Manish Sisodia: ನೀವು ನನಗೆ ತೊಂದರೆಯುಂಟು ಮಾಡಬಹುದು, ಉತ್ಸಾಹ ಕುಗ್ಗಿಸಲು ಸಾಧ್ಯವಿಲ್ಲ: ಜೈಲಿನಿಂದ ಸಂದೇಶ ಕಳುಹಿಸಿದ ಸಿಸೋಡಿಯಾ

ಸಾಹೇಬ್, ನೀವು ನನ್ನನ್ನು ಜೈಲಿಗೆ ಹಾಕುವ ಮೂಲಕ ನನಗೆ ತೊಂದರೆಯುಂಟು ಮಾಡಬಹುದು, ಆದರೆ ನೀವು ಉತ್ಸಾಹಕ್ಕೆ ಕುಂದುಂಟು ಮಾಡಲು ಸಾಧ್ಯವಿಲ್ಲ. ಬ್ರಿಟಿಷ್ ಆಡಳಿತಗಾರರು ಸ್ವಾತಂತ್ರ್ಯ ಹೋರಾಟಗಾರರಿಗೂ ತೊಂದರೆ ಕೊಟ್ಟರು. ಆದರೆ ಅವರ ಉತ್ಸಾಹ ಕುಗ್ಗಲಿಲ್ಲ

Manish Sisodia: ನೀವು ನನಗೆ ತೊಂದರೆಯುಂಟು ಮಾಡಬಹುದು, ಉತ್ಸಾಹ ಕುಗ್ಗಿಸಲು ಸಾಧ್ಯವಿಲ್ಲ: ಜೈಲಿನಿಂದ ಸಂದೇಶ ಕಳುಹಿಸಿದ ಸಿಸೋಡಿಯಾ
ಮನೀಶ್ ಸಿಸೋಡಿಯಾ

Updated on: Mar 11, 2023 | 2:08 PM

ಜೈಲು ಶಿಕ್ಷೆಯು ತನಗೆ ತೊಂದರೆಗಳನ್ನು ಉಂಟುಮಾಡಬಹುದು ಆದರೆ ಅದು ನನ್ನ ಉತ್ಸಾಹವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಬಂಧಿತ ಆಮ್ ಆದ್ಮಿ ಪಕ್ಷದ(AAP) ನಾಯಕ ಮನೀಶ್ ಸಿಸೋಡಿಯಾ (Manish Sisodia) ಅವರು ದೆಹಲಿಯ ತಿಹಾರ್ ಜೈಲಿನಿಂದ (Tihar jail) ಸಂದೇಶವೊಂದನ್ನು ಕಳುಹಿಸಿದ್ದಾರೆ. 2021-22ರ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಗುರುವಾರ ಅವರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿತ್ತು.

“ಸಾಹೇಬ್, ನೀವು ನನ್ನನ್ನು ಜೈಲಿಗೆ ಹಾಕುವ ಮೂಲಕ ನನಗೆ ತೊಂದರೆಯುಂಟು ಮಾಡಬಹುದು, ಆದರೆ ನೀವು ಉತ್ಸಾಹಕ್ಕೆ ಕುಂದುಂಟು ಮಾಡಲು ಸಾಧ್ಯವಿಲ್ಲ. ಬ್ರಿಟಿಷ್ ಆಡಳಿತಗಾರರು ಸ್ವಾತಂತ್ರ್ಯ ಹೋರಾಟಗಾರರಿಗೂ ತೊಂದರೆ ಕೊಟ್ಟರು. ಆದರೆ ಅವರ ಉತ್ಸಾಹ ಕುಗ್ಗಲಿಲ್ಲ ಜೈಲಿನಿಂದ ಮನೀಶ್ ಸಿಸೋಡಿಯಾ ಅವರ ಸಂದೇಶ ಎಂದು ಹಿಂದಿಯಲ್ಲಿ ಸಿಸೋಡಿಯಾ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಲಾಗಿದೆ.


ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದ ನಂತರ ದೆಹಲಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ:ELSS: ತೆರಿಗೆ ಉಳಿಸಲು ಎಸ್​ಐಪಿಗೆ ಹಣ ಹಾಕುತ್ತಿದ್ದೀರಾ? ಇಎಲ್​ಎಸ್​ಎಸ್ ಅಂಶದತ್ತ ಗಮನ ಇರಲಿ

ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಶುಕ್ರವಾರ ಸಿಸೋಡಿಯಾ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ಮಾರ್ಚ್ 17 ರವರೆಗೆ ಇಡಿ ರಿಮಾಂಡ್‌ಗೆ ಕಳುಹಿಸಿದೆ. ಅವರ “ವಿವರವಾದ ಮತ್ತು ವ್ಯಾಪಕವಾದ ವಿಚಾರಣೆ ಉದ್ದೇಶಗಳಿಗಾಗಿ ಅವರನ್ನು 7 ದಿನಗಳ ಅವಧಿಗೆ ಕಸ್ಟಡಿಗೆ ಒಪ್ಪಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ವಿಚಾರಣೆಯ ವೇಳೆ ಮನೀಶ್ ಸಿಸೋಡಿಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ದಯಾನ್ ಕೃಷ್ಣನ್ ಸಿಸೋಡಿಯಾ ಅವರನ್ನು 10 ದಿನಗಳ ಕಸ್ಟಡಿಗೆ ಕೋರಿರುವ ಇಡಿ ಮನವಿಯನ್ನು ವಿರೋಧಿಸಿದರು. ಕಾರ್ಯಾಚರಣೆಯ ವಿಧಾನವನ್ನು ಗುರುತಿಸಲು ಮತ್ತು ಸಮನ್ಸ್ ಪಡೆದ ಇತರ ವ್ಯಕ್ತಿಗಳನ್ನು ಎದುರಿಸಲು ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು 10 ದಿನಗಳ ಕಸ್ಟಡಿಗೆ ಕೋರುವುದಾಗಿ ಸಂಸ್ಥೆ ಹೇಳಿದೆ.
ಸಿಸೋಡಿಯಾ ಇತರರ ಹೆಸರಿನಲ್ಲಿ ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಗಳನ್ನು ಖರೀದಿಸಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಫೆಬ್ರವರಿ 26 ರಂದು ಮದ್ಯ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಮಾರ್ಚ್ 6 ರಂದು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಇದೇ ಪ್ರಕರಣದಲ್ಲಿ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಇಡಿ ಬಂಧಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ