ಉತ್ತರಪ್ರದೇಶ: ಮಗುವನ್ನೆತ್ತಿಕೊಂಡಿದ್ದ ವ್ಯಕ್ತಿ ಮೇಲೆ ಲಾಠಿ ಪ್ರಹಾರ, ಸಂವೇದನೆಯಿಲ್ಲದೆ ವರ್ತಿಸಿದ ಪೊಲೀಸ್ ಅಮಾನತು

ಈ ವಿಡಿಯೊದಲ್ಲಿ ಮಗುವನ್ನು ನೋಯಿಸಬೇಡಿ ಎಂದು ವ್ಯಕ್ತಿ ಪೊಲೀಸರಿಗೆ ಮನವಿ ಮಾಡುವುದನ್ನು ಕೇಳಬಹುದು. "ಬಚ್ಚೆ ಕೊ ಲಗ್ ಜಾಯೇಗಿ (ಮಗುವಿಗೆ ಗಾಯವಾಗುತ್ತದೆ) ಎಂದು  ಆ ವ್ಯಕ್ತಿ ಪೊಲೀಸರಿಂದ ಓಡಿಹೋಗಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.

ಉತ್ತರಪ್ರದೇಶ: ಮಗುವನ್ನೆತ್ತಿಕೊಂಡಿದ್ದ ವ್ಯಕ್ತಿ ಮೇಲೆ ಲಾಠಿ ಪ್ರಹಾರ, ಸಂವೇದನೆಯಿಲ್ಲದೆ  ವರ್ತಿಸಿದ ಪೊಲೀಸ್ ಅಮಾನತು
ವ್ಯಕ್ತಿಗೆ ಥಳಿಸುತ್ತಿರುವ ಪೊಲೀಸ್ (ವಿಡಿಯೊ ಚಿತ್ರ)
Edited By: ರಶ್ಮಿ ಕಲ್ಲಕಟ್ಟ

Updated on: Dec 10, 2021 | 1:05 PM

ಲಖನೌ: ಉತ್ತರ ಪ್ರದೇಶದ (Uttar Pradesh) ಕಾನ್ಪುರ್ (Kanpur) ದೇಹತ್‌ನಲ್ಲಿ(Dehat) ಗುರುವಾರ ತನ್ನ ಮಗುವನ್ನುತೋಳಲ್ಲಿ ಎತ್ತಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಲಾಠಿಗಳಿಂದ ಪೊಲೀಸ್ ನಿರ್ದಯವಾಗಿ ಹೊಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಸಂವೇದನೆ ಇಲ್ಲದೆ ವರ್ತಿಸಿದ ಪೋಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ  ಪೊಲೀಸ್ (Uttar Pradesh police) ಇಲಾಖೆ ಹೇಳಿದೆ.  ಸುಮಾರು ಒಂದು ನಿಮಿಷದ ಅವಧಿಯ ವಿಡಿಯೊ ತುಣುಕಿನಲ್ಲಿ ಸ್ಥಳೀಯ ಪೋಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮೊದಲು ಆ ವ್ಯಕ್ತಿಯನ್ನು ಲಾಠಿಯಿಂದ ಥಳಿಸುತ್ತಿರುವುದು ಕಾಣಿಸುತ್ತದೆ. ನಂತರ, ಎರಡನೇ ಪೋಲೀಸ್ ಮಗು ಅಳುತ್ತಿರುವಾಗ ಸಂತ್ರಸ್ತನ ತೋಳುಗಳಿಂದ ಮಗುವನ್ನು ಹಿಡಿದೆಳೆಯಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಕಾನ್ಪುರ ದೇಹತ್‌ನ ಅಕ್ಬರ್‌ಪುರ ಪಟ್ಟಣದ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಈ ವಿಡಿಯೊದಲ್ಲಿ ಮಗುವನ್ನು ನೋಯಿಸಬೇಡಿ ಎಂದು ವ್ಯಕ್ತಿ ಪೊಲೀಸರಿಗೆ ಮನವಿ ಮಾಡುವುದನ್ನು ಕೇಳಬಹುದು. “ಬಚ್ಚೆ ಕೊ ಲಗ್ ಜಾಯೇಗಿ (ಮಗುವಿಗೆ ಗಾಯವಾಗುತ್ತದೆ) ಎಂದು  ಆ ವ್ಯಕ್ತಿ ಪೊಲೀಸರಿಂದ ಓಡಿಹೋಗಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಪೊಲೀಸರು ಅವನನ್ನು ಬೆನ್ನಟ್ಟುತ್ತಾರೆ ಮತ್ತು ಅವರಲ್ಲಿ ಕೆಲವರು ಮಗುವನ್ನು ಬಲವಂತವಾಗಿ ಅವನಿಂದ ಎಳೆಯಲು ಪ್ರಯತ್ನಿಸುತ್ತಾರೆ. ಆ ವ್ಯಕ್ತಿ “ಇಸ್ಕಾ ಮಾ ಭೀ ನಹೀ ಹೈಂ (ಮಗುವಿಗೆ ತಾಯಿ ಇಲ್ಲ)” ಎಂದು ಹೇಳುತ್ತಿರುವುದು ವಿಡಿಯೊದಲ್ಲಿದೆ.

ಪೊಲೀಸರ ವರ್ತನೆಯನ್ನು ಸಮರ್ಥಿಸಿಕೊಂಡ ಕಾನ್ಪುರ ದೇಹತ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಲೈಟ್ ಫೋರ್ಸ್’ ಅನ್ನು ಬಳಸಲಾಯಿತು. ಪೊಲೀಸರು ಮಗುವನ್ನು ರಕ್ಷಿಸಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ.

ಕೆಲವು ಜನರು ಈ ಪ್ರದೇಶದಲ್ಲಿ ಕಾನೂನುಬಾಹಿರ ಕಾರ್ಯವನ್ನು ಮಾಡುತ್ತಿದ್ದಾರೆ.ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು (ಒಪಿಡಿ) ಮುಚ್ಚಿ ರೋಗಿಗಳನ್ನು ಹೆದರಿಸುತ್ತಿದ್ದಾರೆ, ”ಎಂದು ಕಾನ್ಪುರ್ ದೇಹತ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಚೌರಾಸಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆ ವ್ಯಕ್ತಿಯ ಸಹೋದರ, ಮುಖ್ಯ ಪ್ರಚೋದಕ, ಕಾನ್ಪುರ ದೇಹತ್‌ನ ಅಕ್ಬರ್‌ಪುರದ ಜಿಲ್ಲಾ ಆಸ್ಪತ್ರೆಯ ಉದ್ಯೋಗಿ. ಆತ ಪೊಲೀಸ್ ಇನ್‌ಸ್ಪೆಕ್ಟರ್‌ನ ಕೈಯನ್ನು ಕಚ್ಚಿದ್ದು ಉಪದ್ರವ ಮಾಡುತ್ತಿರುತ್ತಾರೆ. ಸಂತ್ರಸ್ತ ಕೂಡ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಚೌರಾಸಿಯಾ ಹೇಳಿದ್ದಾರೆ.

ಆದಾಗ್ಯೂ, ಈ ಪ್ರದೇಶದ  ಉಪ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಸಿಂಗ್ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಪೊಲೀಸರು ಅತಿಯಾಗಿ ಬಲಪ್ರಯೋಗ ಮಾಡಿದ್ದಾರೆ ಎಂದು ಮೊದಲು ಒಪ್ಪಿಕೊಂಡರು.


ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ಮತ್ತು ಪೊಲೀಸರ ಪ್ರತಿಕ್ರಿಯೆಯ ನಂತರ, ಕಾನ್ಪುರ ದೇಹತ್ ಪೊಲೀಸ್ ಟ್ವಿಟರ್ ಹ್ಯಾಂಡಲ್​​​ನಲ್ಲಿ ಘಟನೆ ಬಗ್ಗೆ  ತನಿಖೆಗೆ ಆದೇಶಿಸಲಾಗಿದೆ ಮತ್ತು ಸಂಬಂಧಪಟ್ಟ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಟ್ವೀಟ್ ಮಾಡಲಾಗಿದೆ. ಇಂದು ಬೆಳಿಗ್ಗೆ, ಅಧಿಕೃತ ಹ್ಯಾಂಡಲ್‌ನಿಂದ ಮಾಡಲಾದ ಮತ್ತೊಂದು ಪೋಸ್ಟ್ ನಲ್ಲಿ, “ಘಟನೆಯನ್ನು ನಿಯಂತ್ರಿಸುವಾಗ, ಪೊಲೀಸರು ಅಸೂಕ್ಷ್ಮತೆಯನ್ನು ತೋರಿಸಿದರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಹೇಳಿದೆ.

“ಪ್ರತಿಯೊಬ್ಬ ನಾಗರಿಕನ ಘನತೆಯನ್ನು ಗೌರವಿಸುವಂತೆ ಪುನರಾವರ್ತಿತ ಸೂಚನೆಗಳ ಹೊರತಾಗಿಯೂ ಪೊಲೀಸ್ ಸಿಬ್ಬಂದಿಯ ಇಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ” ಎಂದು ಯುಪಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಕೆಲ ಪ್ರತಿಭಟನಾಕಾರರು ಜಿಲ್ಲಾ ಆಸ್ಪತ್ರೆಯ ಒಪಿಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಮುಖ್ಯ ವೈದ್ಯಕೀಯ ಅಧೀಕ್ಷಕರ ಕೋರಿಕೆಯ ಮೇರೆಗೆ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಹೋದಾಗ ಪೊಲೀಸರ ಮೇಲೆ ದಾಳಿ ನಡೆಸಲಾಯಿತು.ನಂತರ ಸೌಮ್ಯವಾದ ಬಲ ಪ್ರಯೋಗ ನಡೆಯಿತು.  ಇದು ಪೊಲೀಸರ ಸಂವೇದನಾಶೀಲತೆಗೆ ಯಾವುದೇ ಸಮರ್ಥನೆಯಲ್ಲ ಎಂದು ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ.


ವ್ಯಾಪಕವಾಗಿ ಶೇರ್ ಆಗಿರುವ ವಿಡಿಯೊ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದವರಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಸೇರಿದ್ದಾರೆ. ಸದೃಢ ಕಾನೂನು ಸುವ್ಯವಸ್ಥೆ ವ್ಯವಸ್ಥೆಯಲ್ಲಿ ದುರ್ಬಲ ವ್ಯಕ್ತಿಗೆ ನ್ಯಾಯ ಸಿಗುತ್ತದೆ. ನ್ಯಾಯ ಕೇಳುವವನು ಈ ರೀತಿಯ ಅನಾಗರಿಕತೆಯನ್ನು ಎದುರಿಸಬೇಕಿಲ್ಲ. ಇದು ನೋವಿನ ಸಂಗತಿ. ಭಯಭೀತ ಸಮಾಜವು ಕಾನೂನು ಸುವ್ಯವಸ್ಥೆಗೆ ಉದಾಹರಣೆಯಲ್ಲ,  ಪ್ರಬಲ ಕಾನೂನು ಮತ್ತು ಸುವ್ಯವಸ್ಥೆಯ ವ್ಯವಸ್ಥೆಯು ಕಾನೂನಿಗೆ ಹೆದರುತ್ತದೆಯೇ ಹೊರತು ಪೊಲೀಸರಲ್ಲ ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:  ನಾನೇನು ತಿನ್ನಬೇಕು ಎಂಬುದನ್ನು ನೀವು ಹೇಗೆ ನಿರ್ಧರಿಸುತ್ತೀರಿ?: ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್​​ಗೆ ಹೈಕೋರ್ಟ್ ತರಾಟೆ

Web contact

TV9 Kannada

Read More
Follow Us