ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಸಂಭವಿಸಿದ ಹಾನಿಯ ನಷ್ಟ ವಸೂಲಿ ಆದೇಶಕ್ಕೆ ಉತ್ತರ ಪ್ರದೇಶ ಹೈಕೋರ್ಟ್ ತಡೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಯೀದ್ ಸೈಫ್ ಅಬ್ಬಾಸ್ ನಖ್ವಿ ಎಂಬವರಿಗೆ ಉತ್ತರ ಪ್ರದೇಶ ಸರ್ಕಾರ ರಿಕವರಿ ನೋಟಿಸ್ ಕಳುಹಿಸಿತ್ತು.

ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಸಂಭವಿಸಿದ ಹಾನಿಯ ನಷ್ಟ ವಸೂಲಿ ಆದೇಶಕ್ಕೆ ಉತ್ತರ ಪ್ರದೇಶ ಹೈಕೋರ್ಟ್ ತಡೆ
ಯೋಗಿ ಆದಿತ್ಯನಾಥ

Updated on: Dec 04, 2020 | 6:49 PM

ಲಖನೌ:  ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಉತ್ತರ ಪ್ರದೇಶದಲ್ಲುಂಟಾದ ಹಾನಿಗೆ ಪ್ರತಿಭಟನಕಾರರರಿಂದಲೇ ನಷ್ಟ ವಸೂಲಿ ಮಾಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಯೀದ್ ಸೈಫ್ ಅಬ್ಬಾಸ್ ನಖ್ವಿ ಎಂಬವರಿಗೆ ಉತ್ತರ ಪ್ರದೇಶ ಸರ್ಕಾರ ನಷ್ಟ ಭರ್ತಿ ವಸೂಲಿ ಮಾಡಲಿರುವ ನೋಟಿಸ್ ಕಳುಹಿಸಿತ್ತು.

ಆದಾಗ್ಯೂ, ಅಲಹಾಬಾದ್ ಹೈಕೋರ್ಟ್ ವಿಭಾಗೀಯ ಪೀಠದ ಅಲೋಕ್ ಸಿಂಗ್ ಮತ್ತು ಕರುಣೇಶ್ ಸಿಂಗ್ ಪವಾರ್ ಅವರು ಮುಂದಿನ ವಿಚಾರಣೆಯ ವರೆಗೆ ನಖ್ವಿ ಅವರಿಂದ ಯಾವುದೇ ರೀತಿಯ ದಂಡ ವಸೂಲಿ ಮಾಡಬಾರದು ಎಂದು ಸರ್ಕಾರಕ್ಕೆ ಆದೇಶಿಸಿದೆ.

ನ್ಯಾಯಾಲಯವು ರಾಜ್ಯ ಸರ್ಕಾರದ ನ್ಯಾಯವಾದಿಗಳಿಗೆ ಅಫಿಡವಿಟ್ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಅದೇ ವೇಳೆ ಪೂರಕ ಅರ್ಜಿ ಸಲ್ಲಿಸಲು ಸಯ್ಯದ್ ಸೈಫ್ ಅಬ್ಬಾಸ್ ನಖ್ವಿ ಅವರಿಗೆ ಎರಡು ವಾರಗಳ ಸಮಯ ನೀಡಿದೆ. ಈ ಅವಧಿಯಲ್ಲಿ ನಖ್ವಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರ ಮತ್ತು ಇತರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ₹ 67 ಲಕ್ಷ ಮೌಲ್ಯದ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಸರ್ಕಾರವು ಮಾರ್ಚ್ 3 ರಂದು ಘೋಷಿಸಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿಯಲ್ಲಿ ನಿಗದಿಪಡಿಸಿದೆ.

ಒಟ್ಟು 57 ಪ್ರತಿಭಟನಾಕಾರರ ವಿರುದ್ಧ ನಾಲ್ಕು ರಿಕವರಿ ನೋಟಿಸ್ ಕಳುಹಿಸಿದ್ದು ಇವರು ₹1.55 ಕೋಟಿ ಮೌಲ್ಯದ ಆಸ್ತಿಗೆ ಹಾನಿಯುಂಟುಮಾಡಿದ್ದಾರೆ ಎಂದು ಸರ್ಕಾರ ಆರೋಪಿಸಿತ್ತು.

Loading...
Unable to load recommendations.
Follow Us