ಥ್ರಿಲ್ಲರ್​ ಕಾದಂಬರಿಯಂತಾದ ಶೀನಾ ಬೋರಾ ಕೊಲೆ ಕೇಸ್​; ಕಾರ್ಯಪ್ರವೃತ್ತರಾದ ಇಂದ್ರಾಣಿ ಪರ ವಕೀಲರು !

ಇಂದ್ರಾಣಿ ಮುಖರ್ಜಿಗೆ ಅವರ ಮೊದಲ ಪತಿ ಸಿದ್ಧಾರ್ಥ್​ ದಾಸ್​ರಿಂದ ಹುಟ್ಟಿದ ಮಗಳು ಶೀನಾ ಬೋರಾ. ಆದರೆ ಶೀನಾ ಬೋರಾ, ಇಂದ್ರಾಣಿ ಮುಖರ್ಜಿಯ ಮೂರನೇ ಪತಿ ಪೀಟರ್​ ಮುಖರ್ಜಿ (2002ರಲ್ಲಿ ಇವರಿಬ್ಬರ ವಿವಾಹವಾಗಿತ್ತು) ಮತ್ತು ಅವರ ಮೊದಲ ಪತ್ನಿ ಶಬಮನ್​ ಮುಖರ್ಜಿ ಪುತ್ರ ರಾಹುಲ್​ ಮುಖರ್ಜಿಯೊಂದಿಗೆ ಸಂಬಂಧ ಹೊಂದಿದ್ದಳು.

ಥ್ರಿಲ್ಲರ್​ ಕಾದಂಬರಿಯಂತಾದ ಶೀನಾ ಬೋರಾ ಕೊಲೆ ಕೇಸ್​; ಕಾರ್ಯಪ್ರವೃತ್ತರಾದ ಇಂದ್ರಾಣಿ ಪರ ವಕೀಲರು !
ಇಂದ್ರಾಣಿ ಮುಖರ್ಜಿ ಮತ್ತು ಶೀನಾ ಬೋರಾ
Edited By:

Updated on: Dec 22, 2021 | 4:44 PM

2012ರಲ್ಲಿ ಹತ್ಯೆಯಾಗಿದ್ದಾಳೆ ಎಂದು ಹೇಳಲಾಗಿದ್ದ ಶೀನಾ ಬೋರಾ (Sheena Bora) ಬದುಕಿದ್ದಾಳೆ ಎಂಬ ಅಚ್ಚರಿ ವಿಷಯವನ್ನು ಆಕೆಯ ಹತ್ಯೆ ಆರೋಪದಡಿ ಜೈಲು ಸೇರಿರುವ ತಾಯಿ ಇಂದ್ರಾಣಿ ಮುಖರ್ಜಿ(Indrani Mukerjea) ಸಿಬಿಐಗೆ ಇತ್ತೀಚೆಗಷ್ಟೇ ತಿಳಿಸಿದ್ದರು. ಈ ಮೂಲಕ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸದ್ಯ ಒಂದು ಕುತೂಹಲಕಾರಿ ಟ್ವಿಸ್ಟ್ ಸಿಕ್ಕಿದೆ. ಶೀನಾ ಬೋರಾ ಬದುಕಿದ್ದಾಳೆ, ಆಕೆ ಜಮ್ಮು-ಕಾಶ್ಮೀರದಲ್ಲಿ ನೆಲೆಸಿದ್ದಾಳೆ ಎಂದು ನಾನಿರುವ ಜೈಲಿನಲ್ಲಿ ನನ್ನೊಂದಿಗೆ ಇರು ಸಹಕೈದಿಯೊಬ್ಬರು ನನಗೆ ತಿಳಿಸಿದ್ದಾರೆ ಎಂದು ಇಂದ್ರಾಣಿ ಮುಖರ್ಜಿ ಸಿಬಿಐಗೆ ಪತ್ರವೊಂದರನ್ನು ಬರೆದಿದ್ದಾರೆ.

ಅದರ ಬೆನ್ನಲ್ಲೇ ಈಗ ಇಂದ್ರಾಣಿ ಮುಖರ್ಜಿ ಪರ ವಕೀಲರಾದ ಸನಾ ಆರ್ ಖಾನ್​ ಕಾರ್ಯಪ್ರವೃತ್ತರಾಗಿದ್ದು, ಶೀನಾ ಬೋರಾ ಬದುಕಿದ್ದಾರೆ ಎಂದು ಇಂದ್ರಾಣಿ ಮುಖರ್ಜಿಗೆ ಹೇಳಿರುವ ಮಹಿಳೆ, ತಮ್ಮ ಹೇಳಿಕೆಯನ್ನು ಕೋರ್ಟ್​ನಲ್ಲಿ ದಾಖಲಿಸಲು ಸಿದ್ಧರಿದ್ದಾರೆ. ನಾವೂ ಕೂಡ ನೇರವಾಗಿಯೇ ಸಿಬಿಐಗೆ ಅರ್ಜಿ ಸಲ್ಲಿಸಿ, ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸುತ್ತೇವೆ ಎಂದಿದ್ದಾರೆ. ಈ ಶೀನಾ ಬೋರಾ 2012ರ ಜೂನ್​ 24ರಂದು ಜಮ್ಮು-ಕಾಶ್ಮೀರದ ದಾಲ್ ಲೇಕ್​ ಬಳಿ ಕೊಲೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಆಕೆ ಬದುಕಿರುವುದು ಸತ್ಯವೋ, ಸುಳ್ಳೋ ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ಇಂದ್ರಾಣಿ ಮುಖರ್ಜಿಗೆ ಅವರ ಮೊದಲ ಪತಿ ಸಿದ್ಧಾರ್ಥ್​ ದಾಸ್​ರಿಂದ ಹುಟ್ಟಿದ ಮಗಳು ಶೀನಾ ಬೋರಾ. ಆದರೆ ಶೀನಾ ಬೋರಾ, ಇಂದ್ರಾಣಿ ಮುಖರ್ಜಿಯ ಮೂರನೇ ಪತಿ ಪೀಟರ್​ ಮುಖರ್ಜಿ (2002ರಲ್ಲಿ ಇವರಿಬ್ಬರ ವಿವಾಹವಾಗಿತ್ತು) ಮತ್ತು ಅವರ ಮೊದಲ ಪತ್ನಿ ಶಬಮನ್​ ಮುಖರ್ಜಿ ಪುತ್ರ ರಾಹುಲ್​ ಮುಖರ್ಜಿಯೊಂದಿಗೆ ಸಂಬಂಧ ಹೊಂದಿದ್ದಳು. ಅಂದರೆ ಇವರಿಬ್ಬರ ನಡುವೆ ಪ್ರೀತಿ, ಸ್ನೇಹ ಬೆಳೆದಿತ್ತು. ಈ ಸಂಬಂಧವನ್ನು ಇಂದ್ರಾಣಿ ವಿರೋಧಿಸುತ್ತಿದ್ದಳು. ಅದರ ಮಧ್ಯೆ ಇಂದ್ರಾಣಿ ಮುಖರ್ಜಿ, ಶೀನಾ ಬೋರಾ ತನ್ನ ತಂಗಿ ಎಂದೇ ಸಾರ್ವಜನಿಕವಾಗಿ ಬಿಂಬಿಸಿಕೊಂಡಿದ್ದರು. ಶೀನಾ ಬೋರಾ ಇದನ್ನೇ ಇಟ್ಟುಕೊಂಡು ಇಂದ್ರಾಣಿಯವರಿಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಳು. ನಾನು ನಿನ್ನ ಮಗಳು ಎಂದು ಜಗತ್ತಿಗೇ ಸಾರುತ್ತೇನೆ ಎನ್ನುತ್ತಿದ್ದಳು. ಒಟ್ಟಾರೆ ಇದು ಶೀನಾ ಬೋರಾ ಹತ್ಯೆಯಲ್ಲಿ ಮುಕ್ತಾಯವಾಗಿತ್ತು. ಇಂದ್ರಾಣಿ ಮುಖರ್ಜಿ ತನ್ನ ಎರಡನೇ ಪತಿ ಸಂಜೀವ್ ಖನ್ನಾ (ಇವರಿಬ್ಬರ ವಿವಾಹ ಆಗಿದ್ದು 1993ರಲ್ಲಿ) ಮತ್ತು ಕಾರು ಚಾಲಕ ಶ್ಯಾಮ್​ವರ್​ ರೈರೊಂದಿಗೆ ಸೇರಿ  2012ರಲ್ಲಿ ಶೀನಾಳನ್ನು ಹತ್ಯೆ ಮಾಡಿದ್ದರು ಎಂಬುದು ಸಿಬಿಐ ಕೊಟ್ಟ ವರದಿಯಿಂದಲೇ ಗೊತ್ತಾಗಿದ್ದು. ಅಂದಹಾಗೆ 2012ರಲ್ಲಿ ನಡೆದಿದ್ದ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು 2015ರಲ್ಲಿ.  ಅದೇ ವರ್ಷ ಇಂದ್ರಾಣಿ ಜೈಲು ಸೇರಿದ್ದಾರೆ. ಹಾಗೇ, ಪೀಟರ್​ ಮತ್ತು ಇಂದ್ರಾಣಿ ಸಂಬಂಧ 2017ರಲ್ಲಿಯೇ ಅಂತ್ಯ ಕಂಡಿದೆ.  ಇದೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪೀಟರ್ ಮುಖರ್ಜಿಗೆ 2020ರಲ್ಲಿ ಜಾಮೀನು ಸಿಕ್ಕಿದೆ.

ಪತ್ರವನ್ನು ಗಂಭೀರವಾಗಿ ಪರಿಗಣಿಸದ ಸಿಬಿಐ
ಇದೀಗ ಶೀನಾ ಬೋರಾ ಬದುಕಿದ್ದಾರೆ ಎಂದು ಇಂದ್ರಾಣಿ ಮುಖರ್ಜಿ ಬರೆದ ಪತ್ರವನ್ನು ಸಿಬಿಐ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ. ನಾವು ಈಗಾಗಲೇ ಕೇಸ್​ನ್ನು ಸಂಪೂರ್ಣವಾಗಿ ತನಿಖೆ ಮಾಡಿ ವರದಿ ನೀಡಿದ್ದೇವೆ. ಆದರೆ ಈಗ ಮತ್ತೆ ಶೀನಾ ಬದುಕಿದ್ದಾಳೆ ಎಂದು ಹೇಳುವ ಮೂಲಕ ದಾರಿ ತಪ್ಪಿಸಲಾಗುತ್ತಿದೆ ಎಂದು ಸಿಬಿಐ ಹೇಳಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: Transgender Community : ‘ನನ್ನದಲ್ಲದ ತಪ್ಪಿಗೆ ನನ್ನ ಹುಟ್ಟು, ಲಿಂಗ, ಅಸ್ತಿತ್ವದ ಬಗ್ಗೆ ಅಸಭ್ಯವಾಗಿ ಮಾತನಾಡಿ ಇಡೀದಿನ ಹೊಡೆದರು’

Web contact

TV9 Kannada

Read More
Follow Us