ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ಭಾಗಿ; ಬಿಹಾರ ಚುನಾವಣೆಗೂ ಮುನ್ನ ಆಟಂ ಬಾಂಬ್ ಹಾಕಿದ ರಾಹುಲ್ ಗಾಂಧಿ!

ಚುನಾವಣಾ ಆಯೋಗದ ಅಕ್ರಮದ ಕುರಿತಾಗಿ ನನ್ನ ಬಳಿ "ಮುಕ್ತ ಮತ್ತು ಮುಚ್ಚಿದ ಪುರಾವೆ" ಇದೆ. ಈ ಮಾಹಿತಿಗಳು ಭಾರತದ ಚುನಾವಣಾ ವ್ಯವಸ್ಥೆಯ ಅಡಿಪಾಯವನ್ನೇ ಅಲುಗಾಡಿಸುವಷ್ಟು ಸ್ಫೋಟಕವಾಗಿದೆ. ಆಟಂ ಬಾಂಬ್ ರೀತಿಯ ಮಾಹಿತಿ ನನ್ನ ಬಳಿ ಇದೆ ಎಂ ರಾಹುಲ್ ಗಾಂಧಿ ಹೇಳಿದ್ದಾರೆ. ಚುನಾವಣಾ ಆಯೋಗದ ಕ್ರಮಗಳು ಬಿಜೆಪಿಗೆ ಲಾಭ ತರುವ ಗುರಿಯನ್ನು ಹೊಂದಿವೆ ಎಂದು ಅವರು ಆರೋಪಿಸಿದ್ದಾರೆ.

ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ಭಾಗಿ; ಬಿಹಾರ ಚುನಾವಣೆಗೂ ಮುನ್ನ ಆಟಂ ಬಾಂಬ್ ಹಾಕಿದ ರಾಹುಲ್ ಗಾಂಧಿ!
Rahul Gandhi

Updated on: Aug 01, 2025 | 5:29 PM

ನವದೆಹಲಿ, ಆಗಸ್ಟ್ 1: ಮತ್ತೊಮ್ಮೆ ಚುನಾವಣಾ ಆಯೋಗದ (Election Commission) ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಸಂಸದ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇತ್ತೀಚಿನ ಚುನಾವಣೆಗಳಿಗೆ ಸಂಬಂಧಿಸಿದ ಗಂಭೀರ ದುಷ್ಕೃತ್ಯವನ್ನು ಸ್ವತಂತ್ರ ತನಿಖೆಯು ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ.

ವಿರೋಧ ಪಕ್ಷದ ಸ್ವತಂತ್ರ ತನಿಖೆಯು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (BJP) ಲಾಭವಾಗುವಂತೆ ಭಾರತದ ಚುನಾವಣಾ ಆಯೋಗವು ಬೃಹತ್ “ಮತ ಕಳ್ಳತನ”ದಲ್ಲಿ ಭಾಗಿಯಾಗಿದೆ ಎಂದು ಬಹಿರಂಗಪಡಿಸಿದೆ ಎಂದು ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಹೆಚ್ಚುತ್ತಿರುವ ಗದ್ದಲದ ನಡುವೆ ಇಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸತ್ಯ ಹೇಳಿದ್ದಕ್ಕೆ ಸಂತೋಷ; ಭಾರತದ್ದು ‘ಸತ್ತ ಆರ್ಥಿಕತೆ’ ಎಂಬ ಟ್ರಂಪ್ ಹೇಳಿಕೆಗೆ ರಾಹುಲ್ ಗಾಂಧಿ ಬೆಂಬಲ

“ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಮುಕ್ತ ಮತ್ತು ಮುಚ್ಚಿದ ಪುರಾವೆಗಳಿವೆ. ಇಂತಹ ಅಕ್ರಮದಲ್ಲಿ ಚುನಾವಣಾ ಆಯೋಗದಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಸುಮ್ಮನೆ ಬಿಡುವುದಿಲ್ಲ” ಎಂದು ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದ್ದಾರೆ.


ನಿರ್ದಿಷ್ಟ ವ್ಯಕ್ತಿಗಳನ್ನು ಹೆಸರಿಸದೆ ಚುನಾವಣಾ ಆಯೋಗದೊಳಗಿನವರಿಗೆ ರಾಹುಲ್ ಗಾಂಧಿ ಕಠಿಣ ಎಚ್ಚರಿಕೆ ನೀಡಿದ್ದಾರೆ. “ನೀವು ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದೀರಿ. ಇದು ದೇಶದ್ರೋಹಕ್ಕಿಂತ ಕಡಿಮೆಯಿಲ್ಲ. ನೀವು ಎಲ್ಲಿದ್ದರೂ, ನೀವು ನಿವೃತ್ತರಾಗಿದ್ದರೂ ಸಹ ನಾವು ನಿಮ್ಮನ್ನು ಕಂಡುಹಿಡಿಯುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Vice President Election: ಭಾರತದ ಉಪರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿ

“ಮಧ್ಯಪ್ರದೇಶ ಚುನಾವಣೆ ಮತ್ತು ಲೋಕಸಭಾ ಚುನಾವಣೆಗಳ ಫಲಿತಾಂಶಗಳ ನಂತರ ನಮಗೆ ಅನುಮಾನಗಳು ಬಂದವು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಆ ಅನುಮಾನ ಇನ್ನಷ್ಟು ಬಲವಾಯಿತು. ಅದರಲ್ಲೂ ವಿಶೇಷವಾಗಿ 1 ಕೋಟಿ ಹೊಸ ಮತದಾರರನ್ನು ಅಂತಿಮ ಮತದಾರರ ಪಟ್ಟಿಗೆ ಇದ್ದಕ್ಕಿದ್ದಂತೆ ಸೇರಿಸಲಾಗಿದೆ ಎಂದು ನಮಗೆ ತಿಳಿದ ಬಳಿಕ ನಾವು ಆ ಕುರಿತು ಸ್ವತಂತ್ರವಾಗಿ ತನಿಖೆ ನಡೆಸಲು ನಿರ್ಧರಿಸಿದೆವು. ಆಗ ಚುನಾವಣಾ ಆಯೋಗವು ಈ ಬಗ್ಗೆ ಕ್ರಮ ಕೈಗೊಳ್ಳುವುದಿಲ್ಲ ಎಂದು ನಮಗೆ ಅರಿವಾಯಿತು. ಆದ್ದರಿಂದ, ನಾವು ನಮ್ಮದೇ ಆದ 6 ತಿಂಗಳಿಂದ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಅದರಲ್ಲಿ ನಮಗೆ ತಿಳಿದುಬಂದ ಮಾಹಿತಿ ಯಾವ ಪರಮಾಣು ಬಾಂಬ್‌ಗಿಂತಲೂ ಕಡಿಮೆಯಿಲ್ಲ. ಅದು ಒಮ್ಮೆ ಸ್ಫೋಟಗೊಂಡರೆ ಚುನಾವಣಾ ಆಯೋಗಕ್ಕೆ ಬಚ್ಚಿಟ್ಟುಕೊಳ್ಳಲು ಎಲ್ಲೂ ಸ್ಥಳವಿರುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ