ಹಿಂದಿ ಮಾತಾಡುವ ಕ್ಷೇತ್ರದ ಸಂಸದರಾಗಿ ಏನು ಹೇಳುತ್ತೀರಿ?; ರಾಹುಲ್ ಗಾಂಧಿಗೆ ಸಚಿವ ಅಶ್ವಿನಿ ವೈಷ್ಣವ್ ಪ್ರಶ್ನೆ

ಎನ್‌ಇಪಿ ವಿವಾದದ ಬಗ್ಗೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಟೀಕಿಸಿದ್ದರು. ಹಿಂದಿ ಭಾಷೆ 25 ಉತ್ತರ ಭಾರತದ ಭಾಷೆಗಳನ್ನು 'ನುಂಗಿಹಾಕಿದೆ' ಎಂದು ಸ್ಟಾಲಿನ್ ಗಂಭೀರ ಆರೋಪ ಮಾಡಿದ್ದರು. ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ತ್ರಿಭಾಷಾ ನೀತಿಯ ಬಗ್ಗೆ ಘರ್ಷಣೆ ನಡೆಯುತ್ತಲೇ ಇದೆ. ಈ ಬಗ್ಗೆ ಸ್ಟಾಲಿನ್ ವಿರುದ್ಧ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕಿಡಿ ಕಾರಿದ್ದಾರೆ.

ಹಿಂದಿ ಮಾತಾಡುವ ಕ್ಷೇತ್ರದ ಸಂಸದರಾಗಿ ಏನು ಹೇಳುತ್ತೀರಿ?; ರಾಹುಲ್ ಗಾಂಧಿಗೆ ಸಚಿವ ಅಶ್ವಿನಿ ವೈಷ್ಣವ್ ಪ್ರಶ್ನೆ
ಅಶ್ವಿನಿ ವೈಷ್ಣವ್

Updated on: Feb 27, 2025 | 8:01 PM

ನವದೆಹಲಿ: ತ್ರಿಭಾಷಾ ವಿವಾದದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. “ಹಿಂದಿ ಭಾಷೆಯನ್ನು ಬಲವಂತವಾಗಿ ಅಳವಡಿಸಿಕೊಳ್ಳುವುದರಿಂದ ಕೆಲವು ವರ್ಷಗಳಲ್ಲಿ 25 ಉತ್ತರ ಭಾರತದ ಭಾಷೆಗಳನ್ನು ಹಿಂದಿ ನುಂಗಿದೆ” ಎಂದು ಸಿಎಂ ಸ್ಟಾಲಿನ್ ಟ್ವೀಟ್ ಮಾಡಿದ್ದರು. “ಉತ್ತರ ಪ್ರದೇಶ ಮತ್ತು ಬಿಹಾರ ಎಂದಿಗೂ ಕೇವಲ ಹಿಂದಿ ಮಾತನಾಡುವ ರಾಜ್ಯಗಳಾಗಿರಲಿಲ್ಲ. ಅವರ ನಿಜವಾದ ಭಾಷೆಗಳು ಈಗ ಅವಶೇಷಗಳಾಗಿವೆ. ಆ ಭಾಷೆಗಳನ್ನು ಹಿಂದಿ ಆವರಿಸಿಕೊಂಡಿದೆ” ಎಂದು ಸ್ಟಾಲಿನ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸಮಾಜವನ್ನು ವಿಭಜಿಸುವ ಇಂತಹ ಪ್ರಯತ್ನಗಳಿಂದ ಉತ್ತಮ ಆಡಳಿತ ನಡೆಸಲು ಅಸಾಧ್ಯ.ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ವಿಷಯದ ಬಗ್ಗೆ ಏನು ಹೇಳುತ್ತಾರೆಂದು ತಿಳಿಯುವುದು ಆಸಕ್ತಿದಾಯಕವಾಗಿರುತ್ತದೆ. ಹಿಂದಿ ಮಾತನಾಡುವ ಸ್ಥಾನದ ಸಂಸದರಾಗಿ ರಾಹುಲ್ ಗಾಂಧಿ ಈ ಹಿಂದಿ ಹೇರಿಕೆಯ ಆರೋಪವನ್ನು ಒಪ್ಪುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಹಿಂದಿ ಹೇರಿಕೆ ವಿರೋಧಿಸಿ ಬಿಜೆಪಿಗೆ ರಾಜೀನಾಮೆ ನೀಡಿದ ತಮಿಳು ನಟಿ ವಿಜಯ್ ಅವರ ಟಿವಿಕೆಗೆ ಸೇರ್ಪಡೆ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ತ್ರಿಭಾಷಾ ನೀತಿಯ ಕುರಿತು ತಮಿಳುನಾಡಿನ ಡಿಎಂಕೆ ಸರ್ಕಾರ ಮತ್ತು ಕೇಂದ್ರದ ನಡುವೆ ಭಿನ್ನಾಭಿಪ್ರಾಯವಿದ್ದು, ಈ ಭಾಷಾ ಹೇರಿಕೆಯಲ್ಲಿ “ಹಿಂದಿ ಮುಖವಾಡ ಮತ್ತು ಸಂಸ್ಕೃತದ ಹೇರಿಕೆಯ ಗುಪ್ತ ಉದ್ದೇಶವಿದೆ” ಎಂದು ಸ್ಟಾಲಿನ್ ಆರೋಪಿಸಿದ್ದರು. ಭೋಜ್‌ಪುರಿ, ಮೈಥಿಲಿ, ಅವಧಿ, ಬ್ರಜ್, ಬುಂಡೇಲಿ, ಗರ್ವಾಲಿ, ಕುಮಾವೋನಿ, ಮಗಾಹಿ, ಮಾರ್ವಾರಿ, ಮಾಲ್ವಿ, ಛತ್ತೀಸ್‌ಗಢಿ, ಸಂಥಾಲಿ, ಅಂಗಿಕಾ, ಹೋ, ಖರಿಯಾ, ಖೋರ್ಥಾ, ಕುರ್ಮಾಲಿ, ಕುರುಖ್ ಮತ್ತು ಮುಂಡಾರಿ ಸೇರಿದಂತೆ ಈಗ ಉಳಿವಿಗಾಗಿ ಹೋರಾಡುತ್ತಿರುವ ಹಲವಾರು ಭಾಷೆಗಳನ್ನು ತಮಿಳುನಾಡು ಮುಖ್ಯಮಂತ್ರಿ ಪಟ್ಟಿ ಮಾಡಿದ್ದರು. ಇವುಗಳ ಮೇಲೆ ಹಿಂದಿಯನ್ನು ಹೇರಲಾಗಿದೆ ಎಂದು ಟೀಕಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:00 pm, Thu, 27 February 25