ವಿಜಯ್​ಗೆ ಸಿಗಲಿದೆಯಾ ವಿಸಿಕೆ ಬೆಂಬಲ; ಸುಳಿವು ನೀಡಿದ ಎಐಎಡಿಎಂಕೆ ನಾಯಕ ಪಳನಿಸ್ವಾಮಿ

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, ತಮಿಳುನಾಡು ವಿಕ್ಟರಿ ಪಾರ್ಟಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಇನ್ನೂ ಕಷ್ಟಪಡುತ್ತಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು 118 ಸ್ಥಾನಗಳು ಬೇಕಾಗುತ್ತವೆ. ತಮಿಳುನಾಡು ವಿಕ್ಟರಿ ಪಾರ್ಟಿ (ಟಿವಿಕೆ) ನಾಯಕ ವಿಜಯ್ ಈಗಾಗಲೇ ಈ ನಿಟ್ಟಿನಲ್ಲಿ ತಮಿಳುನಾಡು ರಾಜ್ಯಪಾಲರನ್ನು 3 ಬಾರಿ ಭೇಟಿಯಾಗಿ ಸರ್ಕಾರ ರಚಿಸಲು ಆಹ್ವಾನಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಬಹುಮತದ ಕೊರತೆಯಿಂದಾಗಿ ಸರ್ಕಾರ ರಚಿಸಲು ಆಹ್ವಾನಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಹೇಳಿದ್ದರು.

ವಿಜಯ್​ಗೆ ಸಿಗಲಿದೆಯಾ ವಿಸಿಕೆ ಬೆಂಬಲ; ಸುಳಿವು ನೀಡಿದ ಎಐಎಡಿಎಂಕೆ ನಾಯಕ ಪಳನಿಸ್ವಾಮಿ
Vck Chief Thirumavalavan

Updated on: May 09, 2026 | 2:58 PM

ಚೆನ್ನೈ, ಮೇ 9: ತಮಿಳುನಾಡಿನಲ್ಲಿ ವಿಜಯ್ (Vijay) ನೇತೃತ್ವದ ಟಿವಿಕೆಗೆ ಈಗಾಗಲೇ ಕಾಂಗ್ರೆಸ್, ಸಿಪಿಐ, ಸಿಪಿಎಂ ಪಕ್ಷ ಬೆಂಬಲ ಘೋಷಿಸಿರುವುದರಿಂದ 116 ಶಾಸಕರು ವಿಜಯ್ ಕಡೆಗಿದ್ದಾರೆ. ಆದರೆ, ಬಹುಮತಕ್ಕೆ ಇನ್ನೂ 2 ಸ್ಥಾನಗಳ ಅಗತ್ಯವಿದೆ. ಇದೀಗ ವಿಸಿಕೆ ತನ್ನ ಬೆಂಬಲ ನೀಡುತ್ತದೆಯೇ? ಇಲ್ಲವೇ? ಎಂಬುದು ಇಂದು ಸಂಜೆಯೊಳಗೆ ಗೊತ್ತಾಗಲಿದೆ. ಇಂದು ಸಂಜೆ 4 ಗಂಟೆಯ ಬಳಿಕ ತಮ್ಮ ಬೆಂಬಲ ಯಾವ ಪಕ್ಷಕ್ಕೆ ಎಂಬುದನ್ನು ಘೋಷಿಸುವುದಾಗಿ ವಿಸಿಕೆ ತಿಳಿಸಿದೆ. ಹೀಗಾಗಿ, ಇಂದು ಸಂಜೆಯೊಳಗೆ ತಮಿಳುನಾಡಿನ ಸರ್ಕಾರ ರಚನೆಯ ಬಿಕ್ಕಟ್ಟು ಬಗೆಹರಿಯುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ವಿಸಿಕೆ ಇಂದು ಸಂಜೆ ಟಿವಿಕೆಗೆ ಬೆಂಬಲ ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಈ ಬಗ್ಗೆ ಸುಳಿವು ನೀಡಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸುವ ಪಕ್ಷಕ್ಕೆ ನನ್ನ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ವಿಜಯ್ ಅವರಿಗೆ ಬಹುಮತ ಸಿಕ್ಕಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ತಮಿಳುನಾಡಿನ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷವು ಡಿಎಂಕೆ ಮೈತ್ರಿಕೂಟವನ್ನು ತೊರೆದು ತಮಿಳುನಾಡು ವಿಕ್ಟರಿ ಪಾರ್ಟಿಯನ್ನು ಸೇರಿಕೊಂಡಿತು. ಈ ವಿಧಾನಸಭಾ ಚುನಾವಣೆಯಲ್ಲಿ ಮಾತ್ರವಲ್ಲದೆ ಸಂಸತ್ತಿನ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಅದು ಮೈತ್ರಿಕೂಟದಲ್ಲಿ ಮುಂದುವರಿಯುತ್ತದೆ ಎಂದು ವರದಿಯಾಗಿದೆ. ಇದರ ನಂತರ, ತಮಿಳುನಾಡು ವಿಕ್ಟರಿ ಪಾರ್ಟಿಗೆ ಬೆಂಬಲ 112ಕ್ಕೆ ಏರಿತು.

ಇದನ್ನೂ ಓದಿ: ಶಾಸಕರ ನಕಲಿ ಬೆಂಬಲದ ಪತ್ರ ನೀಡಿದ್ದಕ್ಕೆ ಟಿವಿಕೆ ನಾಯಕ ವಿಜಯ್ ವಿರುದ್ಧ ದೂರು ದಾಖಲು

ಅದರ ನಂತರ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ವಾದಿ (ಸಿಪಿಐಎಂ) ಪಕ್ಷಗಳು ಹೊರಗಿನಿಂದ ತಮ್ಮ ಬೆಂಬಲವನ್ನು ಘೋಷಿಸಿದ್ದವು. ಆದ್ದರಿಂದ, ತಮಿಳುನಾಡು ವಿಕ್ಟರಿ ಪಾರ್ಟಿಗೆ 116 ಶಾಸಕರ ಬೆಂಬಲವಿದೆ. ಇದನ್ನು ನಿರ್ಧರಿಸುವ ಪ್ರಮುಖ ಪಕ್ಷವೆಂದರೆ ವಿಸಿಕೆಯಾಗಿದೆ.

ವಿಸಿಕೆ ನಾಯಕ ತಿರುಮಾವಲವನ್ ನಿನ್ನೆ ಈ ಕುರಿತು ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು, “ಆಡಳಿತದಲ್ಲಿ ಪಾಲು, ಅಧಿಕಾರದಲ್ಲಿ ಪಾಲು; ಈಗ ನಮ್ಮ ಸಮಯ” ಎಂದು ಹೇಳಿದ್ದರು. ಇದಾದ ನಂತರ ತಿರುಮಾವಲವನ್ ಇದ್ದಕ್ಕಿದ್ದಂತೆ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರನ್ನು ವೈಯಕ್ತಿಕವಾಗಿ ಭೇಟಿಯಾದರು.

ಇದನ್ನೂ ಓದಿ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ ನಾಯಕ ದಿನಕರನ್

ವಿಸಿಕೆ ಇದೀಗ ಟಿವಿಕೆ ಜೊತೆ ಮೈತ್ರಿಕೂಟ ರಚಿಸುವ ಅಥವಾ ಬೆಂಬಲ ನೀಡುವ ಬಗ್ಗೆ ಇಂದು ಸಂಜೆ ಘೋಷಣೆ ಮಾಡಲಾಗುವುದು ಎಂದು ಹೇಳಿದೆ. ವಿಸಿಕೆ ಮುಖ್ಯಸ್ಥ ತಿರುಮಾವಲವನ್ ಶನಿವಾರ ಸಂಜೆ ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಅಧಿಕೃತವಾಗಿ ನಿಲುವು ಪ್ರಕಟಿಸಲಿದ್ದಾರೆ. ತಿರುಮಾವಲವನ್ ಸಂಜೆ 4 ಗಂಟೆಗೆ ಘೋಷಣೆ ಮಾಡಲಿದ್ದಾರೆ ಎಂದು ವಿಸಿಕೆ ವಕ್ತಾರ ಕೆ.ಕೆ ಪವಲನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us