AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರುಕುಳ ನೀಡಲು ಯತ್ನಿಸಿ ರೈಲಿನಿಂದ ಮಹಿಳೆಯನ್ನ ಹೊರಗೆ ನೂಕಿದ ದುಷರ್ಮಿ; ಮಹಿಳೆ ಸಾವು

ಫತೇಬಾದ್‌ನ ತೋಹಾನಾ ಪಟ್ಟಣದ ನಿಲ್ದಾಣಕ್ಕೆ ರೈಲು ಬಂದಾಗ, ಮಹಿಳೆಯ ಪತಿ ಮಗು ಒಂಟಿಯಾಗಿ ಅಳುತ್ತಿರುವುದನ್ನು ಕಂಡಿದ್ದಾನೆ ಎಂದು ಪೊಲೀಸರು ಹೇಳಿದರು. ಅಲ್ಲಿ ಏನು ನಡೆಯಿತು ಎಂಬುದನ್ನು ಅಪ್ಪನಿಗೆ ಮಗು ವಿವರಿಸಿದೆ.

ಕಿರುಕುಳ ನೀಡಲು ಯತ್ನಿಸಿ ರೈಲಿನಿಂದ ಮಹಿಳೆಯನ್ನ ಹೊರಗೆ ನೂಕಿದ ದುಷರ್ಮಿ; ಮಹಿಳೆ  ಸಾವು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Sep 02, 2022 | 7:25 PM

Share

ಚಂಡೀಗಢ: ತನಗೆ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಯನ್ನು ಎದುರಿಸಿದ ಕಾರಣಕ್ಕೆ 30 ವರ್ಷದ ಮಹಿಳೆಯನ್ನು ಓಡುವ ರೈಲಿನಿಂದ ಹೊರಕ್ಕೆ ತಳ್ಳಿದ ಘಟನೆ ಹರ್ಯಾಣದ (Haryana) ಫತೇಬಾದ್ ಜಿಲ್ಲೆಯಲ್ಲಿ ನಡೆದಿದೆ. ಆಕೆ ತನ್ನ ಒಂಬತ್ತು ವರ್ಷದ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಫತೇಬಾದ್‌ನ ತೋಹಾನಾ ಪಟ್ಟಣದ ನಿಲ್ದಾಣಕ್ಕೆ ರೈಲು ಬಂದಾಗ, ಮಹಿಳೆಯ ಪತಿ ಮಗು ಒಂಟಿಯಾಗಿ ಅಳುತ್ತಿರುವುದನ್ನು ಕಂಡಿದ್ದಾನೆ ಎಂದು ಪೊಲೀಸರು ಹೇಳಿದರು. ಅಲ್ಲಿ ಏನು ನಡೆಯಿತು ಎಂಬುದನ್ನು ಅಪ್ಪನಿಗೆ ಮಗು ವಿವರಿಸಿದೆ. ಮೂವರು ಪ್ರಯಾಣಿಕರನ್ನು ಹೊರತುಪಡಿಸಿ ಇಡೀ ಕೋಚ್ ಖಾಲಿಯಾಗಿತ್ತು ಎಂದು ಫತೇಬಾದ್ ಪೊಲೀಸ್ ಮುಖ್ಯಸ್ಥೆ ಆಸ್ತಾ ಮೋದಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಹಿಳೆ ಒಂಟಿಯಾಗಿ ಪ್ರಯಾಣಿಸುತ್ತಿದ್ದುದನ್ನು ಕಂಡ ಆರೋಪಿ ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದು ಆಕೆ ಜಗಳವಾಡಿದ್ದಾಳೆ. ಮಗು ಹೇಳಿದ್ದನ್ನು ಉಲ್ಲೇಖಿಸಿದ ಪೊಲೀಸರು, ಆ ವ್ಯಕ್ತಿ ತನ್ನ ತಾಯಿಯನ್ನು ರೈಲಿನಿಂದ ಹೊರಗೆ ತಳ್ಳಿ ತಾನೂ ಜಿಗಿದಿದ್ದಾನೆ ಎಂದು ಹೇಳಿದರು. “ನನ್ನ ಮಗ ಅಳುತ್ತಾ ನನ್ನ ಬಳಿಗೆ ಓಡಿ ಬಂದಿದ್ದಾರೆ, ಒಬ್ಬ ವ್ಯಕ್ತಿ ತಾಯಿಯನ್ನು ರೈಲಿನ ಬಾಗಿಲಿನಿಂದ ತಳ್ಳಿದ್ದಾನೆ” ಎಂದು ಆತ ಹೇಳಿದ್ದಾನೆ. 20 ಕಿ.ಮೀ ದೂರದಲ್ಲಿದ್ದಾಗ ಮೊಬೈಲ್‌ಗೆ ಕರೆ ಮಾಡಿ ಠಾಣೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಳು. ಈಗ ಆಕೆ ಇಲ್ಲ ಎಂದು ಪತಿ ಕಣ್ಣೀರಿಟ್ಟಿದ್ದಾರೆ.

ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದು ಸಂದೀಪ್ (27) ಎಂದು ಗುರುತಿಸಲಾಗಿದೆ. ರೈಲಿನಿಂದ ಜಿಗಿದ ಕಾರಣ ಈತ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆತನನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರಿ ರೈಲ್ವೆ ಪೊಲೀಸ್ ಅಥವಾ ಜಿಆರ್‌ಪಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದೆ.

ಮಹಿಳೆಯ ಪತಿ ಅವರು ಕಳೆದ ಕೆಲವು ದಿನಗಳಿಂದ ರೋಹ್ಟಕ್‌ನಲ್ಲಿ ತಂಗಿದ್ದು ಗುರುವಾರ ರಾತ್ರಿ ಸುಮಾರು 145 ಕಿಮೀ ದೂರದ ಟೊಹಾನಾಗೆ ಮರಳಲು ರೈಲಿನಲ್ಲಿ ತೆರಳಿದರು.

ಪೊಲೀಸರು ಮತ್ತು ಮಹಿಳೆಯ ಕುಟುಂಬವು ಮಧ್ಯರಾತ್ರಿಯವರೆಗೂ ರೈಲ್ವೆ ಹಳಿಯಲ್ಲಿ ಆಕೆಯ ಶವಕ್ಕಾಗಿ ಭಾರೀ ಹುಡುಕಾಟ ನಡೆಸಿತು. ಕತ್ತಲು ಮತ್ತು ಟ್ರ್ಯಾಕ್ ಉದ್ದಕ್ಕೂ ಎತ್ತರದ ಪೊದೆಗಳಿದ್ದ ಕಾರಣ ಹುಡುಕಾಟವು ಕಷ್ಟವಾಗಿತ್ತು. ಇಂದು ಬೆಳಗ್ಗೆ ಶವ ಪತ್ತೆಯಾಗಿದೆ. ರಾತ್ರಿ ವೇಳೆ ರೈಲ್ವೇ ಪೊಲೀಸರು ಕೋಚ್‌ಗಳ ಮೇಲೆ ನಿಗಾ ಇಡಬೇಕಾಗಿರುವುದರಿಂದ ಭದ್ರತಾ ಲೋಪಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತೋಹಾನಾದಲ್ಲಿ ರೈಲ್ವೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಜಗದೀಶ್ ಸುದ್ದಿಗಾರರಿಗೆ ತಿಳಿಸಿದರು.