Yashwant Sinha Nomination: ರಾಷ್ಟ್ರಪತಿ ಚುನಾವಣೆಗೆ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ

Presidential Election 2022: ಈಗಾಗಲೇ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಜಂಟಿ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಇಂದು ಹಲವು ವಿಪಕ್ಷ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

Yashwant Sinha Nomination: ರಾಷ್ಟ್ರಪತಿ ಚುನಾವಣೆಗೆ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ
ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಯಶವಂತ್ ಸಿನ್ಹಾ
Image Credit source: Money Control
Edited By:

Updated on: Jun 27, 2022 | 1:02 PM

ನವದೆಹಲಿ: ಭಾರತದಲ್ಲಿ ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ (Presidential Election) ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ (Yashwant Sinha) ಇಂದು (ಸೋಮವಾರ) ನಾಮಪತ್ರ ಸಲ್ಲಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಚುನಾವಣಾಧಿಕಾರಿಯಾಗಿರುವ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ ಮೋದಿ ಅವರಿಗೆ ಯಶವಂತ್ ಸಿನ್ಹಾ ಅವರು 4 ಸೆಟ್ ನಾಮಪತ್ರಗಳನ್ನು ಹಸ್ತಾಂತರಿಸಿದರು.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಡಿಎಂಕೆಯ ಎ. ರಾಜಾ ಮತ್ತು ಎನ್‌ಸಿ ನಾಯಕ ಫಾರೂಕ್ ಅಬ್ದುಲ್ಲಾ, ಎನ್‌ಸಿಪಿ ವರಿಷ್ಠ ಶರದ್ ಪವಾರ್ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರು ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸಿದಾಗ ಹಾಜರಿದ್ದರು.

ಜೂನ್ 21ರಂದು ಅಧ್ಯಕ್ಷೀಯ ಚುನಾವಣೆಗೆ ಸಿನ್ಹಾ ಅವರನ್ನು ವಿರೋಧ ಪಕ್ಷದ ಸಾಮಾನ್ಯ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಈಗಾಗಲೇ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಜಂಟಿ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಇಂದು ಹಲವು ವಿಪಕ್ಷ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್‌ನಿಂದ ಫಾರೂಕ್ ಅಬ್ದುಲ್ಲಾ, ಆರ್‌ಎಲ್‌ಡಿಯ ಜಯಂತ್ ಸಿನ್ಹಾ, ಸಿಪಿಐ(ಎಂ) ನ ಸೀತಾರಾಮ್ ಯೆಚೂರಿ, ಡಿಎಂಕೆಯ ಎ. ರಾಜಾ, ಸಿಪಿಐನ ಡಿ.ರಾಜಾ, ತೆಲಂಗಾಣ ಸಚಿವ ಮತ್ತು ಟಿಆರ್‌ಎಸ್ ನಾಯಕ ಕೆ.ಟಿ. ರಾಮರಾವ್ ಈ ವೇಳೆ ಉಪಸ್ಥಿತಿರಿದ್ದರು. 84 ವರ್ಷದ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು 14 ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮುಗೆ ನಮ್ಮ ಬೆಂಬಲ; ಮಾಯಾವತಿ ಘೋಷಣೆ

ಎರಡು ಪ್ರಮುಖ ವಿರೋಧ ಪಕ್ಷಗಳಾದ ಆಮ್ ಆದ್ಮಿ ಪಕ್ಷ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ತಮ್ಮ ಪ್ರತಿನಿಧಿಗಳನ್ನು ನಾಮನಿರ್ದೇಶನಕ್ಕೆ ಕಳುಹಿಸಲಿಲ್ಲ. ಎರಡು ದೊಡ್ಡ ಬಿಜೆಪಿಯೇತರ ಪಕ್ಷಗಳಾದ ಮಾಯಾವತಿಯವರ ಬಿಎಸ್​ಪಿ ಮತ್ತು ಒಡಿಶಾದಲ್ಲಿ ಬಿಜೆಡಿ ಈ ರಾಷ್ಟ್ರಪತಿ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯದ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಘೋಷಿಸಿವೆ. ಚುನಾಯಿತರಾದರೆ ದ್ರೌಪದಿ ಮುರ್ಮು ಭಾರತದ ಮೊದಲ ಬುಡಕಟ್ಟು ಅಧ್ಯಕ್ಷರಾಗುತ್ತಾರೆ.

Published On - 1:00 pm, Mon, 27 June 22