
ನವದೆಹಲಿ, ಮಾರ್ಚ್ 23: ಗುಣಮಟ್ಟದ ಪ್ರತಿಭೆಗಳಿಗೆ ಇರವ ಬೇಡಿಕೆ ಸಾರ್ವತ್ರಿಕವಾದುದು. ಈ ಬೇಡಿಕೆ ಪೂರೈಸಲು ಶಕ್ತವಾಗಿರುವ ಏಕೈಕ ರಾಷ್ಟ್ರ ಭಾರತ ಎಂದು ಮೈ ಹೋಮ್ ಗ್ರೂಪ್ನ ಎಕ್ಸಿಕ್ಯೂಟಿವ್ ವೈಸ್ ಛೇರ್ಮನ್ ಜೂಪಲ್ಲಿ ರಾಮು ರಾವ್ (Jupally Ramu Rao) ಹೇಳಿದರು. ಟಿವಿ9 ನೆಟ್ವರ್ಕ್ ಆಯೋಜಿಸಿರುವ 2026ರ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ (What India Thinks Today – WITT Summit 2026) ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ರಾಮು ರಾವ್ ಅವರು ಮಾತನಾಡುತ್ತಿದ್ದರು.
ಟಿವಿ9 ನೆಟ್ವರ್ಕ್ನ ಈ ವಾರ್ಷಿಕ ಸಮಿಟ್ನ ಈ ಆವೃತ್ತಿಯ ಥೀಮ್ ‘ಭಾರತ ಹಾಗೂ ವಿಶ್ವ’ ಎಂದಿದೆ. ಹಿಂದಿನ ಆವೃತ್ತಿಗಳಂತೆ ಈ ಬಾರಿಯೂ ಟಿವಿ9ನ ಈ ಡಬ್ಲ್ಯುಐಟಿಟಿ ಸಮಿಟ್ನಲ್ಲಿ ಉದ್ಯಮ ಮುಖಂಡರು, ನೀತಿ ರೂಪಕರು, ಜಾಗತಿಕ ಚಿಂತಕರು ಸೇರಿ ಭಾರತದ ಜಾಗತಿಕ ಪ್ರಭಾವ ಹಾಗೂ ಬೆಳವಣಿಗೆ ಕುರಿತು ವಿಚಾರ ವಿನಿಮಯ ಮಾಡಲಿದ್ದಾರೆ.
ಸದ್ಯ ಜಾಗತಿಕವಾಗಿ ಬಹು ಬಿಕ್ಕಟ್ಟುಗಳು ಎಲ್ಲೆಡೆ ಆರ್ಥಿಕತೆಗಳಿಗೆ ಹೊಡೆತ ಕೊಡುತ್ತಿವೆ. ಇವುಗಳ ಮಧ್ಯೆ ಭಾರತವು ಕ್ಷಮತೆ, ಪ್ರತಿರೋಧ ಶಕ್ತಿಯಾಗಿ ತೋರ್ಪಡಿಸುತ್ತಿದೆ. ಡೆಮಾಕ್ರಸಿ, ಡೆಮಾಗ್ರಫಿ ಮತ್ತು ಡೈವರ್ಸಿಟಿ ಹೊಂದಿರುವ ಭಾರತದ ಬಗ್ಗೆ ವಿಶ್ವಕ್ಕೆ ವಿಶ್ವಾಸ ಮೂಡಿದೆ. ಭಾರತದ ಯುವ ಸಮುದಾಯದ ಬಗ್ಗೆ ವಿಶ್ವವು ಭರವಸೆ ಮತ್ತು ವಿಶ್ವಾಸ ಕಣ್ಣುಗಳಿಂದ ನೋಡುತ್ತಿದೆ ಎಂದು ಮೈ ಹೋಮ್ ಗ್ರೂಪ್ನ ವೈಸ್ ಛೇರ್ಮನ್ ಹೇಳಿದರು.
ದೊಡ್ಡ ಆರ್ಥಿಕತೆಯ ದೇಶಗಳು ನಿಧಾನ ಬೆಳವಣಿಗೆ ಹೊಂದುತ್ತಿರುವ ಹೊತ್ತಲ್ಲಿ ಭಾರತ ಸ್ಥಿರ ಬೆಳವಣಿಗೆ ಸಾಧಿಸುತ್ತಿದೆ. ವಾರ್ಷಿಕವಾಗಿ ಶೇ. 7ರಷ್ಟು ಬೆಳವಣಿಗೆ ಹೊಂದುತ್ತಿದೆ. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸುವ ನಿಟ್ಟಿನಲ್ಲಿ ಭಾರತ ಸಾಗುತ್ತಿದೆ ಎಂದು ಹೇಳಿದ ರಾಮು ರಾವ್ ಜೂಪಲ್ಲಿ, ಸರ್ಕಾರದಿಂದ ಪೂರಕವಾದ ನೀತಿಗಳು ಜಾರಿಯಾಗುತ್ತಿರುವುದನ್ನು ಉಲ್ಲೇಖಿಸಿದರು.
ಭಾರತವು ಜಾಗತಿಕ ಪ್ರತಿಭಾ ಕೇಂದ್ರವಾಗಿ ಬೆಳೆಯುತ್ತಿದೆ. ಜರ್ಮನಿಯಿಂದ ಕೆನಡಾವರೆಗೆ ವಿವಿಧ ದೇಶಗಳು ಹಾಗೂ ಗಲ್ಫ್ನ ದೇಶಗಳು ಕೌಶಲ್ಯವಂತ ಮಾನವ ಸಂಪನ್ಮೂಲಗಳ ಕೊರತೆ ಎದುರಿಸುತ್ತಿವೆ. ಇದನ್ನು ಭಾರತ ನೀಗಬಲ್ಲುದು. ಗುಣಮಟ್ಟದ ಪ್ರತಿಭೆಯನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲು ಸಮರ್ಥವಾಗಿರುವ ಏಕೈಕ ದೇಶ ಭಾರತವಾಗಿದೆ ಎಂದು ಜೂಪಲ್ಲಿ ರಾಮು ರಾವ್ ಈ ಸಂದರ್ಭದಲ್ಲಿ ತಿಳಿಸಿದರು.
ಜೂಪಲ್ಲಿ ರಾಮು ರಾವ್ ಸ್ವಾಗತ ಭಾಷಣದ ಬಳಿಕ ಟಿವಿ9 ನೆಟ್ವರ್ಕ್ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ಮಾತನಾಡಿದರು. ಆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಿಗಳು ಹಿಂದಿನ ಎರಡು ಶೃಂಗಸಭೆಗಳಲ್ಲೂ ಭಾಗವಹಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ