Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾರದ ಭ್ರಷ್ಟಾಚಾರ ಪ್ರಕರಣ: ಸಿಬಿಐನಿಂದ ನಾಲ್ವರು ಟಿಎಮ್​ಸಿ ನಾಯಕರ ಬಂಧನ

ನಾರದ ಸುದ್ದಿಸಂಸ್ಥೆಯ ಸಂಸ್ಥಾಪಕರಾದ ಮ್ಯಾಥ್ಯೂ ಸ್ಯಾಮುವೇಲ್ ಅವರು ಈ ಸ್ಟಿಂಗ್ ಆಪರೇಷನ್​ ಅನ್ನು ಪಶ್ಚಿಮ ಬಂಗಾಳದಲ್ಲಿ ತೆಹೆಲ್ಕಾ ಪತ್ರಿಕೆಗಾಗಿ ಎರಡು ವರ್ಷಗಳ ಕಾಲ ಮಾಡಿದ್ದರು ಮತ್ತು ಅದನ್ನು 2016 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಗಿಂತ ಮೊದಲು ಖಾಸಗಿ ಸಂಸ್ಥೆಯಾಗಿರುವ ನಾರದ ವೆಬ್​ಸೈಟ್​ ಮೂಲಕ ಪ್ರಕಾಶಿಸಲಾಗಿತ್ತು.

ನಾರದ ಭ್ರಷ್ಟಾಚಾರ ಪ್ರಕರಣ: ಸಿಬಿಐನಿಂದ ನಾಲ್ವರು ಟಿಎಮ್​ಸಿ ನಾಯಕರ ಬಂಧನ
ಬಂಧಿತ ಟಿಎಮ್​ಸಿ ನಾಯಕರು
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ರಾಜೇಶ್ ದುಗ್ಗುಮನೆ

Updated on: May 17, 2021 | 7:13 PM

ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರದಂದು ಪಶ್ಚಿಮ ಬಂಗಾಳದ ಇಬ್ಬರು ಸಚಿವರು, ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕರಾದ ಮದನ್ ಮಿತ್ರಾ ಮತ್ತು ಕೊಲ್ಕತ್ತಾದ ಮಾಜಿ ಮೇಯರ್ ಸೋವನ್ ಚಟ್ಟೋಪಾಧ್ಯಾಯ ಅವರನ್ನು ನಾರದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದೆ. ರಾಜ್ಯಪಾಲರಾದ ಜಗದೀಪ್ ಧನ್ಕರ್ ಅವರು ಬಂಧಿತ ನಾಲ್ವರ ವಿರುದ್ಧ ಸಿಬಿಐಗೆ ಚಾರ್ಜ್​ಶೀಟ್​ ದಾಖಲಿಸಲು ಮತ್ತು ಅವರ ವಿರುದ್ಧ ಮಾಡಲಾಗಿರುವ ಆರೋಪಗಳ ತನಿಖೆ ನಡೆಸಲು ಅನುಮತಿ ನೀಡಿದ ಕೆಲ ದಿನಗಳ ನಂತರ ನಾಲ್ವರನ್ನು ಬಂಧಿಸಲಾಗಿದೆ. ನಾರದ ಕುಟುಕು ಕಾರ್ಯಾಚರಣೆ ನಡೆದಾಗ ಈ ನಾಲ್ವರು ಮಮತಾ ಬ್ಯಾನರ್ಜಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು ಮತ್ತು ಅವರ ಲಂಚ ಸ್ವೀಕರಿಸಿದ್ದು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿತ್ತು. ಸದರಿ ಟೇಪುಗಳನ್ನು 2016ರ ವಿಧಾನಸಭಾ ಚುನಾವಣೆಗ ಮುಂಚೆ ಬಿಡುಗಡೆ ಮಾಡಲಾಗಿತ್ತು. 2017ರಲ್ಲಿ ಕಲ್ಕತ್ತಾ ಉಚ್ಛ ನ್ಯಾಯಾಲಯವು ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿತ್ತು.

ನಾರದ ಸುದ್ದಿಸಂಸ್ಥೆಯ ಸಂಸ್ಥಾಪಕರಾದ ಮ್ಯಾಥ್ಯೂ ಸ್ಯಾಮುವೇಲ್ ಅವರು ಈ ಸ್ಟಿಂಗ್ ಆಪರೇಷನ್​ ಅನ್ನು ಪಶ್ಚಿಮ ಬಂಗಾಳದಲ್ಲಿ ತೆಹೆಲ್ಕಾ ಪತ್ರಿಕೆಗಾಗಿ ಎರಡು ವರ್ಷಗಳ ಕಾಲ ಮಾಡಿದ್ದರು ಮತ್ತು ಅದನ್ನು 2016 ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಗಿಂತ ಮೊದಲು ಖಾಸಗಿ ಸಂಸ್ಥೆಯಾಗಿರುವ ನಾರದ ವೆಬ್​ಸೈಟ್​ ಮೂಲಕ ಪ್ರಕಾಶಿಸಲಾಗಿತ್ತು. ಸ್ಯಾಮುವೇಲ್ ಅವರು ತೆಹೆಲ್ಕಾ ಪತ್ರಿಕೆಯ ಮಾಜಿ ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ.

ಏನಿದು ನಾರದ ಭ್ರಷ್ಟಾಚಾರ ಪ್ರಕರಣ?

ಈ ಪ್ರಶ್ನೆ ಎಲ್ಲ ಓದುಗರ ತಲೆಯಲ್ಲಿ ಮನೆ ಮಾಡಿರಬಹುದು. ಈ ಕುಟುಕು ಕಾರ್ಯಾಚರಣೆಯ ಅಂಗವಾಗಿ ಸ್ಯಾಮುವೇಲ್, ಇಂಪೆಕ್ಸ್ ಕನ್ಸಲ್ಟನ್ಸಿ ಸಲ್ಯೂಶನ್ಸ್ ಹೆಸರಿನಲ್ಲಿ ಒಂದು ಕಾಲ್ಪನಿಕ ಸಂಸ್ಥೆಯನ್ನು ರಚಿಸಿ ಸಹಾಯಕ್ಕಾಗಿ ಟಿಎಮ್​ಸಿ ಪಕ್ಷದ ಸಚಿವರು, ಲೋಕಸಭಾ ಸದಸ್ಯರು ಮತ್ತು ಪಕ್ಷದ ನಾಯಕರನ್ನು ಭೇಟಿಯಾದರು ಮತ್ತು ಅವರ ಮಾಡುವ ಸಹಾಯಕ್ಕೆ ಹಣ ನೀಡುವುದಾಗಿ ಹೇಳಿದ್ದರು.

ಸ್ಯಾಮುವೇಲ್ ಮತ್ತು ಅವರ ಸಹೋದ್ಯೋಗಿ ಏಂಜೆಲ್ ಅಬ್ರಹಾಂ ಅವರು ಚಿತ್ರೀಕರಿಸಿರುವ 52-ಗಂಟೆ ಅವಧಿಯ ಫುಟೇಜ್​ನಲ್ಲಿ, ಆಗಿನ ಟಿಎಮ್​ಸಿ ಎಂಪಿಗಳಾದ ಮುಕುಲ್ ರಾಯ್, ಸೌಗತಾ ರಾಯ್, ಕಕೋಲಿ ಘೋಷ್ ದಸ್ತಿದಾರ್, ಪ್ರಸೂನ್ ಬ್ಯಾನರ್ಜಿ, ಸುವೇಂದು ಅಧಿಕಾರಿ, ಅಪರೂಪ ಪೊದ್ದಾರ್ ಮತ್ತು ಸುಲ್ತಾನ್ ಅಹ್ಮದ್ (2017ರಲ್ಲಿ ನಿಧನ ಹೊಂದಿದರು), ಹಾಗೂ ಬಂಗಾಳದಲ್ಲಿ ಸಚಿವರಾಗಿದ್ದ ಮದನ ಮಿತ್ರಾ, ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್ ಮತ್ತು ಇಕ್ಬಾಲ್ ಅಹ್ಮದ್ ಅವರೆಲ್ಲ ಇಂಪೆಕ್ಸ್ ಕನ್ಸಲ್ಟನ್ಸಿ ಸಲ್ಯೂಶನ್ಸ್ ಕಂಪನಿಗೆ ಅನಧಿಕೃತವಾಗಿ ಸಹಾಯ ಮಾಡಿ ಲಂಚದ ರೂಪದಲ್ಲಿ ಕಂತೆ ಕಂತೆ ಹಣ ಪಡೆಯುತ್ತಿರುವುದು ಕಂಡುಬಂದಿತ್ತು.

Mathew Samuel

ಮ್ಯಾಥ್ಯೂ ಸ್ಯಾಮುವೇಲ್

ಈಗ ವಜಾಗೊಂಡಿರುವ ಐಪಿಎಸ್ ಹೆಚ್​ ಎಮ್ ಎಸ್​ ಮಿರ್ಜಾ ಅವರು ಸಹ ಸ್ಯಾಮುವೇಲ್ ಅವರಿಂದ ಹಣ ಸ್ವೀಕರಿಸುತ್ತಿರುವುದು ಫುಟೇಜ್​ನಲ್ಲಿ ದಾಖಲಾಗಿದೆ, ಟಿಎಮ್​ಸಿ ನಾಯಕ ಶಂಕು ದೇಬ್ ಪಂಡಾ ಸಹ ಕಂಪನಿಯ ಶೇರುಗಳಿಗೆ ಯಾಚಿಸುತ್ತಿರುವುದು ಮತ್ತು ಅದರ ಬದಲಿಗೆ ಸಹಾಯ ಮಾಡುವ ಭರವಸೆ ನೀಡುತ್ತಿರುವುದು ಕೂಡ ಫುಟೇಜ್​ನಲ್ಲಿದೆ.

ಈಗ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಮುಕುಲ್ ರಾಯ್ ಅವರು ಹಣ ಪಡಯುತ್ತಿರುವುದು ಫುಟೇಜ್​ನಲ್ಲಿ ಇಲ್ಲವಾದರೂ ಸ್ಯಾಮುವೇಲ್ ಅವರು ವಾಗ್ದಾನ ಮಾಡಿದ ಹಣದೊಂದಿಗೆ ತಮ್ಮ ಪಕ್ಷದ ಕಚೇರಿಗೆ ಬರಲು ಹೇಳಿರುವುದು ವಿಡಿಯೋನಲ್ಲಿ ದಾಖಲಾಗಿದೆ. ಸುವೇಂದು ಅಧಿಕಾರಿ ಈಗ ಬಿಜೆಪಿ ನಾಯಕಾರಾಗಿದ್ದು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸೋವನ್ ಚಟರ್ಜಿ ಅವರು 2019ರಲ್ಲೇ ಬಿಜೆಪಿ ಪಕ್ಷ ಸೇರಿದರಾದರೂ ಈ ಬಾರಿಯ ಚುನಾವಣೆಯಲ್ಲಿ ತಮಗೆ ಟಿಕೆಟ್​ ನೀಡದ ಕಾರಣ ಪಕ್ಷವನ್ನ ತೊರೆದರು. ಪಂಡಾ ಸಹ ಈಗ ಬಿಜೆಪಿ ಪಕ್ಷದಲ್ಲಿದ್ದಾರೆ.

ಟಿಎಮ್​ಸಿಯ ರಾಜ್ಯಸಭಾ ಸದಸ್ಯ ಮತ್ತು ತೆಹೆಲ್ಕಾ ಸಂಸ್ಥೆಯಲ್ಲಿ ಸಿಂಹಪಾಲು ಹೊಂದಿರುವ ಕೆ ಡಿ ಸಿಂಗ್ ಅವರಿಗೆ ಈ ಕುಟುಕು ಕಾರ್ಯಾಚರಣೆ ಬಗ್ಗೆ ಮಾಹಿತಿಯಿತ್ತು ಮತ್ತು ಅವರೇ ಇಡೀ ಕಾರ್ಯಾಚರಣೆಯ ಖರ್ಚು ಹೊತ್ತರು ಎಂದು ಸ್ಯಾಮುವೇಲ್ ಹೇಳಿದ್ದಾರೆ. ಸದರಿ ಕಾರ್ಯಾಚರಣೆಗೆ ಮೊದಲು 25 ಲಕ್ಷ ರೂಪಾಯಿಗಳ ಬಜೆಟ್​ ನಿಗದಿಗೊಳಿಸಲಾಗಿತ್ತಾದರೂ ನಂತರ ಅದನ್ನು 80 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿಲಾಯಿತು ಎಂದು ಅವರು ಹೇಳಿದ್ದಾರೆ. ಆದರೆ, ಈ ಸ್ಟಿಂಗ್ ಆಪರೇಷನ್​ನಲ್ಲಿ ತಾನು ಭಾಗಿಯಾಗಿರುವ ಅಂಶವನ್ನು ಸಿಂಗ್ ಅಲ್ಲಗಳೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನದೇ ಆದ ತನಿಖೆ ಆರಂಭಿಸಿದ ಪಶ್ಚಿಮ ಬಂಗಾಳ ಸರ್ಕಾರವು ಸ್ಯಾಮುವೇಲ್ ಅವರ ವಿರುದ್ಧವೇ ಐಪಿಸಿ 469 (ಫೋರ್ಜರಿ ಮತ್ತು ಹೆಸರಿಗೆ ಕಳಂಕ ತರುವುದು), 500 (ಮಾನಹಾನಿ), 120 (ಬಿ) (ಕ್ರಿಮಿನಲ್ ಕುತಂತ್ರ) ಮುಂತಾದ ಹಲವಾರು ಕೇಸುಗಳನ್ನು ದಾಖಲಿಸಿತು. ಆಗಸ್ಟ್ 5, 2016ರಲ್ಲಿ ಈ ರಾಜ್ಯ ಸರ್ಕಾರ ನಡೆಸುತ್ತಿದ್ದ ತನಿಖೆಯನ್ನು ಶಾಶ್ವತವಾಗಿ ನಿಲ್ಲಿಸಿದ ಹೈಕೋರ್ಟ್, ತನಿಖೆಯು ಕೋರ್ಟಿನ ಸುಪರ್ದಿಯಲ್ಲಿ ನಡೆಯುತ್ತಿರುಬೇಕಾದರೆ, ಅದರ ಜೊತೆಗೆ ಪೋಲಿಸ್ ತನಿಖೆ ನಡೆಸುವ ಅಗತ್ಯವಿಲ್ಲವೆಂದು ಹೇಳಿತು.

ಮಾರ್ಚ್ 17, 2017 ರಂದು ಕಲ್ಕತ್ತಾ ಹೈಕೋರ್ಟ್​ ಸದರಿ ಪ್ರಕರಣದ ಪ್ರಾಥಮಿಕ ತನಿಖೆಯನ್ನು ನಡೆಸುವಂತೆ ಸಿಬಿಐಗೆ ಆದೇಶಿಸಿತು. ಅಗತ್ಯಬಿದ್ದಲ್ಲಿ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆಯೂ ಹೈಕೋರ್ಟ್​ ಸೂಚಿಸಿತು. ಮಾರ್ಚ್ 18, 2017ರಂದು ರಾಜ್ಯ ಸರ್ಕಾರವು ಎಸ್ ಎಮ್​ ಹೆಚ್​ ಮಿರ್ಜಾ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿತು. ಏಪ್ರಿಲ್ 16, 2017 ರಂದು ಸಿಬಿಐ 12 ಟಿಎಮ್​ಸಿ ನಾಯಕರ ವಿರುದ್ಧ ಕ್ರಿಮಿನಲ್ ಕುತಂತ್ರ ಆರೋಪದಡಿಯಲ್ಲಿ ಎಫ್​ಐಆರ್​ಗಳನ್ನು ದಾಖಲಿಸಿ ಆರೋಪಿತರಿಗೆ ಬುಲಾವ್ ನೀಡಿ ತನಿಖೆಯಲ್ಲಿ ಸಹಕರಿಸುವಂತೆ ಹೇಳಿತು. ಅವರೆಲ್ಲರ ವಿರುದ್ಧ ಐಪಿಸಿ 120 (ಬಿ) (ಕ್ರಿಮಿನಲ್ ಕುತಂತ್ರ) ಸೆಕ್ಷನ್ 13 (2), 13 (1ಡಿ) ಮತ್ತು ಭ್ರಷ್ಟಾಚಾರ-ನಿಗ್ರಹ ಕಾಯ್ದೆ ಸೆಕ್ಷನ್ 7 ಅಡಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಯಿತು.

ಜಾರಿ ನಿರ್ದೇಶನಾಲಯವೂ ಈ ಪ್ರಕರಣದಲ್ಲಿ ಒಂದು ಪರ್ಯಾಯ ತನಿಖೆಯನ್ನು ನಡೆಸುತ್ತಿದೆ. ಭ್ರಷ್ಟಾಚಾರ-ನಿಗ್ರಹ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಹಣದ ದುರುಪಯೋಗದ ಕೇಸನ್ನು ಅರೋಪಿತರ ವಿರುದ್ಧ ದಾಖಲಿಸಿ, ಎಲ್ಲ ಆರೋಪಿಗಳಿಗೆ ಮತ್ತು ಖುದ್ದು ಸ್ಯಾಮುವೇಲ್​ ವಿರುದ್ಧ ಹಲವಾರು ಸಮನ್ಸ್​ಗಳನ್ನು ಜಾರಿ ಮಾಡಿತು.

ಈ ಸ್ಟಿಂಗ್ ಆಪರೇಷನ್​ನಲ್ಲಿ ಸಂಸತ್ ಸದಸ್ಯರೂ ಭಾಗಿಯಾಗಿದ್ದರಿಂದ ಲೋಕಸಭೆಯು ನೈತಿಕ ಸಮಿತಿಯೊಂದನ್ನು ರಚಿಸಿ ತನಿಖೆ ನಡೆಸವಂತೆ ಹೇಳಿ ಯಾವುದಾದರೂ ಸದಸ್ಯನಿಂದ ಹಕ್ಕಿನ ಉಲ್ಲಂಘನೆಯಾಗಿದೆಯೇ ಎನ್ನುವುದನ್ನು ಪರಿಶೀಲಿಸುವಂತೆ ಹೇಳಿತು. ಸಮಿತಿಯನ್ನು ರಚಿಸಿದ ನಂತರ ಅದು ಒಮ್ಮೆ ಮಾತ್ರ ಸಭೆ ಸೇರಿತು.

ಮೇ 9 ರಂದಯ ಸಿಬಿಐನ ವಿನಂತಿಯ ಮೇರೆಗೆ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ,ಮದನ್ ಮಿತ್ರಾ ಮತ್ತು ಸೋವನ್ ಚಟ್ಟೋಪಾಧ್ಯಾಯ ವಿರುದ್ಧ ಚಾರ್ಜ್​ಶೀಟ್​ ದಾಖಲಿಸಲು ಮತ್ತು ಅವರ ವಿರುದ್ಧ ಮಾಡಲಾಗಿರುವ ಆರೋಪಗಳ ತನಿಖೆ ನಡೆಸಲು ಅನುಮತಿ ನೀಡಿದರು.

ಇದನ್ನೂ ಓದಿ: West Bengal Assembly Elections 2021: ಪಶ್ಚಿಮ ಬಂಗಾಳದಲ್ಲಿ ದಲಿತರು ಪ್ರಾಬಲ್ಯವಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು 38 ಸೀಟು

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ