ಅಯೋಧ್ಯೆಯ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ವೇಳೆ ಅಭಿಷೇಕಕ್ಕೆ ಪಾಕಿಸ್ತಾನದ ಹಿಂಗ್ಲಾಜ್ ಶಕ್ತಿಪೀಠದ ನೀರು!

ಹಿಂಗ್ಲಾಜ್ ಮಾತಾ ದೇವಾಲಯವು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಹಿಂಗ್ಲಾಜ್‌ನಲ್ಲಿ ಹಿಂಗೋಲ್ ನದಿಯ ದಡದಲ್ಲಿರುವ ಹಿಂದೂ ದೇವಾಲಯವಾಗಿದೆ. ಇದು ಹಿಂದೂ ದೇವತೆ ಸತಿಗೆ ಸಮರ್ಪಿತವಾಗಿರುವ ಐವತ್ತೊಂದು ಶಕ್ತಿಪೀಠಗಳಲ್ಲಿ ಒಂದಾಗಿದೆ.

ಅಯೋಧ್ಯೆಯ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ವೇಳೆ ಅಭಿಷೇಕಕ್ಕೆ ಪಾಕಿಸ್ತಾನದ ಹಿಂಗ್ಲಾಜ್ ಶಕ್ತಿಪೀಠದ ನೀರು!
ಪಾಕಿಸ್ತಾನದ ಹಿಂಗ್ಲಾಜ್ ಶಕ್ತಿಪೀಠ (ಟಿವಿ9 ಸಂಗ್ರಹ ಚಿತ್ರ)

Updated on: Jan 20, 2024 | 11:15 AM

ಅಯೋಧ್ಯೆ, ಜನವರಿ 20: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಬಾಲ ರಾಮ ಮೂರ್ತಿಯ (Ram Lalla Idol) ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮ ಲಲ್ಲಾನಿಗೆ ಅಭಿಷೇಕಕ್ಕಾಗಿ ದೇಶದ ಪ್ರಮುಖ ಪವಿತ್ರ ನದಿಗಳ ನೀರನ್ನು ಅಯೋಧ್ಯೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಈ ಮಧ್ಯೆ, ಪಾಕಿಸ್ತಾನದಿಂದ (Pakistan) ಹಿಂಗ್ಲಾಜ್ ಶಕ್ತಿಪೀಠದ (Hinglaj Mata mandir) ನೀರು ಕೂಡ ಅಯೋಧ್ಯೆ ತಲುಪಲಿದ್ದು, ಅಭಿಷೇಕಕ್ಕೆ ಬಳಕೆಯಾಗಲಿದೆ. ಸದ್ಯ ಅಯೋಧ್ಯೆಯ ತಾತ್ಕಾಲಿಕ ಗುಡಿಯಲ್ಲಿ ರಾಮ ಲಲ್ಲಾ ದರ್ಶನ ಸ್ಥಗಿತಗೊಳಿಸಲಾಗಿದೆ. ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠೆಯ ಬಳಿಕ ಜನವರಿ 23 ರಿಂದ ಹೊಸ ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ರಾಮ ಲಲ್ಲಾ ಮುಕ್ತವಾಗಲಿದ್ದಾನೆ.

ಇಂದು (ಜನವರಿ 20) ವಾಸ್ತು ಶಾಂತಿಯ ನಂತರ ರಾಮ ಲಾಲ್ಲಾ ಮೂರ್ತಿ ಸಿಂಹಾಸನಾರೂಢವಾಗಲಿದೆ. ಇದಕ್ಕೂ ಮುನ್ನ ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳಾದ ಶಕ್ರಧಿವಾಸ, ಫಲಾಧಿವಾಸ ನಡೆದಿದ್ದು, ಸಂಜೆ ಪುಷ್ಪಧಿವಾಸ ನಡೆಯಲಿದೆ. ಜತೆಗೆ ಪಾಕಿಸ್ತಾನದ ಶಕ್ತಿಪೀಠದಿಂದ ಅಯೋಧ್ಯೆಗೆ ನೀರು ತಲುಪಲಿದೆ.

ಹಿಂಗ್ಲಾಜ್ ಶಕ್ತಿಪೀಠದ ಮಹತ್ವ ಏನು?

ಹಿಂಗ್ಲಾಜ್ ಮಾತಾ ದೇವಾಲಯವು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಹಿಂಗ್ಲಾಜ್‌ನಲ್ಲಿ ಹಿಂಗೋಲ್ ನದಿಯ ದಡದಲ್ಲಿರುವ ಹಿಂದೂ ದೇವಾಲಯವಾಗಿದೆ. ಇದು ಹಿಂದೂ ದೇವತೆ ಸತಿಗೆ ಸಮರ್ಪಿತವಾಗಿರುವ ಐವತ್ತೊಂದು ಶಕ್ತಿಪೀಠಗಳಲ್ಲಿ ಒಂದಾಗಿದೆ. ಇಲ್ಲಿ ದೇವಿಯನ್ನು ಹಿಂಗ್ಲಾಜ್ ದೇವಿ ಅಥವಾ ಹಿಂಗುಲಾ ದೇವಿ ಎಂದೂ ಕರೆಯುತ್ತಾರೆ. ಈ ದೇವಾಲಯವನ್ನು ನಾನಿ ದೇವಾಲಯ ಎಂದೂ ಕರೆಯಲಾಗುತ್ತಿತ್ತು. ಕಳೆದ ಮೂರು ದಶಕಗಳಲ್ಲಿ ಈ ಸ್ಥಳವು ಅಪಾರ ಜನಪ್ರಿಯತೆಯನ್ನು ಗಳಿಸಿದೆ ಮತ್ತು ಪಾಕಿಸ್ತಾನದ ಅನೇಕ ಹಿಂದೂ ಸಮುದಾಯಗಳಲ್ಲಿ ನಂಬಿಕೆಯ ಕೇಂದ್ರವಾಗಿದೆ.

ಹಿಂಗ್ಲಾಜ್ ಮಾತೆಯು ದೋಡಿಯಾ ರಜಪೂತ್ ಕುಟುಂಬದವರ ದೇವತೆ ಎಂದೂ ಕೆಲವು ಜಾನಪದ ಕಥೆಗಳಲ್ಲಿ ಉಲ್ಲೇಖವಾಗಿದೆ. ಮತ್ತೊಂದು ನಂಬಿಕೆಯ ಪ್ರಕಾರ, ಶಿವನು ಸತಿಯ ಅವಶೇಷಗಳೊಂದಿಗೆ ಮೂರು ಲೋಕಗಳನ್ನು ಸುತ್ತುತ್ತಿದ್ದಾಗ ವಿಷ್ಣುವು ಸತಿಯ ದೇಹವನ್ನು 51 ಭಾಗಗಳಾಗಿ ತುಂಡರಿಸಿದ್ದ. ಆಗ ಸತಿಯ ದೇಹದ ಭಾಗಗಳು ಬಿದ್ದ ವಿವಿಧ ಪ್ರದೇಶಗಳನ್ನು ಶಕ್ತಿ ಪೀಠ ಎಂದು ಕರೆಯಲಾಯಿತು. ಅವುಗಳಲ್ಲಿ ಹಿಂಗ್ಲಾಜ್ ಮಾತೆಯ ಪೀಠವೂ ಒಂದಾಗಿದೆ.

ಇದನ್ನೂ ಓದಿ: ವೈರಲ್ ಆಗುತ್ತಿರುವ ರಾಮ ಲಲ್ಲಾ ಮೂರ್ತಿ ನಿಜವಾದುದಲ್ಲ: ಅಯೋಧ್ಯೆಯ ಅರ್ಚಕ ಸತ್ಯೇಂದ್ರ ದಾಸ್ ಸ್ಪಷ್ಟೀಕರಣ

ಹಿಂಗ್ಲಾಜ್ ಮಾತೆಯು ಎಲ್ಲಾ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿಶಾಲಿ ದೇವತೆ ಎಂದು ನಂಬಲಾಗಿದೆ. ಸ್ಥಳೀಯ ಕೆಲವು ಮುಸ್ಲಿಮರು ಕೂಡ ಹಿಂಗ್ಲಾಜ್ ಮಾತೆಯನ್ನು ನಂಬುವವರಾಗಿದ್ದು, ದೇಗುಲವನ್ನು ರಕ್ಷಣೆ ಮಾಡುತ್ತಾರೆ ಎಂದು ಕೆಲವು ಮೂಲಗಳು ಹೇಳಿವೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us