AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ 75 ದೇಶಗಳಿಗೆ ಭಾರತದಿಂದ ರಕ್ಷಣಾ ಉತ್ಪನ್ನಗಳ ರಫ್ತು: ಫಲ ನೀಡುತ್ತಿದೆ ಆತ್ಮನಿರ್ಭರ ಭಾರತ್ ಉಪಕ್ರಮ

ಆತ್ಮನಿರ್ಭರ ಭಾರತ್ ಕರೆಯು ದೇಶದಲ್ಲಿ ಕೋವಿಡ್-19 ರೀತಿಯ ಪರಿಸ್ಥಿತಿ ಅಪ್ಪಿತಪ್ಪಿ ಮತ್ತೆ ಎದುರಾದರೆ ಅದನ್ನು ಸಶಕ್ತವಾಗಿ ಎದುರಿಸುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿ ರಾಷ್ಟ್ರವನ್ನು ರಚಿಸುವ ಗುರಿಯನ್ನು ಹೊಂದಿದೆ

ವಿಶ್ವದ 75 ದೇಶಗಳಿಗೆ ಭಾರತದಿಂದ ರಕ್ಷಣಾ ಉತ್ಪನ್ನಗಳ ರಫ್ತು: ಫಲ ನೀಡುತ್ತಿದೆ ಆತ್ಮನಿರ್ಭರ ಭಾರತ್ ಉಪಕ್ರಮ
ಆತ್ಮನಿರ್ಭರ ಭಾರತ್ ಉಪಕ್ರಮ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 19, 2021 | 7:24 PM

ಎಂಥ ವಿಚಿತ್ರ ನೋಡಿ; ಭಾರತ ದೇಶವು ಏಕಕಾಲಕ್ಕೆ ರಕ್ಷಣಾ ಉತ್ಪನ್ನಗಳ ಅತಿದೊಡ್ಡ ಆಮದುದಾರ ಮತ್ತು ರಫ್ತುದಾರ ದೇಶವಾಗಿಯೂ ಹೊರಹೊಮ್ಮಿದೆ. ಭಾರತವು ಆಮದುದಾರ ದೇಶ ಎಂದಷ್ಟೇ ಹೇಳಿದರೆ ಹೊಸದೇನನ್ನೂ ಹೇಳಿದಂತೆ ಆಗುವುದಿಲ್ಲ. ವಿಶ್ವದಲ್ಲಿ ಅತಿಹೆಚ್ಚು ಮೌಲ್ಯದ ರಕ್ಷಣಾ ಉತ್ಪನ್ನಗಳ ಆಮದುದಾರ ದೇಶ ಎಂದು ಅರಬ್ ಸಂಯುಕ್ತ ಸಂಸ್ಥಾನವನ್ನು (ಯುಎಇ) ಗುರುತಿಸಲಾಗುತ್ತದೆ. ನಂತರದ ಸ್ಥಾನದಲ್ಲಿ, ಅಂದರೆ ವಿಶ್ವದಲ್ಲಿ ಅತಿಹೆಚ್ಚು ಮೊತ್ತದ ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಎರಡನೇ ಸ್ಥಾನದಲ್ಲಿ ಭಾರತವಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ್ ಕರೆಯನ್ನು ರಕ್ಷಣಾ ಕ್ಷೇತ್ರದಷ್ಟು ಗಂಭೀರವಾಗಿ ಬೇರಾವ ಕ್ಷೇತ್ರವೂ ಪರಿಗಣಿಸಿಲ್ಲ. ಆತ್ಮನಿರ್ಭರ ಭಾರತ್ ಕರೆಯು ದೇಶದಲ್ಲಿ ಕೋವಿಡ್-19 ರೀತಿಯ ಪರಿಸ್ಥಿತಿ ಅಪ್ಪಿತಪ್ಪಿ ಮತ್ತೆ ಎದುರಾದರೆ ಅದನ್ನು ಸಶಕ್ತವಾಗಿ ಎದುರಿಸುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿ ರಾಷ್ಟ್ರವನ್ನು ರಚಿಸುವ ಗುರಿಯನ್ನು ಹೊಂದಿದೆ. ಅದಕ್ಕೂ ಮೊದಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ, ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಪ್ರಧಾನಿಯವರು ಕರೆ ನೀಡಿದ್ದರು.

ರಕ್ಷಣಾ ಉಪಕರಣಗಳು ಮತ್ತು ಸಾಮಗ್ರಿಗಳ ರಫ್ತಿನ ಪ್ರಮಾಣ ಪ್ರತಿವರ್ಷವೂ ಹೆಚ್ಚುತ್ತಿದೆ. ಪ್ರಧಾನಿಯವರ ಕರೆಗೆ ರಕ್ಷಣಾ ಕ್ಷೇತ್ರವು ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಭಾರತ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ದೇಶವು 2014ರಿಂದ ಈಚೆಗೆ ಏಳು ವರ್ಷಗಳಲ್ಲಿ ₹ 38,500 ಕೋಟಿ ಮೌಲ್ಯದ ಮಿಲಿಟರಿ ಹಾರ್ಡ್‌ವೇರ್ ಮತ್ತು ಸಿಸ್ಟಮ್‌ಗಳನ್ನು ರಫ್ತು ಮಾಡಿದೆ.

ಸಂಸತ್ತಿನಲ್ಲಿ ಸರ್ಕಾರ ಒದಗಿಸಿರುವ ವಿವರಗಳ ಪ್ರಕಾರ 2014-15ರಲ್ಲಿ ಭಾರತದ ರಕ್ಷಣಾ ರಫ್ತು ₹ 1,940.64 ಕೋಟಿ ಮೌಲ್ಯದ್ದಾಗಿತ್ತು. 2015-16ರಲ್ಲಿ ಅದು ₹ 2,059.18 ಕೋಟಿಗೆ ಏರಿಕೆಯಾಯಿತು. 2016-17ರಲ್ಲಿ ₹ 1,521.91 ಕೋಟಿ, 2017-18ರಲ್ಲಿ ₹ 4,682.36 ಕೋಟಿ, 2018-19ರಲ್ಲಿ ₹ 10,745.77 ಕೋಟಿ, 2019-20ರಲ್ಲಿ ₹ 9,115.55 ಕೋಟಿ ಮತ್ತು 2020-21ರಲ್ಲಿ ₹ 8,434.84 ಕೋಟಿ ಮೊತ್ತದ ವಹಿವಾಟು ನಡೆದಿದೆ. 2014-15ರಿಂದ ಈವರೆಗಿನ ಎಲ್ಲವನ್ನೂ ಕೂಡಿಸಿದರೆ ರಫ್ತಿನ ಒಟ್ಟು ಮೊತ್ತವು ₹ 38,500.25 ಕೋಟಿಗಳಷ್ಟು ಆಗುತ್ತದೆ.

ಕಳೆದ ಐದು ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತು ಪ್ರಮಾಣ ಶೇ 325ರಷ್ಟು ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಚೆಗೆ ಹೇಳಿದ್ದರು. ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಲ್ಲಿ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಜಂಟಿ ಉದ್ಯಮ ಮತ್ತು ಸಮನ್ವಯವು ಇದಕ್ಕೆ ಕಾರಣ ಎಂಬುದು ಅವರ ಅಭಿಪ್ರಾಯ. ಸ್ಥಳೀಯ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸುವ ಉದ್ದೇಶದಿಂದ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ ವಿಸರ್ಜಿಸಲು ಸರ್ಕಾರವು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಏಳು ಹೊಸ ಕಂಪನಿಗಳು ದೇಶದಲ್ಲಿ ಸೇನೆಗೆ ಪ್ರಬಲ ನೆಲೆಯನ್ನು ರೂಪಿಸಲಿವೆ.

‘ಆತ್ಮ ನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ದೃಷ್ಟಿಗೆ ಅನುಗುಣವಾಗಿ ಈ ಹೊಸ ಕಂಪನಿಗಳು ಆಮದಿಗೆ ಪರ್ಯಾಯವಾದ ತಯಾರಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಮೋದಿ ಅವರು ಸಂಸತ್ತಿನಲ್ಲಿ ಹೇಳಿದ್ದರು. ಕಳೆದ ಐದು ವರ್ಷಗಳಲ್ಲಿ ನಮ್ಮ ರಕ್ಷಣಾ ರಫ್ತು ಶೇ 325ರಷ್ಟು ಹೆಚ್ಚಿರುವುದರಿಂದ, ನಮ್ಮ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಪರಿಣತಿಯನ್ನು ಸಾಧಿಸುವುದು ಮಾತ್ರವಲ್ಲದೆ ಜಾಗತಿಕ ಬ್ರ್ಯಾಂಡ್ ಆಗುವುದು ನಮ್ಮ ಗುರಿಯಾಗಿದೆ ಎಂದೂ ಅವರು ತಿಳಿಸಿದರು. ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಅಂತರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ) ಸಂಸ್ಥೆಯ 2020ರ ವರದಿಯನ್ನು ಉಲ್ಲೇಖಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುವ ಟಾಪ್-25 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ ಎಂದು ಹೇಳಿದ್ದಾರೆ.

2025ರ ವೇಳೆಗೆ 5 ಶತಕೋಟಿ ಅಮೆರಿಕನ್ ಡಾಲರ್ ವಾರ್ಷಿಕ ರಫ್ತು ಗುರಿಯೊಂದಿಗೆ ವಿಶ್ವದ ಅಗ್ರ ಐದು ಏರೋಸ್ಪೇಸ್ ಮತ್ತು ರಕ್ಷಣಾ ತಯಾರಕರಲ್ಲಿ ಒಂದಾಗುವ ಗುರಿಯೊಂದಿಗೆ ‘ಡಿಫೆನ್ಸ್ ಪ್ರೊಡಕ್ಷನ್ ಪಾಲಿಸಿ-2018′ ಅನ್ನು ಭಾರತವು ಜಾರಿಗೆ ತಂದಿತು. ಆದರೆ, ಆರ್ಡಿನೆನ್ಸ್​ ಫ್ಯಾಕ್ಟರಿ ಬೋರ್ಡ್​ (Ordinance Factory Board – OFB) ರೀತಿಯ ಕೈಗಾರಿಕೆಗಳ ಮೇಲಿನ ರಫ್ತು ನಿರ್ಬಂಧಗಳ ಕಾರಣದಿಂದಾಗಿ ಶಸ್ತ್ರಾಸ್ತ್ರ ರಫ್ತುದಾರ ದೇಶವಾಗಿ ಭಾರತವು ಇನ್ನೂ ಶೈಶವಾವಸ್ಥೆಯಲ್ಲಿದೆ. ಈ ಎಲ್ಲದರ ನಡುವೆ, ದೇಶದ ರಫ್ತು ಉದ್ಯಮವು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳ ಬಿಡಿಭಾಗಗಳು, ರಾಸಾಯನಿಕಗಳು ಮತ್ತು ಸ್ಫೋಟಕಗಳು, ಪ್ಯಾರಾಚೂಟ್‌ಗಳು, ಚರ್ಮ ಮತ್ತು ಬಟ್ಟೆಯ ವಸ್ತುಗಳನ್ನು ಥೈಲ್ಯಾಂಡ್, ಮಲೇಷ್ಯಾ, ಇಂಡೋನೇಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ, ಜರ್ಮನಿ, ಬೆಲ್ಜಿಯಂ, ಟರ್ಕಿ, ಈಜಿಪ್ಟ್, ಓಮನ್, ಇಸ್ರೇಲ್, ಕೀನ್ಯಾ, ನೈಜೀರಿಯಾ, ಬೋಟ್ಸ್ ವಾನ, ಚಿಲಿ, ಸುರಿನಾಮ್ ಮತ್ತು ಅಮೆರಿಕ ಮುಂತಾದ 30ಕ್ಕೂ ಹೆಚ್ಚು ದೇಶಗಳನ್ನು ಕೇಂದ್ರೀಕರಿಸಿದೆ.

ಭಾರತದ ರಕ್ಷಣಾ ರಫ್ತುಗಳಲ್ಲಿನ ಈ ಗಣನೀಯ ಹೆಚ್ಚಳಕ್ಕೆ 2014ರಿಂದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಅಳವಡಿಸಿಕೊಂಡ ಉದಾರ ನೀತಿಗಳೇ ಮುಖ್ಯ ಕಾರಣವಾಗಿವೆ. ಮಾರ್ಚ್ 2011ರಲ್ಲಿ, ಭಾರತವು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ‘ಬರಾಕುಡಾ’ ಎಂಬ ತನ್ನ ಮೊದಲ ಮಲ್ಟಿರೋಲ್ ಆಫ್‌ಶೋರ್ ಗಸ್ತು ಹಡಗನ್ನು ಮಾರಿಷಸ್‌ಗೆ ಮಾರಾಟ ಮಾಡಲು ಒಪ್ಪಿಕೊಂಡಿತು. ಮಾರ್ಚ್ 2017ರಲ್ಲಿ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ, ಹಗುರವಾದ 37.9 ದಶಲಕ್ಷ ಡಾಲರ್ ಮೌಲ್ಯದ ಟಾರ್ಪೆಡೊಗಳ ಮಾರಾಟಕ್ಕಾಗಿ ಭಾರತವು ಮ್ಯಾನ್ಮಾರ್‌ನೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸಿದೆ. ಇದೇ ರೀತಿಯ ನೌಕಾಪಡೆಗೆ ಉಪಯುಕ್ತವಾಗುವ ವೇದಿಕೆಗಳನ್ನು ಶ್ರೀಲಂಕಾ ಮತ್ತು ವಿಯೆಟ್ನಾಂಗೆ ಮಾರಾಟ ಮಾಡಲಾಯಿತು.

ಸುಖೋಯ್ ಯುದ್ಧವಿಮಾನ (ಒಳಚಿತ್ರದಲ್ಲಿ ಲೇಖಕ ಗಿರೀಶ್ ಲಿಂಗಣ್ಣ)

ಸೆಪ್ಟೆಂಬರ್ 2017ರಲ್ಲಿ, ಯುಎಇಗೆ ನಲವತ್ತು ಸಾವಿರ ‘155 ಎಂಎಂ’ ಫಿರಂಗಿ ಶೆಲ್‌ಗಳನ್ನು ಪೂರೈಸಲು 43 ಶತಕೋಟಿ ಅಮೆರಿಕನ್ ಡಾಲರ್‌ ಮೊತ್ತದ ಒಪ್ಪಂದವನ್ನು ಭಾರತದ ಒಎಫ್​ಬಿ ಮಾಡಿಕೊಂಡಿತು. ಆಗಸ್ಟ್ 2019ರಲ್ಲಿ, ಮತ್ತೊಮ್ಮೆ 50,000 ಫಿರಂಗಿ ಶೆಲ್‌ಗಳನ್ನು ಪೂರೈಸಲು ಯುಎಇಯಿಂದ ಎರಡನೇ ಆದೇಶವನ್ನು OFB ಪಡೆಯಿತು.

ಖಾಸಗಿ ವಲಯದ ಸುಮಾರು 50 ಭಾರತೀಯ ಕಂಪನಿಗಳು ರಕ್ಷಣಾ ರಫ್ತಿಗೆ ತಮ್ಮ ಕೊಡುಗೆ ನೀಡಿವೆ. ರಕ್ಷಣಾ ಉತ್ಪನ್ನಗಳಿಗೆ ಇಟಲಿ, ಮಾಲ್ಡೀವ್ಸ್, ಶ್ರೀಲಂಕಾ, ರಷ್ಯಾ, ಫ್ರಾನ್ಸ್, ನೇಪಾಳ, ಮಾರಿಷಸ್, ಇಸ್ರೇಲ್, ಈಜಿಪ್ಟ್, ಯುಎಇ, ಭೂತಾನ್, ಇಥಿಯೋಪಿಯಾ, ಸೌದಿ ಅರೇಬಿಯಾ, ಫಿಲಿಪೈನ್ಸ್, ಪೋಲೆಂಡ್, ಸ್ಪೇನ್ ಮತ್ತು ಚಿಲಿ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ರಫ್ತು ಮಾಡಲಾಗುತ್ತಿರುವ ಪ್ರಮುಖ ರಕ್ಷಣಾ ವಸ್ತುಗಳಲ್ಲಿ ವೈಯಕ್ತಿಕ ರಕ್ಷಣಾ ವಸ್ತುಗಳು, ಕಡಲಾಚೆಯ ಗಸ್ತು ಹಡಗುಗಳು, ALH ಹೆಲಿಕಾಪ್ಟರ್, SU ಏವಿಯಾನಿಕ್ಸ್, ಭಾರತಿ ರೇಡಿಯೋ, ಕರಾವಳಿ ಕಣ್ಗಾವಲು ವ್ಯವಸ್ಥೆಗಳು, ಕವಚ್ MoD II ಲಾಂಚರ್ ಮತ್ತು FCS, ರಾಡಾರ್, ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಮತ್ತು ಲೈಟ್ ಎಂಜಿನಿಯರಿಂಗ್ ಮೆಕ್ಯಾನಿಕಲ್ ಭಾಗಗಳಿಗೆ ಬಿಡಿಭಾಗಗಳು ಸೇರಿವೆ. ಪ್ರಸ್ತುತ ಭಾರತದಿಂದ ಸುಮಾರು 75 ದೇಶಗಳಿಗೆ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ.

(ಲೇಖಕ ಗಿರೀಶ್ ಲಿಂಗಣ್ಣ ಎಡಿಡಿ ಇಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು)

ಇದನ್ನೂ ಓದಿ: National Defence: ಕೈಲಿ ಮಿಠಾಯಿ, ಬಗಲಲ್ಲಿ ದೊಣ್ಣೆ: ಭಾರತವನ್ನು ಬಾಗಿಸುವ ಅಮೆರಿಕದ ಯತ್ನ ಎಸ್​-400 ವಿಚಾರದಲ್ಲಿ ವಿಫಲವಾಗಿದ್ದು ಏಕೆ? ಇದನ್ನೂ ಓದಿ: National Defence: ಕ್ಷಿಪಣಿ ನಿರೋಧಕ ವ್ಯವಸ್ಥೆ: ರಷ್ಯಾದ ಎಸ್-400 vs ಅಮೆರಿಕದ ಥಾಡ್- ಭಾರತಕ್ಕೆ ಯಾವುದು ಹಿತ?

Published On - 7:19 pm, Sun, 19 December 21

ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!