ದುರ್ಗಾ ಭಾರತ್ ಸಮ್ಮಾನ್​​ಗೆ ನಾಮನಿರ್ದೇಶನಗಳನ್ನು ಆಹ್ವಾನಿಸಿದ ಬಂಗಾಳದ ರಾಜಭವನ

ಶಿಕ್ಷಣ, ಸಾಹಿತ್ಯ, ಕಲೆ, ಸಮಾಜಕಾರ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಸಂಶೋಧನೆ, ಕ್ರೀಡೆ, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವಾಣಿಜ್ಯ, ವೈದ್ಯಕೀಯ ಮತ್ತು ಇತರ ಹಲವು ವಿಭಾಗಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು ರಾಜಭವನ ನಿರ್ಧರಿಸಿದೆ.

ದುರ್ಗಾ ಭಾರತ್ ಸಮ್ಮಾನ್​​ಗೆ ನಾಮನಿರ್ದೇಶನಗಳನ್ನು ಆಹ್ವಾನಿಸಿದ ಬಂಗಾಳದ ರಾಜಭವನ
ಸಿವಿ ಆನಂದ ಬೋಸ್
ರಶ್ಮಿ ಕಲ್ಲಕಟ್ಟ

Updated on: Sep 28, 2023 | 3:21 PM

ಕೋಲ್ಕತ್ತಾ ಸೆಪ್ಟೆಂಬರ್ 28 : ಬಂಗಾಳದ ದುರ್ಗಾಪೂಜೆ (Durga puja) ಇಂದು ವಿಶ್ವದಾದ್ಯಂತ ಹೆಸರು ಮಾಡಿದೆ. ಕೋಲ್ಕತ್ತಾದ ದುರ್ಗೋತ್ಸವಕ್ಕೆ ಯುನೆಸ್ಕೋ ವಿಶೇಷ ಮನ್ನಣೆ ನೀಡಿದೆ. ದುರ್ಗಾ ಪೂಜೆ ಬಂಗಾಳಿ ಸಂಸ್ಕೃತಿ, ಬಂಗಾಳಿ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ರಾಜ್ಯಪಾಲ ಸಿವಿ ಆನಂದ್ ಬೋಸ್ ಅವರು ದುರ್ಗಾ ಪೂಜೆಯ ಸಂದರ್ಭದಲ್ಲಿ ವಿಶೇಷ ಗೌರವವನ್ನು ಪ್ರಾರಂಭಿಸುತ್ತಿದ್ದಾರೆ. ಅದೇನೆಂದರೆ ರಾಜಭವನದಿಂದ ‘ದುರ್ಗಾ ಭಾರತ ಸಮ್ಮಾನ್’ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕೊಡುಗೆಗಳಿಗಾಗಿ ಈ ಮನ್ನಣೆಯನ್ನು ನೀಡಲು ರಾಜ್ಯಪಾಲ ಬೋಸ್ ನಿರ್ಧರಿಸಿದ್ದಾರೆ. ಬಂಗಾಳದ ರಾಜ್ಯಪಾಲ ಸಿವಿ ಆನಂದ  ಬೋಸ್ (C V Ananda Bose) ಅವರು ಇಡೀ ದೇಶದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಈ ಗೌರವವನ್ನು ನೀಡುತ್ತಾರೆ. ಈಗಾಗಲೇ ರಾಜಭವನದಿಂದ ನಾಮಪತ್ರಗಳನ್ನು ಆಹ್ವಾನಿಸಲಾಗಿದೆ. ಯಾವುದೇ ವ್ಯಕ್ತಿ ಅಥವಾ ನಾಗರಿಕ ಸಮಾಜ ಅಥವಾ ಯಾವುದೇ ಸಂಸ್ಥೆಯು ಈ ರಾಜಭವನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು. ನಾಮನಿರ್ದೇಶನಗಳನ್ನು ಕಳುಹಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30.

ಶಿಕ್ಷಣ, ಸಾಹಿತ್ಯ, ಕಲೆ, ಸಮಾಜಕಾರ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಸಂಶೋಧನೆ, ಕ್ರೀಡೆ, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವಾಣಿಜ್ಯ, ವೈದ್ಯಕೀಯ ಮತ್ತು ಇತರ ಹಲವು ವಿಭಾಗಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು ರಾಜಭವನ ನಿರ್ಧರಿಸಿದೆ. ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ದೇಶದ ವಿವಿಧ ಭಾಗಗಳಿಂದ ಸಮಾಜದ ಅಭಿವೃದ್ಧಿಯಲ್ಲಿ ವಿಶೇಷ ಉಪಕ್ರಮಗಳನ್ನು ಗೌರವಿಸಲಿದ್ದಾರೆ.

ದುರ್ಗಾ ಭಾರತ್ ನಿಮಿತ್ತ ವಿವಿಧ ರೀತಿಯ ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಿವೆ. ದುರ್ಗಾ ಭಾರತ ಪರಮ ಸಮ್ಮಾನ್, ದುರ್ಗಾ ಭಾರತ್ ಸಮ್ಮಾನ್ ಮತ್ತು ದುರ್ಗಾ ಭಾರತ್ ಪ್ರಶಸ್ತಿ- ಈ ಮೂರು ರೀತಿಯ ಗೌರವಗಳನ್ನು ರಾಜಭವನ ಆಯೋಜಿಸುತ್ತದೆ. ಬಹುಮಾನದ ಮೊತ್ತವನ್ನು ಕ್ರಮವಾಗಿ 1 ಲಕ್ಷ ಟಾಕಾ, 50 ಸಾವಿರ ಟಾಕಾ ಮತ್ತು 25 ಸಾವಿರ ಟಾಕಾ ನೀಡಲಾಗುವುದು.

ಇದನ್ನೂ ಓದಿ:  Facebook boyfriend: ಪಾಕಿಸ್ತಾನದ ಪ್ರಿಯತಮನ ಹಂಬಲಿಸಿ, ಭಾರತದ ಗಡಿ ದಾಟಿದ ರಾಜಸ್ತಾನದ ವಿವಾಹಿತ ಮಹಿಳೆ: ಅದು ಫೇಸ್​​​ಬುಕ್ ಪರಿಚಯ!

ದುರ್ಗಾ ಪೂಜೆಯ ಸಮಯದಲ್ಲಿ, ರಾಜ್ಯ ಸರ್ಕಾರವು ಬಂಗಾಳದ ವಿವಿಧ ದುರ್ಗಾಪೂಜೆಗಳ ಸಂಘಟಕರಿಗೆ ವಿಶೇಷ ಗೌರವವನ್ನು ನೀಡುತ್ತದೆ. ಮಂಟಪ ಅಲಂಕಾರ, ಮೂರ್ತಿಗಳಿಂದ ಹಿಡಿದು ವಿವಿಧ ವಿಭಾಗಗಳಲ್ಲಿ ದುರ್ಗಾಪೂಜೆಯ ಆಯೋಜಕರಿಗೆ ರಾಜ್ಯ ಸರ್ಕಾರವು ‘ಬಿಶ್ವ ಬಾಂಗ್ಲಾ ಶರದ್ ಸಮ್ಮಾನ್’ ಪ್ರಶಸ್ತಿಯನ್ನು ನೀಡುತ್ತದೆ. ರಾಜಭವನವು ವಿವಿಧ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕೊಡುಗೆಗಳಿಗಾಗಿ ‘ದುರ್ಗಾ ಭಾರತ ಸಮ್ಮಾನ್’ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us