
ಶ್ರೀನಗರ, ಜೂನ್ 29: ಕಾಶ್ಮೀರ ಕಣಿವೆಯಲ್ಲಿ ಜಿಹಾದಿ ಭಯೋತ್ಪಾದನೆ ತೀವ್ರಗೊಂಡಿದ್ದ ಸಂದರ್ಭದಲ್ಲಿ ನಡೆದಿದ್ದ ಅತ್ಯಂತ ಭೀಕರ ಹಾಗೂ ಆಘಾತಕಾರಿ ಅಪರಾಧವೊಂದಕ್ಕೆ ಸಂಬಂಧಿಸಿದಂತೆ ದಶಕಗಳ ನಂತರ ಮಹತ್ವದ ಕಾನೂನು ಬೆಳವಣಿಗೆಯಾಗಿದೆ. ಕಾಶ್ಮೀರಿ ಪಂಡಿತ್ ಸಮುದಾಯದ ನರ್ಸ್ ಸರಳಾ ಭಟ್ ಅವರ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 36 ವರ್ಷಗಳ ಬಳಿಕ ಇದೀಗ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ಮುಖ್ಯಸ್ಥ ಯಾಸಿನ್ ಮಲಿಕ್ (Yasin Malik) ವಿರುದ್ಧ ಜಮ್ಮುವಿನ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ (ಚಾರ್ಜ್ಶೀಟ್) ಸಲ್ಲಿಕೆಯಾಗಿದೆ!.
ಏನಿದು ಘಟನೆ?:
1990ರ ಏಪ್ರಿಲ್ ತಿಂಗಳಲ್ಲಿ ಶ್ರೀನಗರದ ಸೌರಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (SKIMS) ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸರಳಾ ಭಟ್ ಅವರನ್ನು ಭಯೋತ್ಪಾದಕರು ಅಪಹರಿಸಿದ್ದರು. ಆಸ್ಪತ್ರೆಯಲ್ಲಿದ್ದ ಕೆಲವು ಸಹೋದ್ಯೋಗಿಗಳಿಂದಲೇ ಭಯೋತ್ಪಾದಕರಿಗೆ ಇವರ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಅಪಹರಣದ ನಂತರ ಸರಳಾ ಭಟ್ ಅವರನ್ನು ಸುದೀರ್ಘ ಕಾಲ ಕೂಡಿಟ್ಟು, ಅವರ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ನಂತರ ಏಪ್ರಿಲ್ 19, 1990ರಂದು ಅವರನ್ನು ಗುಂಡಿಕ್ಕಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಶವವನ್ನು ರಸ್ತೆಗೆ ಎಸೆಯಲಾಗಿತ್ತು. ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಓಡಿಸಲು ನಡೆದ ವ್ಯವಸ್ಥಿತ ಹಿಂಸಾಚಾರಗಳಲ್ಲಿ ಈ ಘಟನೆಯೂ ಒಂದಾಗಿತ್ತು.
ಇದನ್ನೂ ಓದಿ: ನೀವು ಅಸಲಿ ಕಾಶ್ಮೀರಿಗಳಲ್ಲ; ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆಗೆ ಪಿಒಕೆಯಲ್ಲಿ ಭಾರಿ ಆಕ್ರೋಶ
ಈ ಘಟನೆ ನಡೆದ ಸಮಯದಲ್ಲಿ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದರಿಂದ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಪ್ರಕರಣದ ತನಿಖೆ ದಶಕಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರದಲ್ಲಿ ನಡೆದ ಹಳೆಯ ಭಯೋತ್ಪಾದನಾ ಪ್ರಕರಣಗಳ ಮರುಸಂಘಟನೆ ಮತ್ತು ತನಿಖೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆಯು (SIA) ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಯಾಸಿನ್ ಮಲಿಕ್ ಮತ್ತು ಆತನ ಸಹಚರರ ವಿರುದ್ಧ ಅಧಿಕೃತವಾಗಿ ಚಾರ್ಜ್ಶೀಟ್ ದಾಖಲಿಸಿದೆ.
ಇದನ್ನೂ ಓದಿ: ಪಿಒಕೆಯಲ್ಲಿ ಕಾಶ್ಮೀರಿಗಳ ಹತ್ಯಾಕಾಂಡಕ್ಕೆ ಪಾಕಿಸ್ತಾನವೇ ಹೊಣೆ; ಭಾರತ ಖಂಡನೆ
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಯಾಸಿನ್ ಮಲಿಕ್ ಈಗಾಗಲೇ ದೋಷಿ ಎಂದು ಸಾಬೀತಾಗಿದ್ದು, ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದರೊಂದಿಗೆ 1990 ರಲ್ಲಿ ಭಾರತೀಯ ವಾಯುಸೇನೆಯ ಅಧಿಕಾರಿಗಳ ಹತ್ಯೆ ಮತ್ತು ಅಂದಿನ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅಪಹರಣ ಪ್ರಕರಣಗಳಲ್ಲೂ ಈತ ಪ್ರಮುಖ ಆರೋಪಿಯಾಗಿದ್ದಾನೆ. ಈಗ ಸರಳಾ ಭಟ್ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆಯಾಗಿರುವುದು ಯಾಸಿನ್ ಮಲಿಕ್ಗೆ ಕಾನೂನು ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ