AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UGC Exams: ಮೇ ತಿಂಗಳಲ್ಲಿ ನಡೆಯಬೇಕಿದ್ದ ಎಲ್ಲ ಆಫ್​ಲೈನ್ ಪರೀಕ್ಷೆಗಳನ್ನು ಮುಂದೂಡಿದ ಯುಜಿಸಿ

Covid 19: ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಗಮನಿಸಿ ಜೂನ್ ತಿಂಗಳಲ್ಲಿ ಆಫ್​ಲೈನ್ ಪರೀಕ್ಷೆ ಕುರಿತು ತೀರ್ಮಾನಿಸಲಾಗುವುದು ಎಂದು ಯುಜಿಸಿ ತಿಳಿಸಿದೆ.

UGC Exams: ಮೇ ತಿಂಗಳಲ್ಲಿ ನಡೆಯಬೇಕಿದ್ದ ಎಲ್ಲ ಆಫ್​ಲೈನ್ ಪರೀಕ್ಷೆಗಳನ್ನು ಮುಂದೂಡಿದ ಯುಜಿಸಿ
ಪ್ರಾತಿನಿಧಿಕ ಚಿತ್ರ
guruganesh bhat
|

Updated on: May 07, 2021 | 3:11 PM

Share

ದೆಹಲಿ: ದೇಶದಲ್ಲಿ ಗಣನೀಯವಾಗಿ ಏರುತ್ತಿರುವ ಕೊವಿಡ್ 19ರ ಕಾರಣ ಮೇ ತಿಂಗಳಲ್ಲಿ ನಡೆಯಬೇಕಿದ್ದ ಎಲ್ಲಾ ಆಫ್​ಲೈನ್ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲು ಯುನಿವರ್ಸಿಟಿ ಗ್ರಾಂಟ್ಸ್ ಕಮಿಶನ್ (ಯುಜಿಸಿ) ಮುಂದೂಡಿದೆ. ಈ ಕುರಿತು ಎಲ್ಲ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿರುವ ಯುಜಿಸಿ ಮೇ ತಿಂಗಳಲ್ಲಿ ಯಾವುದೇ ಆಫ್​ಲೈನ್ ಪರೀಕ್ಷೆಗಳನ್ನೂ ನಡೆಸುವುದು ಬೇಡ. ಜೂನ್ ತಿಂಗಳಲ್ಲಿ ಸಭೆ ಸೇರಿ ಪರೀಕ್ಷೆ ನಡೆಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳು ಗುಂಪು ಸೇರುತ್ತಾರೆ. ಇದರಿಂದ ಕೊರೊನಾ ಸೋಂಕು ಮತ್ತಷ್ಟು ಉಲ್ಬಣವಾಗಲಿದೆ. ಹೀಗಾಗಿ ಉನ್ನತ ಶಿಕ್ಷಣ ಇಲಾಖೆಯ ಎಲ್ಲ ಆಫ್​ಲೈನ್ ಪರೀಕ್ಷೆಗಳಿಗೂ ತಾತ್ಕಾಲಿಕ ತಡೆ ಒಡ್ಡಲಾಗಿದ್ದು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಗಮನಿಸಿ ಜೂನ್ ತಿಂಗಳಲ್ಲಿ ಆಫ್​ಲೈನ್ ಪರೀಕ್ಷೆ ಕುರಿತು ತೀರ್ಮಾನಿಸಲಾಗುವುದು ಎಂದು ಯುಜಿಸಿ ತಿಳಿಸಿದೆ.

ದೇಶದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು ದೇಶದಲ್ಲಿ ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ಕರ್ನಾಟಕವೇ ಅತ್ಯಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ತಜ್ಞರ ಅಂದಾಜಿನ ಪ್ರಕಾರ ಪರಿಸ್ಥಿತಿ ಹತೋಟಿಗೆ ಬಾರದೇ ಇದ್ದರೆ ಜೂನ್​ ವೇಳೆಗೆ ರಾಜ್ಯ ಅತ್ಯಂತ ಗಂಭೀರಾವಸ್ಥೆಗೆ ತಲುಪಲಿದೆ. ಕರ್ನಾಟಕದಲ್ಲಿ ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಗುಣಮುಖರಾಗುತ್ತಿರುವವರ ಪ್ರಮಾಣಕ್ಕಿಂತ ಸುಮಾರು ಎರಡರಿಂದ ಎರಡೂವರೆ ಪಟ್ಟು ಅಧಿಕ ಇರುವುದರಿಂದ ವೈದ್ಯಕೀಯ ಸೌಲಭ್ಯಗಳ ಅಭಾವವೂ ಹೆಚ್ಚಾಗಿ ಕಾಡುತ್ತಿದೆ.

ಇನ್ನೊಂದೆಡೆ, ಕರ್ನಾಟಕದಂತೆಯೇ ಮಹಾರಾಷ್ಟ್ರ, ಉತ್ತರಪ್ರದೇಶ, ಗುಜರಾತ್, ಹರ್ಯಾಣ ರಾಜ್ಯಗಳಲ್ಲೂ ಕೊರೊನಾ ಆತಂಕ ಸೃಷ್ಟಿಸಿದೆ. ಆರಂಭದಲ್ಲಿ ನಗರ ಭಾಗದಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಸೋಂಕು ಈಗ ಗ್ರಾಮೀಣ ಪ್ರದೇಶಗಳಿಗೂ ಹಬ್ಬುತ್ತಿರುವುದರಿಂದ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದೆ. ನಮ್ಮ ರಾಜ್ಯದಲ್ಲಿಯೂ ಸದ್ಯ ದಾಖಲಾಗುತ್ತಿರುವ ಪ್ರಕರಣಗಳ ಅರ್ಧದಷ್ಟು ಭಾಗ ಬೆಂಗಳೂರಿನಲ್ಲಿದ್ದು, ದಿನ ಕಳೆದಂತೆ ಬೇರೆ ಜಿಲ್ಲೆಗಳ ಸೋಂಕಿತರ ಪ್ರಮಾಣವೂ ಏರುಗತಿಯಲ್ಲಿ ಸಾಗುತ್ತಿವೆ. ಒಂದು ವೇಳೆ ಉಳಿದ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹಬ್ಬಿದಂತೆ ಕರ್ನಾಟಕದಲ್ಲೂ ಆದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಇದೆಲ್ಲದರ ನಡುವೆ ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ದಾದಿಯರ ಕೊರತೆಯೂ ಕಾಣಿಸಿಕೊಳ್ಳುತ್ತಿರುವುದರಿಂದ ಸಮಸ್ಯೆ ಗಂಭೀರವಾಗುತ್ತಿದೆ.

ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಸೃಷ್ಟಿಸಿರುವ ಅವಾಂತರ ಇಡೀ ವೈದ್ಯಕೀಯ ವ್ಯವಸ್ಥೆಯನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಕಳೆದ 24 ತಾಸಿನಲ್ಲಿ ರಾಜ್ಯದಲ್ಲಿ ಪರೀಕ್ಷೆಗೆ ಒಳಪಟ್ಟ ಮಾದರಿಗಳ ಪೈಕಿ ಶೇ.29.83ರಷ್ಟು ಮಾದರಿಗಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಸೋಂಕಿತರ ಪರಿಸ್ಥಿತಿ ಅಲ್ಪಾವಧಿಯಲ್ಲಿ ದ್ವಿಗುಣವಾಗುವ ಅಪಾಯವಿದೆ ಎಂದು ತಜ್ಞರು ಆತಂಕ ಹೊರಹಾಕಿದ್ದಾರೆ. ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಮೇ 6ರ ಅಂತ್ಯಕ್ಕೆ ಕರ್ನಾಟಕದಲ್ಲಿ 5,17,095 ಕೊರೊನಾ ಪ್ರಕರಣಗಳು ಸಕ್ರಿಯವಾಗಿದ್ದು, ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 17,90,104ಕ್ಕೆ ಏರಿಕೆಯಾಗಿದೆ. ಈ ಪೈಕಿ ಇಲ್ಲಿಯ ತನಕ 12,55,797 ಜನ ಗುಣಮುಖರಾಗಿದ್ದು, 17,212 ಜನ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ಅಪಾಯ ಎಂಬ ಆತಂಕವಿರುವ ಕೊವಿಡ್ 3ನೇ ಅಲೆಯನ್ನು ಹೇಗೆ ನಿಭಾಯಿಸ್ತೀರಿ? ಭಾರತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

ಜೂನ್​ ವೇಳೆ ಬೆಂಗಳೂರಿಗೆ 70 ಸಾವಿರ ಆಕ್ಸಿಜನ್ ಬೆಡ್ ಬೇಕು: ಕೇಂದ್ರ ಸರ್ಕಾರ (UGC cancels all offline exams scheduled in May)