ಒಡಿಶಾದಲ್ಲಿ ಬೇಗ ಪೆಟ್ರೋಲಿಯಂ ಮೀಸಲು ಯೋಜನೆ ಪೂರ್ಣಗೊಳಿಸಲು ಸಚಿವ ಧರ್ಮೇಂದ್ರ ಪ್ರಧಾನ್ ಒತ್ತಾಯ

ಒಡಿಶಾದ ಚಾಂಡಿಖೋಲ್‌ನಲ್ಲಿ 4 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಪ್ರದೇಶವನ್ನು ನಿರ್ಮಿಸಲು ಸಂಪುಟ ನಿರ್ಧರಿಸಿತ್ತು. ಆದರೆ ಆ ಯೋಜನೆಯ ಅನುಷ್ಠಾನವು ಹಲವಾರು ಕಾರಣಗಳಿಂದ ವಿಳಂಬವಾಯಿತು. ಕಳೆದ ವರ್ಷ 2025ರಲ್ಲಿ ಕೇಂದ್ರ ಸಚಿವ ಹರ್ದೀಪ್ ಪುರಿ ಮತ್ತು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರ ನೇತೃತ್ವದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯಗತಗೊಳಿಸಲು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಒತ್ತಾಯಿಸಿದ್ದಾರೆ.

ಒಡಿಶಾದಲ್ಲಿ ಬೇಗ ಪೆಟ್ರೋಲಿಯಂ ಮೀಸಲು ಯೋಜನೆ ಪೂರ್ಣಗೊಳಿಸಲು ಸಚಿವ ಧರ್ಮೇಂದ್ರ ಪ್ರಧಾನ್ ಒತ್ತಾಯ
Dharmendra Pradhan
Image Credit source: ANI

Updated on: Mar 25, 2026 | 7:06 PM

ನವದೆಹಲಿ, ಮಾರ್ಚ್ 25: ಜಾಗತಿಕ ಅಸ್ಥಿರತೆ ಮತ್ತು ಮಧ್ಯಪ್ರಾಚ್ಯ ಸಂಘರ್ಷದ ನಡುವೆ ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಅಗತ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan), ಒಡಿಶಾದ ಜಾಜ್‌ಪುರ ಜಿಲ್ಲೆಯ ಚಾಂಡಿಖೋಲ್‌ನಲ್ಲಿ 4 ಮಿಲಿಯನ್ ಮೆಟ್ರಿಕ್ ಟನ್ (MMT) ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು (SPR) ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಕಾರ್ಯಗತಗೊಳಿಸಲು ಒತ್ತಾಯಿಸಿದ್ದಾರೆ.

ಒಡಿಶಾದ ಚಾಂಡಿಖೋಲ್‌ನಲ್ಲಿ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿರುವ ಪೆಟ್ರೋಲಿಯಂ ಮೀಸಲು ಪ್ರದೇಶವನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಎಎನ್​ಐ ಜೊತೆ ಮಾತನಾಡಿರುವ ಅವರು, “ನಾನು ಒಡಿಶಾದ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹರ್ದೀಪ್ ಪುರಿಯವರಿಗೆ ಪತ್ರ ಬರೆದಿದ್ದೇನೆ. ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ನಾವು ಶೀಘ್ರದಲ್ಲೇ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಪ್ರದೇಶವನ್ನು ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಿದರೆ ಅದು ದೇಶದ ಭದ್ರತೆಗಾಗಿ ದೇಶದ ತೈಲ ನಿಕ್ಷೇಪಗಳಲ್ಲಿ ಒಂದು ದೊಡ್ಡ ಹೆಜ್ಜೆಯಾಗಲಿದೆ” ಎಂದಿದ್ದಾರೆ.

ಇದನ್ನೂ ಓದಿ: ಎನ್‌ಇಪಿ ಮತ್ತು ಪಿಎಂಶ್ರೀ ಕುರಿತ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಸಚಿವ ಸಂಪುಟವು 2018ರ ಜೂನ್ 27ರಂದು ಚಾಂಡಿಖೋಲೆ SPR ಯೋಜನೆಯನ್ನು ಅನುಮೋದಿಸಿತ್ತು. ಆಗಿನ ರಾಜ್ಯ ನಾಯಕತ್ವದೊಂದಿಗೆ ಈ ಹಿಂದೆ ಮಾತುಕತೆ ನಡೆಸಿದ್ದರೂ ಅದರ ಅನುಷ್ಠಾನವು ಸ್ಥಗಿತಗೊಂಡಿತ್ತು ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.


2025ರ ಏಪ್ರಿಲ್ 8ರಂದು ನವದೆಹಲಿಯಲ್ಲಿ EPIKOL, ಒಡಿಶಾ ಸರ್ಕಾರ ಮತ್ತು ISPRL ನಡುವೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದಾಗ ಈ ಯೋಜನೆಯ ಪ್ರಗತಿ ಪುನರಾರಂಭವಾಯಿತು. ಸುಮಾರು 8,743 ಕೋಟಿ ರೂ. ಮೌಲ್ಯದ ಈ ಯೋಜನೆಯು ಭಾರತದ ಅತಿದೊಡ್ಡ ಭೂಗತ ಕಚ್ಚಾ ತೈಲ ನಿಕ್ಷೇಪವಾಗಲಿದೆ. ಇದು ನೇರವಾಗಿ ಮತ್ತು ಪರೋಕ್ಷವಾಗಿ 5,000ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:05 pm, Wed, 25 March 26

Follow Us