ಪಶ್ಚಿಮ ಬಂಗಾಳದಲ್ಲಿ ಸ್ವಚ್ಛತಾ ಕ್ರಾಂತಿ; ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ, ಉಗುಳಿದರೆ ಸೆ. 1ರಿಂದ ಭಾರಿ ದಂಡ!

ಪಶ್ಚಿಮ ಬಂಗಾಳ ಸರ್ಕಾರವು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಮತ್ತು ಕಠಿಣ ನಿರ್ಧಾರವೊಂದನ್ನು ಕೈಗೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಮತ್ತು ಉಗುಳುವ ಅಭ್ಯಾಸಕ್ಕೆ ಬ್ರೇಕ್ ಹಾಕಲು ಸೆಪ್ಟೆಂಬರ್ 1ರಿಂದ ಭಾರಿ ದಂಡ ವಿಧಿಸುವ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಆಗಸ್ಟ್ ವರೆಗೆ 3 ತಿಂಗಳ ಜಾಗೃತಿ ಅಭಿಯಾನದ ನಂತರ ಪಶ್ಚಿಮ ಬಂಗಾಳವು ಸೆಪ್ಟೆಂಬರ್ 1ರಿಂದ ತನ್ನ ಪುರಸಭೆ ಕಾಯ್ದೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ, ಉಗುಳುವವರಿಗೆ 100 ರೂ.ನಿಂದ 5,000 ರೂ.ವರೆಗೆ ದಂಡವನ್ನು ಜಾರಿಗೊಳಿಸಲಿದೆ.

ಪಶ್ಚಿಮ ಬಂಗಾಳದಲ್ಲಿ ಸ್ವಚ್ಛತಾ ಕ್ರಾಂತಿ; ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ, ಉಗುಳಿದರೆ ಸೆ. 1ರಿಂದ ಭಾರಿ ದಂಡ!
Suvendu Adhikari
Image Credit source: PTI

Updated on: Jun 19, 2026 | 11:20 PM

ಕೊಲ್ಕತ್ತಾ, ಜೂನ್ 19: ಕೊಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದಾದ್ಯಂತ ಸಾರ್ವಜನಿಕ ಸ್ಥಳಗಳನ್ನು ಸುಂದರ ಹಾಗೂ ಸ್ವಚ್ಛವಾಗಿಡುವ ಉದ್ದೇಶದಿಂದ ಸುವೇಂದು ಅಧಿಕಾರಿ (Suvendu Adhikari) ನೇತೃತ್ವದ ಬಿಜೆಪಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಬರುವ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ರಸ್ತೆ, ಪಾರ್ಕ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವ ಮತ್ತು ಉಗುಳುವ ಸಾರ್ವಜನಿಕರಿಗೆ ಭಾರಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಪಶ್ಚಿಮ ಬಂಗಾಳದ ಪ್ರಮುಖ ನಗರಗಳು ಮತ್ತು ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವುದು, ಗುಟ್ಕಾ-ಪಾನ್ ತಿಂದು ಗೋಡೆ ಹಾಗೂ ರಸ್ತೆಗಳ ಮೇಲೆ ಉಗುಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಜೊತೆಗೆ ನಗರಗಳ ಸೌಂದರ್ಯವೂ ಹಾಳಾಗುತ್ತಿದೆ. ಹಲವು ಬಾರಿ ಜಾಗೃತಿ ಮೂಡಿಸಿದರೂ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ, ಈಗ ದಂಡದ ಅಸ್ತ್ರವನ್ನು ಬಳಸಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪಶ್ಚಿಮ ಬಂಗಾಳದ ಚುನಾವಣೆ ತಯಾರಿ ಬಗ್ಗೆ ಪ್ರಲ್ಹಾದ್ ಜೋಶಿ ಮಾತು

ಸೆಪ್ಟೆಂಬರ್ 1ರಿಂದ ರಸ್ತೆಗಳು, ಫುಟ್​ಪಾತ್, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಉದ್ಯಾನವನಗಳಲ್ಲಿ ಕಸ ಎಸೆಯುವುದು ಅಥವಾ ಉಗುಳುವುದು ಕಂಡುಬಂದರೆ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಸ್ಥಳದಲ್ಲೇ ದಂಡ ವಿಧಿಸಲಿದ್ದಾರೆ. ಪ್ರಮುಖ ರಸ್ತೆಗಳು ಮತ್ತು ಜಂಕ್ಷನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗುವುದು. ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ದಂಡದ ನೋಟಿಸ್ ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಮೊದಲ ಬಾರಿಗೆ ತಪ್ಪು ಮಾಡಿದಾಗ ನಿಗದಿಪಡಿಸಿದ ದಂಡದ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ. ಅದೇ ವ್ಯಕ್ತಿ ಪದೇ ಪದೇ ನಿಯಮ ಉಲ್ಲಂಘಿಸಿದರೆ ದಂಡದ ಮೊತ್ತವನ್ನು ದುಪ್ಪಟ್ಟುಗೊಳಿಸಲಾಗುತ್ತದೆ. ಈ ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (KMC) ಸೇರಿದಂತೆ ರಾಜ್ಯದ ಎಲ್ಲಾ ಮುನ್ಸಿಪಾಲಿಟಿಗಳು ಮತ್ತು ಪಂಚಾಯತ್‌ಗಳಿಗೆ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ. ವಾಣಿಜ್ಯ ಪ್ರದೇಶಗಳು, ಮಾರ್ಕೆಟ್‌ಗಳು ಮತ್ತು ಹೋಟೆಲ್‌ಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡದ ಮಾಲೀಕರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: ಲಡಾಖ್​​ಗೆ ಪ್ರವಾಸ ಹೋಗುತ್ತೀರಾ? ಪ್ಲಾಸ್ಟಿಕ್ ಬಳಸಿದರೆ, ಕಸ ಎಸೆದರೆ ದಂಡ ಕಟ್ಟಬೇಕು!

ಸೆಪ್ಟೆಂಬರ್ 1ರಿಂದ ದಂಡ ಪ್ರಕ್ರಿಯೆ ಆರಂಭವಾಗುವ ಮುನ್ನ, ಇಡೀ ಆಗಸ್ಟ್ ತಿಂಗಳು ರಾಜ್ಯಾದ್ಯಂತ ಜಾಗೃತಿ ಅಭಿಯಾನವನ್ನು ನಡೆಸಲು ಸರ್ಕಾರ ಯೋಜಿಸಿದೆ. ಮೈಕ್‌ಗಳ ಮೂಲಕ ಪ್ರಚಾರ, ಪೋಸ್ಟರ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಹೊಸ ನಿಯಮದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸ್ವಚ್ಛ ಭಾರತ ಅಭಿಯಾನದ ಪ್ರಯುಕ್ತ ಬಂಗಾಳದ ಬಿಜೆಪಿ ಸರ್ಕಾರ ಸ್ವಚ್ಛತೆಗಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us