Video: ವೃಂದಾವನದ ಇಸ್ಕಾನ್ ದೇವಾಲಯದ ಹೊರಗೆ ಕೂಲರ್ನಲ್ಲಿದ್ದ ಯಮರಾಜ, ಸ್ಪರ್ಶಿಸುತ್ತಿದ್ದಂತೆ ವಿದ್ಯುತ್ ಪ್ರವಹಿಸಿ ಯುವಕ ಸಾವು
ವೃಂದಾವನದ ಇಸ್ಕಾನ್ ದೇವಾಲಯದ ಹೊರಗೆ ಅಳವಡಿಸಿದ್ದ ದೋಷಪೂರಿತ ಕೂಲರ್ನಿಂದ ವಿದ್ಯುತ್ ಪ್ರವಹಿಸಿ 21 ವರ್ಷದ ಯುವಕ ಸಾವನ್ನಪ್ಪಿದ್ದಾರೆ. ಯಾತ್ರಾ ಸ್ಥಳಕ್ಕೆ ಬಂದಿದ್ದ ಅಭಿಗ್ಯಾನ್ ಗುಪ್ತಾ ಎಂಬಾತ ಅಚಾನಕ್ ಆಗಿ ಕೂಲರ್ ಮುಟ್ಟಿದಾಗ ಈ ದುರ್ಘಟನೆ ಸಂಭವಿಸಿದೆ. ನಗರಸಭೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವೃಂದಾವನ, ಜೂನ್ 17: ಉತ್ತರ ಪ್ರದೇಶದ ಪವಿತ್ರ ಯಾತ್ರಾ ಸ್ಥಳವಾದ ವೃಂದಾವನದ ಇಸ್ಕಾನ್(Iskcon) ದೇವಾಲಯದ ದ್ವಾರದ ಬಳಿ ಪುರಸಭೆಯ ಬೇಜಾವ್ದಾರಿತನಕ್ಕೆ 21 ವರ್ಷದ ಯುವಕ ಬಲಿಯಾಗಿದ್ದಾರೆ. ದೇವಸ್ಥಾನದ ಹೊರಗೆ ಅಳವಡಿಸಲಾಗಿದ್ದ ಕೂಲರ್ ಮುಟ್ಟಿದ್ದಕ್ಕೆ ಅದರಿಂದ ವಿದ್ಯುತ್ ಪ್ರವಹಿಸಿ ಕೂಡಲೇ ಯುವಕ ಸಾವನ್ನಪ್ಪಿದ್ದಾರೆ.
ಮಧ್ಯಪ್ರದೇಶದ ಛತ್ತರ್ಪುರ ನಿವಾಸಿಯಾದ ಅಭಿಗ್ಯಾನ್ ಗುಪ್ತಾ ಎಂಬ ಯುವಕ ಸೋಮವಾರ ಬೆಳಗ್ಗೆ ತನ್ನ ತಂದೆ ಅಮಿತ್ ಕುಮಾರ್ ಗುಪ್ತಾ ಅವರೊಂದಿಗೆ ವೃಂದಾವನ ದರ್ಶನಕ್ಕೆ ಬಂದಿದ್ದರು. ಬೆಳಗ್ಗೆ 10.30 ರ ಸುಮಾರಿಗೆ ಇಸ್ಕಾನ್ ದೇವಾಲಯದ ಶೂ ಸ್ಟ್ಯಾಂಡ್ ಬಳಿ ಅವರಿಬ್ಬರೂ ತಮ್ಮ ಪಾದರಕ್ಷೆಗಳನ್ನು ಬಿಚ್ಚುತ್ತಿದ್ದರು.
ಈ ವೇಳೆ ತೀವ್ರ ಬೇಸಿಗೆಯ ಶಾಖದಿಂದ ಭಕ್ತರಿಗೆ ತಂಪು ನೀಡಲು ನಗರಸಭೆ ಅಲ್ಲಿ ಇರಿಸಿದ್ದ ಶವರ್ ಕೂಲರ್ ಯಂತ್ರವನ್ನು ಅಭಿಗ್ಯಾನ್ ಆಕಸ್ಮಿಕವಾಗಿ ಮುಟ್ಟಿದ್ದಾರೆ. ಆ ಕೂಲರ್ನಲ್ಲಿ ತಾಂತ್ರಿಕ ದೋಷವಿದ್ದ ಕಾರಣ ಕೂಡಲೇ ವಿದ್ಯುತ್ ಪ್ರವಹಿಸಿದೆ.
ಅಭಿಗ್ಯಾನ್ ದೇಹದ ಮೂಲಕ ಕರೆಂಟ್ ಹರಿದ ತಕ್ಷಣ ಆತ ಜೋರಾಗಿ ಕಿರುಚಿಕೊಂಡಿದ್ದಾರೆ. ಮಗನ ಕೂಗು ಕೇಳಿ ತಂದೆ ಅಮಿತ್ ಕುಮಾರ್ ಆತನನ್ನು ರಕ್ಷಿಸಲು ಧಾವಿಸಿ ಹಿಂದಕ್ಕೆ ಎಳೆಯಲು ಯತ್ನಿಸಿದರಾದರೂ, ವಿದ್ಯುತ್ ಆಘಾತದ ತೀವ್ರತೆಗೆ ತಂದೆಯೇ ದೂರ ಹೋಗಿ ಬಿದ್ದಿದ್ದಾರೆ. ಯುವಕ ಕೂಲರ್ಗೆ ಸಿಲುಕಿ ಒದ್ದಾಡಿದ್ದಾರೆ.
ಮತ್ತಷ್ಟು ಓದಿ: ಚಾಮರಾಜನಗರದಲ್ಲೊಂದು ಹೃದಯ ವಿದ್ರಾವಕ ಘಟನೆ: ಗ್ರೈಂಡರ್ನಿಂದ ವಿದ್ಯುತ್ ಪ್ರವಹಿಸಿ 4 ವರ್ಷದ ಬಾಲಕಿ ಸಾವು
ನಂತರ ಸ್ಥಳೀಯರು ಹಾಗೂ ಇತರ ಭಕ್ತರು ಒಟ್ಟಾಗಿ ಆತನನ್ನು ಯಂತ್ರದಿಂದ ಬೇರ್ಪಡಿಸಿ ತಕ್ಷಣವೇ ಜಿಲ್ಲಾ ಜಂಟಿ ಆಸ್ಪತ್ರೆಗೆ ಸಾಗಿಸಿದರಾದರೂ, ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.
ಎದ್ದೇಳು ಮಗನೇ, ನಿನ್ನ ಅಪ್ಪ ಬಂದಿದ್ದೀನಿ, ಆಸ್ಪತ್ರೆಯಲ್ಲಿ ತಂದೆಯ ಆಕ್ರಂದನ ಆಸ್ಪತ್ರೆಯೊಳಗೆ ನಡೆದ ದೃಶ್ಯಗಳು ಅಲ್ಲಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿದವು. ತನ್ನ ಏಕೈಕ ಮಗ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ತಂದೆ ಅಮಿತ್ ಕುಮಾರ್ ಸಿದ್ಧರಿರಲಿಲ್ಲ. ಮಗನ ಶವವನ್ನು ಅಪ್ಪಿಕೊಂಡು ಪದೇ ಪದೇ, ಏಳು ಮಗಾ ನಿನ್ನ ಸಅಪ್ಪ ಕರೀತಿದೀನಿ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ವಿಡಿಯೋ:
A 21-year-old youth died of electrocution while trying to fill water from a faulty cooler. Absolutely horrible. pic.twitter.com/TPxHyv57oA
— 🚨Indian Gems (@IndianGems_) June 17, 2026
ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶ ಮಳೆಗಾಲದ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ವಿದ್ಯುತ್ ಉಪಕರಣಗಳ ಸರಿಯಾದ ನಿರ್ವಹಣೆ ಮಾಡದ ಮುನ್ಸಿಪಲ್ ಕಾರ್ಪೊರೇಷನ್ (ಪುರಸಭೆ) ಅಧಿಕಾರಿಗಳ ಬೇಜವಾಬ್ದಾರಿತನವೇ ಈ ಸಾವಿಗೆ ನೇರ ಕಾರಣ ಎಂದು ಸ್ಥಳೀಯರು ಮತ್ತು ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




