
ಲಕ್ನೋ, ಜುಲೈ 16: ಏಳು ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚಿಸಿದ್ದಳು ಎಂದರೆ ಆಕೆ ಎಷ್ಟೆಲ್ಲಾ ತೊಂದರೆಗಳನ್ನು ಎದುರಿಸಿರಬಹುದು. ಆಕೆಯ ಮೈಯಿಂದ ರಕ್ತ ತೊಟ್ಟಿಕ್ಕುತ್ತಿತ್ತು. ರೈಲ್ವೆ ಹಳಿಯಲ್ಲಿ ರೈಲು ಬರುವ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಲೇ ಇದ್ದಳು. ಆಕೆಗಿನ್ನೂ 7 ವರ್ಷ. ಈಗಷ್ಟೇ ಪ್ರಪಂಚ ಕಾಣುತ್ತಿರುವ ಮುಗ್ದ ಜೀವ. ಆಗಲೇ ಸಾಯಲು ನಿರ್ಧರಿಸಿದ್ದಳು. ತಂದೆ ವಿಪರೀತ ಹೊಡೆದಿದ್ದ, ಇಡೀ ಮೈಯೆಲ್ಲಾ ರಕ್ತವಾಗಿತ್ತು. ಕೂಡಲೇ ಅಲ್ಲಿ ಹೋಗುತ್ತಿರುವವರು ಯಾರೋ ಆಕೆಯನ್ನು ನೋಡಿ ಓಡಿ ಹೋಗಿ ರಕ್ಷಿಸಿದ್ದಾರೆ. ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ರೈಲಿಗೆ ತಲೆ ಕೊಟ್ಟು ಸಾಯೋಣವೆಂದೇ ಇಲ್ಲಿಗೆ ಬಂದಿದ್ದೇನೆ ಎಂದು ರೋಶ್ನಿ ತಿಳಿಸಿದಾಗ ಎಲ್ಲರೂ ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಆಕೆಯ ತಂದೆ ದಿನವೂ ಚಿತ್ರಹಿಂಸೆ ಕೊಡುತ್ತಿದ್ದ, ಶಾಲೆಗೂ ಕಳುಹಿಸುತ್ತಿರಲಿಲ್ಲ, ಮನೆ ಕೆಲಸಕ್ಕೆ ಹೋಗುವಂತೆ ಒತ್ತಾಯಿಸುತ್ತಿದ್ದ. ಮಹಡಿಯಿಂದ ಕೆಳಗೆ ತಳ್ಳಿದ್ದಾಗಿಯೂ ಆಕೆ ಅಳಲು ತೋಡಿಕೊಂಡಿದ್ದಾಳೆ.
ಹಾಗಾಗಿಯೇ ಆಕೆ ಸಾಯುವ ಆಲೋಚನೆ ಮಾಡಿರುವುದಾಗಿ ತಿಳಿಸಿದ್ದಾಳೆ, ರೋಶ್ನಿಯ ತಂದೆ ಸಂತೋಷ್ ರಜಪೂತ್ಗೆ ಈಗಾಗಲೇ ಐದು ಮಕ್ಕಳಿದ್ದು ಮತ್ತು ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲದ ಕಾರಣ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮತ್ತಷ್ಟು ಓದಿ: ನನ್ನ ಗಂಡನನ್ನು ಕೊಲೆ ಮಾಡದಿದ್ರೆ ಆತ್ಮಹತ್ಯೆ: ಪ್ರಿಯಕರನೊಂದಿಗಿನ ಮಹಿಳೆಯ ನೌಟಂಕಿ ಆಟ ಬಯಲು
ಇದೆಲ್ಲಾ ಘಟನೆ ಕೇಳಿದ ರೈತರೊಬ್ಬರು ರೋಶ್ನಿಯನ್ನು ದತ್ತು ಪಡೆಯುವ ನಿರ್ಧಾರ ಮಾಡಿದ್ದಾರೆ. ಅವರಿಗೆ ಈಗಾಗಲೇ ಒಬ್ಬ ಮಗನಿದ್ದು, ಹೆಣ್ಣು ಮಗು ಬೇಕೆಂದು ಬಯಸಿದ್ದರು. ಈಗ ಆ ಬಾಲಕಿಯನ್ನು ಶಾಲೆಗೆ ಸೇರಿಸಿದ್ದು, ಹೊಸ ಬಟ್ಟೆಗಳನ್ನು ಕೂಡ ಕೊಡಿಸಿದ್ದಾರೆ.
ಈ ನಿಟ್ಟಿನಲ್ಲಿ, ಕಾನೂನು ಪ್ರಕ್ರಿಯೆ ಇಲ್ಲದೆ ನೇರ ದತ್ತು ಸ್ವೀಕಾರವನ್ನು ತಪ್ಪಿಸಬೇಕು ಎಂದು ಪೊಲೀಸರು ಹೇಳಿದ್ದಾರೆ. ಆದ್ದರಿಂದ, ಹುಡುಗಿಯನ್ನು ಈಗ ಅವಳ ತಂದೆಗೆ ಹಿಂತಿರುಗಿಸಲಾಗಿದೆ. ಈ ಘಟನೆಯು ಮಕ್ಕಳ ರಕ್ಷಣೆಯ ವಿಷಯದ ಬಗ್ಗೆ ಸಮಾಜದಲ್ಲಿ ಮತ್ತೊಮ್ಮೆ ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕಿದೆ. 7 ನೇ ವಯಸ್ಸಿನಲ್ಲಿ ತನ್ನ ಜೀವನವನ್ನು ಕೊನೆಗೊಳಿಸಲು ಬಯಸುವ ಮಗುವಿನ ಮಾನಸಿಕ ಒತ್ತಡ ಮತ್ತು ಹೊರೆ ಪ್ರತಿಯೊಬ್ಬರನ್ನು ಆಳವಾಗಿ ಯೋಚಿಸುವಂತೆ ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Wed, 16 July 25