Intense Cold Wave: ಇಂದಿನಿಂದ 3 ದಿನ ದೆಹಲಿಯಲ್ಲಿ ಶೀತಮಾರುತ: ಬೆಂಗಳೂರಿನಲ್ಲೂ ಕುಸಿದ ಉಷ್ಣಾಂಶ

ಜನವರಿ 17-18ರಂದು ಚಳಿ ಮತ್ತು ತೀವ್ರ ಚಳಿಯ ವಾತಾವರಣ ಇರಲಿದೆ. ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ಮತ್ತು ದೆಹಲಿ ರಾಜ್ಯಗಳಲ್ಲಿ ಚಳಿಯು ಹೆಚ್ಚಾಗಲಿದೆ.

Intense Cold Wave: ಇಂದಿನಿಂದ 3 ದಿನ ದೆಹಲಿಯಲ್ಲಿ ಶೀತಮಾರುತ: ಬೆಂಗಳೂರಿನಲ್ಲೂ ಕುಸಿದ ಉಷ್ಣಾಂಶ
ದೆಹಲಿಯಲ್ಲಿ ಚಳಿ ಹೆಚ್ಚಾಗಿದೆ.
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 16, 2023 | 8:21 AM

ದೆಹಲಿ: ರಾಜಧಾನಿ ದೆಹಲಿಯಲ್ಲಿ ನಿರೀಕ್ಷೆಯಂತೆಯೇ ತೀವ್ರ ಶೀತ ಮಾರುತಗಳು (Cold Waves) ಬೀಸುತ್ತಿದ್ದು, ಸೋಮವಾರದಿಂದ ಬುಧವಾರದವರೆಗೆ ಚಳಿ ಹೆಚ್ಚಾಗಲಿದೆ (Intense Cold). ಈ ಅವಧಿಯಲ್ಲಿ ಕನಿಷ್ಠ ಉಷ್ಣಾಂಶವು ಸುಮಾರು 3 ಡಿಗ್ರಿ ಸೆಲ್ಸಿಯಸ್​ಗೆ ಕುಸಿಯಲಿದೆ ಎಂದು ಹವಾಮಾನ ಇಲಾಖೆ (Meteorological Department) ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಜನವರಿ 5ರಿಂದ 9ರವರೆಗೆ ದೆಹಲಿಯಲ್ಲಿ ತೀವ್ರ ಚಳಿ ಅನುಭವಕ್ಕೆ ಬಂದಿತ್ತು. ಇದೀ ಈ ದಶಕದಲ್ಲಿ ತೀವ್ರ ಚಳಿ ಇದ್ದ 2ನೇ ದೀರ್ಘ ಅವಧಿ ಇದಾಗಿದೆ. ದೆಹಲಿಯಲ್ಲಿ ಈ ವರ್ಷದ ಚಳಿಗಾಲದಲ್ಲಿ 50 ಗಂಟೆಗಳ ಸುದೀರ್ಘ ಅವಧಿಗೆ ದಟ್ಟ ಮಂಜು ಕವಿದಿತ್ತು. ಇದು 2019ರ ನಂತರದ ಅತಿ ದೀರ್ಘ ಅವಧಿಯ ಮಂಜು ಆವರಿಸಿದ್ದ ಅವಧಿಯಾಗಿದೆ. ರಾತ್ರಿ ಮತ್ತು ನಸುಕಿನ ಅವಧಿಯಲ್ಲಿ ದಟ್ಟ ಮತ್ತು ಅತಿದಟ್ಟ ಮಂಜು ಕವಿಯುವುದು ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ಸಹಜ ವಿದ್ಯಮಾನವಾಗಿದೆ.

ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್, ರೈಲು ಸಂಚಾರದ ಮೇಲೆ ಹವಾಮಾನ ವೈಪರಿತ್ಯವು ಪ್ರಭಾವಬೀರಿದೆ. ರಸ್ತೆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಸಹ ನಿಧಾನಗತಿಯಲ್ಲಿ ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ವಾಯವ್ಯ ಮತ್ತು ಮಧ್ಯ ಭಾರತದ ವಿವಿಧೆಡೆ ಕನಿಷ್ಠ ತಾಪಮಾನವು ಇನ್ನೂ 2 ಡಿಗ್ರಿಗಳಷ್ಟು ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಜನವರಿ 17-18ರಂದು ಚಳಿ ಮತ್ತು ತೀವ್ರ ಚಳಿಯ ವಾತಾವರಣ ಇರಲಿದೆ. ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ಮತ್ತು ದೆಹಲಿ ರಾಜ್ಯಗಳಲ್ಲಿ ಚಳಿಯು ಹೆಚ್ಚಾಗಲಿದೆ.

ಹಲವು ಪದರಗಳು ಇರುವ ಸಡಿಲ ಬಟ್ಟೆಗಳನ್ನು ಧರಿಸಬೇಕು. ಉಣ್ಣೆಯ ಬಟ್ಟೆಗೆ ಆದ್ಯತೆ ಕೊಡಬೇಕು. ಬಟ್ಟೆಗಳು ತಲೆ, ಕುತ್ತಿಗೆ, ಕೈ ಮತ್ತು ಮುಂಗಾಲುಗಳನ್ನು ಮುಚ್ಚುವಂತಿರಬೇಕು ಎಂದು ಹವಾಮಾನ ಇಲಾಖೆ ಸಲಹೆ ಮಾಡಿದೆ. ಹೀಟರ್ ಬಳಸುವ ಮನೆಗಳಲ್ಲಿ ವೆಂಟಿಲೇಶನ್ ಕಡ್ಡಾಯವಾಗಿ ಇರಬೇಕು. ಇಲ್ಲದಿದ್ದರೆ ವಿಷದ ಗಾಳಿಯಿಂದ ಆರೋಗ್ಯ ಹದಗೆಡುವ ಅಪಾಯ ಇರುತ್ತದೆ. ಮನೆಯ ಒಳಗೇ ಇರಲು ಆದ್ಯತೆ ಕೊಡಬೇಕು. ಹೊರಾಂಗಣ ಚಟುವಟಿಕೆಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು ಎಂದು ಹವಾಮಾನ ಇಲಾಖೆ ಹೇಳಿದೆ.

ಜನವರಿ 18ರಿಂದ 20ರ ಅವಧಿಯಲ್ಲಿ ಕನಿಷ್ಠ ತಾಪಮಾನವು 3ರಿಂದ 5 ಡಿಗ್ರಿಗಳಷ್ಟು ಹೆಚ್ಚಾಗಬಹುದು. ಮಧ್ಯಪ್ರಾಚ್ಯ ಪ್ರದೇಶಗಳಿಂದ ಬಿಸಿ ತೇವ ಹೊತ್ತ ಮಾರುತಗಳು ಭಾರತದತ್ತ ಬೀಸುವ ನಿರೀಕ್ಷೆಯಿದ್ದು, ನಂತರದ ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಹವಾಮಾನ ಇಲಾಖೆಯು ಅಭಿಪ್ರಾಯಪಟ್ಟಿದೆ.

ಬೆಂಗಳೂರಿನಲ್ಲಿ ಕುಸಿದ ಉಷ್ಣಾಂಶ, ವಾಯು ಗುಣಮಟ್ಟ

ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆ ಉಷ್ಣಾಂಶ ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ಬಾಗಲಕೋಟೆ, ವಿಜಯಪುರದಲ್ಲಿ ಭಾರೀ ಚಳಿ ಶುರುವಾಗಿದೆ. ಶೀತ ಮಾರುತಗಳು ಅಪ್ಪಳಿಸುವುದರಿಂದ ಈ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಶೀತ ಗಾಳಿ ಬೀಸಲಾರಂಭಿಸಿದೆ. ಇದರಿಂದ ಕರ್ನಾಟಕದಲ್ಲಿ ಚಳಿ ವಿಪರೀತ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನವು 12 ಡಿಗ್ರಿ ದಾಖಲಾಗಿದೆ. ದಟ್ಟ ಮಂಜು ಆವರಿಸುತ್ತಿರುವುದರಿಂದ ಗಾಳಿಯ ಸಹಜ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ಗಾಳಿಯ ಗುಣಮಟ್ಟ ‘ಕಳಪೆ’ (ಪೂರ್) ಸ್ಥಾನಕ್ಕೆ ಕುಸಿದಿದೆ. ಉಸಿರಾಟದ ಸಮಸ್ಯೆಯಿರುವವರು ಮನೆಗಳಿಂದ ಹೊರಗೆ ಬರದಿರುವುದು ಒಳಿತು.

ಚಳಿಗಾಳಿಯಿಂದಾಗಿ ಆರೋಗ್ಯ ಸಮಸ್ಯೆಗಳಾದ ಮೂಗು ಸೋರುವಿಕೆ, ಅಸ್ತಮಾ, ಜ್ವರದ ಲಕ್ಷಣಗಳು ಮತ್ತು ಚರ್ಮದ ತುರಿಕೆ ಹೆಚ್ಚಾಗಬಹುದು. ಶಿಶುಗಳು, ಗರ್ಭಿಣಿಯರು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರು ಮುಂತಾದವರಿಗೆ ಹೆಚ್ಚಿನ ಸಮಸ್ಯೆ ಉಂಟಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Coldwave in Mysuru: ಮೈಸೂರಿನಲ್ಲಿ ಭಾರೀ ಚಳಿ ಇಬ್ಬನಿ, ಮೈಕೊರೆಯುವ ಚಳಿಗೆ ಕಂಗಾಲಾದ ಮೈಸೂರಿಗರು

ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 am, Mon, 16 January 23