ಸಾಮಾನ್ಯ ಶೀತವೆಂದು ಕೋವಿಡ್ ನಿರ್ಲಕ್ಷಿಸಬೇಡಿ, ದೀರ್ಘ ಕಾಲದ ಪರಿಣಾಮ ಅನೇಕ: ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ

|

Updated on: Dec 21, 2023 | 9:45 AM

ಜನರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳನ್ನು ಡಾ. ಸೌಮ್ಯಾ ಸ್ವಾಮಿನಾಥನ್ ಪಟ್ಟಿ ಮಾಡಿದ್ದಾರೆ. ವಯಸ್ಸಾದವರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಮಾಸ್ಕ್ ಹಾಕಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಸಾಮಾನ್ಯ ಶೀತವೆಂದು ಕೋವಿಡ್ ನಿರ್ಲಕ್ಷಿಸಬೇಡಿ, ದೀರ್ಘ ಕಾಲದ ಪರಿಣಾಮ ಅನೇಕ: ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ
ಸಾಮಾನ್ಯ ಶೀತವೆಂದು ಕೋವಿಡ್ ನಿರ್ಲಕ್ಷಿಸಬೇಡಿ, ದೀರ್ಘ ಕಾಲದ ಪರಿಣಾಮ ಅನೇಕ: ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್
Image Credit source: AFP
Follow us on

ನವದೆಹಲಿ, ಡಿಸೆಂಬರ್ 21: ಕೊರೊನಾ ವೈರಸ್​​ನ (Coronavirus) ಒಮಿಕ್ರಾನ್ ಉಪತಳಿ ಜೆಎನ್​​1 (JN.1) ಪರಿಣಾಮ ದೇಶದಲ್ಲಿ ಕೋವಿಡ್ ಸೋಂಕು ಹರಡುವಿಕೆ ಹೆಚ್ಚಾಗುವ ಆತಂಕದ ನಡುವೆಯೇ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಳವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾಜಿ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ (Soumya Swaminathan) ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆಲ್ಲ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಬಹುದು ಎಂದು ಅವರು ಹೇಳಿದ್ದಾರೆ.

ಕೋವಿಡ್ ಸೋಂಕನ್ನು ಸಾಮಾನ್ಯ ಶೀತ ಎಂದು ನಿರ್ಲಕ್ಷ್ಯ ವಹಿಸದಂತೆ ಡಾ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ ನೀಡಿದ್ದಾರೆ. ಕೋವಿಡ್​​ನಿಂದ ಹೆಚ್ಚು ಪ್ರಮಾಣದ ಸಾವು ಸಂಭವಿಸುವುದಿಲ್ಲ, ಹೆಚ್ಚಿನವರಲ್ಲಿ ತೀವ್ರ ಅನಾರೋಗ್ಯ ಉಂಟಾಗದು ಎಂದ ಮಾತ್ರಕ್ಕೆ ಅದರ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ. ಕೋವಿಡ್​ನಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಮಾನಸಿಕ ಆರೋಗ್ಯ ಸಮಸ್ಯೆ ಅಪಾಯವೂ ಒಳಗೊಂಡಂತೆ ದೀರ್ಘಕಾಲೀನ ಅನೇಕ ಪರಿಣಾಮಗಳು ಇವೆ ಎಂದು ಅವರು ‘ಎನ್​ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜನರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳನ್ನು ಡಾ. ಸೌಮ್ಯಾ ಸ್ವಾಮಿನಾಥನ್ ಪಟ್ಟಿ ಮಾಡಿದ್ದಾರೆ. ವಯಸ್ಸಾದವರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಮಾಸ್ಕ್ ಹಾಕಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಕೇರಳದ ಕೊಚ್ಚಿ ಪ್ರದೇಶದಲ್ಲಿ ಸುಮಾರು 24 ಗಂಟೆಗಳ ಅವಧಿಯಲ್ಲಿ ಇನ್​ಫ್ಲುಯೆಂಜಾ ತರದ ಕಾಯಿಲೆಗಳನ್ನು ಹೊಂದಿರುವ ರೋಗಿಗಳಲ್ಲಿ ಶೇ 30 ರಷ್ಟು ಜನರು ಕೋವಿಡ್ ಪಾಸಿಟಿವ್ ಎಂಬುದು ತಿಳಿದುಬಂದಿದೆ. ಕೋವಿಡ್ ಪ್ರಕರಣಗಳು ಸಮುದಾಯಕ್ಕೆ ಹರಡಿವೆ ಮತ್ತು ಅವರ ನೆರೆಹೊರೆಯವರಲ್ಲಿ ಸಹ ಪಾಸಿಟಿವ್ ಬಂದಿದೆ ಎಂದು ನ್ಯಾಷನಲ್ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕೋವಿಡ್ ಟಾಸ್ಕ್ ಫೋರ್ಸ್​ನ ಅಧ್ಯಕ್ಷ ಡಾ. ರಾಜೀವ್ ಜಯದೇವನ್ ತಿಳಿಸಿದ್ದಾರೆ.

ಇದನ್ನೂ ಓದಿ: ಪೋಷಕರಲ್ಲಿ ಕೊರೊನಾ ಆತಂಕ, ಖಾಸಗಿ ಶಾಲೆಗಳು ಹೈ ಅಲರ್ಟ್; ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ

ಈ ಮಧ್ಯೆ, ಕರ್ನಾಟಕದಲ್ಲಿ ಸಹ ಕೋವಿಡ್ ಹರಡುವಿಕೆ ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ ಒಂದೇ ವಾರ ಕೊವಿಡ್​ನಿಂದಾಗಿ ಮೂವರು ಮೃತಪಟ್ಟಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:38 am, Thu, 21 December 23