತು. ಆತನ ದೇಹದ ಬಲಭಾಗದಲ್ಲಿ ಚಲನೆಯನ್ನು ಕಳೆದುಕೊಂಡಿದ್ದ ಎಂದು ವೈದ್ಯಕೀಯ ವರದಿ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
