ಮಲೇಷ್ಯಾ ಧರ್ಮಗುರುವಿನ ಲಿಂಕ್, ವಾಟ್ಸಾಪ್ ಚಾಟ್; ಕಗ್ಗಂಟಾಗುತ್ತಲೇ ಇದೆ ಟಿಸಿಎಸ್ ಮತಾಂತರ ಪ್ರಕರಣ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಬಿಪಿಒ ಕ್ಯಾಂಪಸ್‌ನಲ್ಲಿ ನಡೆದ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಫೆಬ್ರವರಿಯಲ್ಲಿ ಸುಳಿವು ಸಿಕ್ಕ ನಂತರ ರಹಸ್ಯ ಪೊಲೀಸ್ ಕಾರ್ಯಾಚರಣೆ ಶುರುವಾಗಿತ್ತು. ರಹಸ್ಯವಾಗಿ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಆ ಕಚೇರಿಯಲ್ಲಿ ನಿಯೋಜಿಸಲಾಗಿತ್ತು. ಇದರಿಂದ ಅವರು ಅಲ್ಲಿನ ಮತಾಂತರ ಜಾಲದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಸಾಧ್ಯವಾಯಿತು. ಅಲ್ಲಿನ ಸಿಬ್ಬಂದಿಯ ವಾಟ್ಸಾಪ್ ಚಾಟ್, ಮಲೇಷ್ಯಾದ ಧರ್ಮಗುರುವಿನ ಜೊತೆಗಿನ ವಿಡಿಯೋ ಕಾಲ್ ಮುಂತಾದ ಪುರಾವೆಗಳನ್ನು ಆ ಸಿಬ್ಬಂದಿ ಕಲೆಹಾಕಿದ್ದರು. ಟಿಸಿಎಸ್​​ನಲ್ಲಿ ನಡೆದ ಈ ಪ್ರಕರಣದ ಜಾಲ ತೆರೆದುಕೊಳ್ಳುತ್ತಲೇ ಇದ್ದು, ಎಸ್​ಐಟಿ ತನಿಖೆಯನ್ನು ಮುಂದುವರೆಸಿದೆ.

ಮಲೇಷ್ಯಾ ಧರ್ಮಗುರುವಿನ ಲಿಂಕ್, ವಾಟ್ಸಾಪ್ ಚಾಟ್; ಕಗ್ಗಂಟಾಗುತ್ತಲೇ ಇದೆ ಟಿಸಿಎಸ್ ಮತಾಂತರ ಪ್ರಕರಣ
TCS

Updated on: Apr 15, 2026 | 8:28 PM

ನವದೆಹಲಿ, ಏಪ್ರಿಲ್ 15: ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಬಿಪಿಒ ಕಚೇರಿಯಲ್ಲಿನ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದು ಕಾರ್ಪೋರೇಟ್ ಜಿಹಾದ್​ ಎಂದು ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ಈ ಪ್ರಕರಣದ ತನಿಖೆಯಲ್ಲಿ ಅಂತಾರಾಷ್ಟ್ರೀಯ ಸಂಪರ್ಕವಿರುವ ಮತಾಂತರ ಜಾಲವೊಂದು ಬೆಳಕಿಗೆ ಬಂದಿದೆ. ಫೆಬ್ರವರಿಯಲ್ಲಿ ಗುಪ್ತ ಪೊಲೀಸ್ ಕಾರ್ಯಾಚರಣೆ ನಡೆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಟಿಸಿಎಸ್​​ನಲ್ಲಿ (TCS) ರಹಸ್ಯವಾಗಿ ಹೌಸ್ ಕೀಪಿಂಗ್ ಸಿಬ್ಬಂದಿಯಂತೆ ನಿಯೋಜಿಸಲಾಗಿತ್ತು. ವಾಟ್ಸಾಪ್ ಚಾಟ್‌ಗಳು, ಕಿರುಕುಳಕ್ಕೊಳಗಾದವರ ಹೇಳಿಕೆಗಳು ಮತ್ತು ಶಂಕಿತ ಮಲೇಷ್ಯಾ ಸಂಬಂಧಿ ಧರ್ಮಗುರುವಿನ ವಿರುದ್ಧದ ಸಾಕ್ಷಿಗಳು ಆ ಕಚೇರಿಯೊಳಗೆ ಮತಾಂತರ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಪುರಾವೆಗಳಾಗಿದ್ದವು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಎಸ್‌ಐಟಿ ಮೂಲಗಳ ಪ್ರಕಾರ, ಆರೋಪಿಗಳ ಹೊರತಾಗಿ ಇನ್ನೂ 12 ಉದ್ಯೋಗಿಗಳನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ 8 ಮಹಿಳೆಯರು ಮತ್ತು ಒಬ್ಬ ಪುರುಷನ ದೂರುಗಳ ಆಧಾರದ ಮೇಲೆ 9 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಆರೋಪಗಳಲ್ಲಿ ಲೈಂಗಿಕ ಕಿರುಕುಳ, ಮದುವೆಯ ನೆಪದಲ್ಲಿ ಅತ್ಯಾಚಾರ, ಧಾರ್ಮಿಕ ಕುಶಲತೆ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವುದು ಸೇರಿವೆ.

ಇದನ್ನೂ ಓದಿ: ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್; ಸಿಕ್ಕಿಬಿದ್ದ ಕಾಮಾಂಧರು

ಆರೋಪಿಗಳಾದ ಟಿಸಿಎಸ್ ಉದ್ಯೋಗಿಗಳು ಮಹಿಳಾ ಸಹೋದ್ಯೋಗಿಗಳಿಗೆ ಕಿರುಕುಳ ನೀಡಿದ್ದಾರೆ ಮತ್ತು ಧಾರ್ಮಿಕ ಮತಾಂತರಕ್ಕೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ ಎಂದು ಎಫ್‌ಐಆರ್‌ಗಳು ಹೇಳುತ್ತವೆ. ಈ ಘಟನೆಗಳ ಬಗ್ಗೆ 18ರಿಂದ 25 ವರ್ಷ ವಯಸ್ಸಿನ ಮಹಿಳೆಯರು ದೂರು ನೀಡಿದ್ದರು. 2022ರಿಂದ ಆರಂಭವಾಗಿ 3 ವರ್ಷಗಳಲ್ಲಿ ಈ ಘಟನೆಗಳು ನಡೆದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇಲ್ಲಿಯವರೆಗೆ, ಟಿಸಿಎಸ್​​ನ ಟೀಂ ಲೀಡರ್ ಮತ್ತು ಎಂಜಿನಿಯರ್‌ಗಳು ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇತರರ ವಿರುದ್ಧ ತನಿಖೆ ಮುಂದುವರೆದಿದೆ. ಹೆಚ್​ಆರ್​ ಮ್ಯಾನೇಜರ್ ನಿದಾ ಖಾನ್ ಅವರು ತಲೆಮರೆಸಿಕೊಂಡಿದ್ದು, ಅಧಿಕಾರಿಗಳು ಸಂಸ್ಥೆಯೊಳಗಿನ ಅವರ ಪಾತ್ರ ಮತ್ತು ನೇಮಕಾತಿ ಪದ್ಧತಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಜಾಲವನ್ನು ಪತ್ತೆಹಚ್ಚಲು ರಹಸ್ಯ ಕಾರ್ಯಾಚರಣೆ ನಡೆಸಲಾಗಿತ್ತು.

ಇದನ್ನೂ ಓದಿ: ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

ಪೊಲೀಸರು 4 ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಟಿಸಿಎಸ್​ ಕ್ಯಾಂಪಸ್‌ನೊಳಗೆ ನಿಯೋಜಿಸಿದ್ದರು. ಅವರ ಸಂಶೋಧನೆಗಳು ಈ ಆರೋಪಗಳನ್ನು ಪರಿಶೀಲಿಸಲು ಸಹಾಯ ಮಾಡಿದೆ. ಮಲೇಷ್ಯಾದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ನಂಬಲಾದ ಇಮ್ರಾನ್ ಎಂದು ಗುರುತಿಸಲಾದ ವ್ಯಕ್ತಿ ವಾಟ್ಸಾಪ್ ಸಂಭಾಷಣೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ವೀಡಿಯೊ ಕರೆಗಳ ಮೂಲಕ ಪರಿಚಯಿಸಲ್ಪಟ್ಟ ಧರ್ಮಗುರು ಎಂದು ಶಂಕಿಸಲಾಗಿದೆ. ಅವರ ಗುರುತು ಮತ್ತು ಪಾತ್ರದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

ನೇಮಕಾತಿ ಪದ್ಧತಿಗಳು ಸೇರಿದಂತೆ ಟಿಸಿಎಸ್‌ನಲ್ಲಿ ಆಂತರಿಕ ಪ್ರಕ್ರಿಯೆಗಳನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ ಕೆಲವು ಉದ್ಯೋಗಿಗಳು ಮಹಿಳೆಯರಿಗೆ ಉದ್ಯೋಗ ಮತ್ತು ಸಂಬಳದ ಭರವಸೆ ನೀಡಿ ಆಮಿಷವೊಡ್ಡಿದ್ದಾರೆ ಮತ್ತು ಅವರ ಧಾರ್ಮಿಕ ಪದ್ಧತಿಗಳನ್ನು ಅನುಸರಿಸಲು ಪ್ರೋತ್ಸಾಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ಟಿಸಿಎಸ್ ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದ್ದು, ಆರೋಪಿಗಳಾಗಿರುವ ಉದ್ಯೋಗಿಗಳನ್ನು ಅಮಾನತುಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us