General Bipin Rawat Chopper Crash ಮೃತದೇಹಗಳನ್ನು ಇಂದು ಸಂಜೆ ದೆಹಲಿಗೆ ತರಲಾಗುವುದು: ರಾಜನಾಥ್ ಸಿಂಗ್

| Updated By: ರಶ್ಮಿ ಕಲ್ಲಕಟ್ಟ

Updated on: Dec 09, 2021 | 12:37 PM

ಲೋಕಸಭೆಯಲ್ಲಿ ವಿವರಣೆ ನೀಡಿದ ಸಿಂಗ್ ಅಪಘಾತದಲ್ಲಿ ಸಾವಿಗೀಡಾದವರ ಮೃತದೇಹಗಳನ್ನು ಗುರುವಾರ ದೆಹಲಿಗೆ ತರಲಾಗುವುದು. ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ತ್ರಿ-ಸೇವಾ ತನಿಖೆ(tri-service enquiry) ನಡೆಯುತ್ತಿದೆ ಎಂದು ಹೇಳಿದ್ದಾರೆ.

General Bipin Rawat Chopper Crash ಮೃತದೇಹಗಳನ್ನು ಇಂದು ಸಂಜೆ ದೆಹಲಿಗೆ ತರಲಾಗುವುದು: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Follow us on

ದೆಹಲಿ: ತಮಿಳುನಾಡಿನ (Tamil Nadu) ಕೂನೂರಿನಲ್ಲಿ (Coonoor) ಭಾರತೀಯ ವಾಯುಪಡೆಯ (IAF) ಹೆಲಿಕಾಪ್ಟರ್ ಅಪಘಾತದಲ್ಲಿ(Chopper Crash ) ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ (Chief of Defence Staff Bipin Rawat) ಅವರ ಪತ್ನಿ ಮಧುಲಿಕಾ ಮತ್ತು ಇತರ 11 ಮಂದಿ ಸಾವನ್ನಪ್ಪಿದ ಘಟನೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಗುರುವಾರ ಸಂಸತ್​​ನಲ್ಲಿ ವಿವರಣೆ ನೀಡಿದ್ದಾರೆ. ಲೋಕಸಭೆಯಲ್ಲಿ(Loksabha) ವಿವರಣೆ ನೀಡಿದ ಸಿಂಗ್ ಅಪಘಾತದಲ್ಲಿ ಸಾವಿಗೀಡಾದವರ ಮೃತದೇಹಗಳನ್ನು ಗುರುವಾರ ದೆಹಲಿಗೆ ತರಲಾಗುವುದು. ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ತ್ರಿ-ಸೇವಾ ತನಿಖೆ(tri-service enquiry) ನಡೆಯುತ್ತಿದೆ. ಈ ವರ್ಷದ ಸ್ವಾತಂತ್ರ್ಯ ದಿನದಂದು ಶೌರ್ಯ ಚಕ್ರದ ಪಡೆದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್, ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದು, ಅವರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಸಂತ್ರಸ್ತರ ಪಾರ್ಥಿವ  ಶರೀರವನ್ನು ಗುರುವಾರ ಮದ್ರಾಸ್ ರೆಜಿಮೆಂಟಲ್ ಸೆಂಟರ್‌ಗೆ ಪುಷ್ಪಾರ್ಚನೆಗಾಗಿ ಕೊಂಡೊಯ್ಯಲಾಯಿತು. ಇದರಲ್ಲಿ ಮಿಲಿಟರಿ ಸಿಬ್ಬಂದಿ ಮತ್ತು ರಾಜ್ಯದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಏತನ್ಮಧ್ಯೆ, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಇಂದು ಬೆಳಿಗ್ಗೆ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದರು. ಜನರಲ್ ರಾವತ್ ಮತ್ತು ಅವರ ಪತ್ನಿಯ ಅಂತ್ಯಕ್ರಿಯೆ ಶುಕ್ರವಾರ ದೆಹಲಿ ಕಂಟೋನ್ಮೆಂಟ್​ನಲ್ಲಿ ನಡೆಯಲಿದೆ.

ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ  2 ನಿಮಿಷಗಳ ಮೌನಾಚರಣೆ
ಬುಧವಾರ ಕೂನೂರಿನಲ್ಲಿ ಐಎಎಫ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ 12 ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ  ಎರಡು ನಿಮಿಷಗಳ ಮೌನ ಆಚರಿಸಲಾಯಿತು.


ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗುವುದು. ಇತರ ಸೇನಾ ಸಿಬ್ಬಂದಿಯ ಅಂತಿಮ ಸಂಸ್ಕಾರವನ್ನು ಸೂಕ್ತ ಸೇನಾ ಗೌರವದೊಂದಿಗೆ ನೆರವೇರಿಸಲಾಗುವುದು ಎಂದು ರಾಜನಾಥ್ ಸಿಂಗ್ ಲೋಕಸಭೆಯಲ್ಲಿ  ಹೇಳಿದ್ದಾರೆ.

ಸೇನಾ ಹೆಲಿಕಾಪ್ಟರ್ ಪತನದ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವರಣೆ
ಆಳವಾದ ದುಃಖ ಮತ್ತು ಭಾರವಾದ ಹೃದಯದಿಂದ, 8 ಡಿಸೆಂಬರ್ 2021 ರ ಮಧ್ಯಾಹ್ನ ಮಿಲಿಟರಿ ಹೆಲಿಕಾಪ್ಟರ್ ಪತನದ ದುರದೃಷ್ಟಕರ ಸುದ್ದಿಯನ್ನು ತಿಳಿಸಲು ನಾನು ನಿಂತಿದ್ದೇನೆ, ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಆ ಹೆಲಿಕಾಪ್ಟರ್​​ನಲ್ಲಿದ್ದರು.

ಜನರಲ್ ಬಿಪಿನ್ ರಾವತ್ ಅವರು ವಿದ್ಯಾರ್ಥಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಲು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ಭೇಟಿ ಮಾಡುವವರಿದ್ದರು. ವಾಯುಪಡೆಯ Mi 17 V 5 ಹೆಲಿಕಾಪ್ಟರ್ ನಿನ್ನೆ ಬೆಳಿಗ್ಗೆ 11:48 ಕ್ಕೆ ಸೂಲೂರು ಏರ್ ಬೇಸ್‌ನಿಂದ ಟೇಕ್ ಆಫ್ ಆಗಿದ್ದು, ಮಧ್ಯಾಹ್ನ 12:15 ಕ್ಕೆ ವೆಲ್ಲಿಂಗ್‌ಟನ್‌ನಲ್ಲಿ ಇಳಿಯುವ ನಿರೀಕ್ಷೆಯಿತ್ತು. ಸೂಲೂರು ವಾಯುನೆಲೆಯಲ್ಲಿನ ಏರ್ ಟ್ರಾಫಿಕ್ ಕಂಟ್ರೋಲ್ ಸುಮಾರು ಮಧ್ಯಾಹ್ನ 12:08 ಕ್ಕೆ ಹೆಲಿಕಾಪ್ಟರ್‌ನೊಂದಿಗೆ ಸಂಪರ್ಕ ಕಳೆದುಕೊಂಡಿತು. ತರುವಾಯ, ಕೆಲವು ಸ್ಥಳೀಯರು ಕೂನೂರು ಬಳಿಯ ಕಾಡಿನಲ್ಲಿ ಬೆಂಕಿಯನ್ನು ಕಂಡು ಸ್ಥಳಕ್ಕೆ ಧಾವಿಸಿದರು ಮತ್ತು ಅವರು ಉರಿಯುತ್ತಿರುವ ಮಿಲಿಟರಿ ಹೆಲಿಕಾಪ್ಟರ್‌ನ ಅವಶೇಷಗಳನ್ನು ವೀಕ್ಷಿಸಿದರು. ಸುತ್ತಮುತ್ತಲ ಸ್ಥಳೀಯ ಆಡಳಿತದ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಅಪಘಾತದ ಸ್ಥಳದಿಂದ ಬದುಕುಳಿದವರನ್ನು ರಕ್ಷಿಸಲು ಪ್ರಯತ್ನಿಸಿದವು.

ಅವಶೇಷಗಳಿಂದ  ಹೊರತೆಗೆದ ಎಲ್ಲರನ್ನೂ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಯಿತು. ಇತ್ತೀಚಿನ ವರದಿಗಳು ಹೆಲಿಕಾಪ್ಟರ್‌ನಲ್ಲಿದ್ದ ಒಟ್ಟು 14 ಜನರಲ್ಲಿ 13 ಜನರು ತಮ್ಮ ಗಾಯಗಳಿಗೆ ಬಲಿಯಾಗಿದ್ದಾರೆ ಎಂದು ದೃಢಪಡಿಸಿದೆ. ಮೃತರಲ್ಲಿ ಸಿಡಿಎಸ್ ರಾವತ್ ಅವರ ಪತ್ನಿ ಶ್ರೀಮತಿ ಮಧುಲಿಕಾ ರಾವತ್, ಅವರ ರಕ್ಷಣಾ ಸಲಹೆಗಾರ ಬ್ರಿಗ್ ಲಖ್ಬಿಂದರ್ ಸಿಂಗ್ ಲಿಡ್ಡರ್, ಸಿಬ್ಬಂದಿ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಮತ್ತು ವಾಯುಪಡೆಯ ಹೆಲಿಕಾಪ್ಟರ್ ಸಿಬ್ಬಂದಿ ಸೇರಿದಂತೆ ಒಂಬತ್ತು ಇತರ ಸಶಸ್ತ್ರ ಪಡೆ ಸಿಬ್ಬಂದಿ ಸೇರಿದ್ದಾರೆ. ಅವರ ಹೆಸರುಗಳು ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್, ಜೂನಿಯರ್ ವಾರಂಟ್ ಅಧಿಕಾರಿ ರಾಣಾ ಪ್ರತಾಪ್ ದಾಸ್, ಜೂನಿಯರ್ ವಾರಂಟ್ ಅಧಿಕಾರಿ ಅರಕ್ಕಲ್ ಪ್ರದೀಪ್, ಹವಾಲ್ದಾರ್ ಸತ್ಪಾಲ್ ರೈ, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ವೆಲ್ಲಿಂಗ್ಟನ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಜೀವ ರಕ್ಷಣೆಯಲ್ಲಿದ್ದಾರೆ ಮತ್ತು ಅವರ ಜೀವ ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.  ಘಟನೆಯ ಬಗ್ಗೆ ಭಾರತೀಯ ವಾಯುಪಡೆಯು ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಟ್ರೈನಿಂಗ್ ಕಮಾಂಡ್ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ತ್ರಿ ಸೇವಾ ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: ಚಿಕಿತ್ಸೆಗೆ ಸ್ಪಂದಿಸುತ್ತಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌: ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ‌ ಕಮಾಂಡ್ ಆಸ್ಪತ್ರೆಗೆ ರವಾನೆ ಸಾಧ್ಯತೆ

Published On - 12:19 pm, Thu, 9 December 21