- Kannada News Photo gallery Aradhya Devi Maramma Festival of Chitradurga, Here is a glimpse of the fair that unveils the tribal culture, Kannada News
ಚಿತ್ರದುರ್ಗ ಜನರ ಆರಾಧ್ಯ ದೇವಿ ಮಾರಮ್ಮನ ಅದ್ದೂರಿ ಉತ್ಸವ; ಬುಡಕಟ್ಟು ಸಂಸ್ಕೃತಿ ಅನಾವರಣಗೊಳಿಸುವ ಜಾತ್ರೆಯ ಝಲಕ್ ಇಲ್ಲಿದೆ
ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಭಕ್ತರು ಹೂವು, ಹಣ್ಣು ಎಸೆಯುವುದು ಸಹಜ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಆರಾಧ್ಯ ದೇವಿಯ ಉತ್ಸವದ ವೇಳೆ ಕೋಳಿಗಳನ್ನು ತೂರುವ ಅಪರೂಪದ ಆಚರಣೆ ನಡೆಯುತ್ತದೆ. ಬುಡಕಟ್ಟು ಸಂಸ್ಕೃತಿ ಅನಾವರಣಗೊಳಿಸುವ ಉತ್ಸವದ ಝಲಕ್ ಇಲ್ಲಿದೆ.
Updated on:Sep 04, 2024 | 6:18 PM

ಕರ್ನಾಟಕ ಮತ್ತು ಆಂಧ್ರ ಗಡಿ ಭಾಗದ ಗ್ರಾಮದ ಜನರ ಆರಾಧ್ಯ ದೇವಿ ಮಾರಮ್ಮನ ಅದ್ಧೂರಿ ಉತ್ಸವ ಮೂರ್ತಿ ಮೆರವಣಿಗೆ ವೇಳೆ ಕೋಳಿ ತೂರಿ ಹರಕೆ ತೀರಿಸುವ ಭಕ್ತರು. ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ಜನಸಾಗರ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ.

ಪ್ರತಿ ವರ್ಷಕ್ಕೊಮ್ಮೆ ಈ ಗ್ರಾಮದಲ್ಲಿ ಮಾರಮ್ಮ ದೇವಿಯ ಜಾತ್ರೆ, ಉತ್ಸವ ಸಂಭ್ರಮದಿಂದ ನಡೆಯುತ್ತದೆ. ಕರ್ನಾಟಕ ಮಾತ್ರ ಅಲ್ಲದೆ ಆಂಧ್ರ ಪ್ರದೇಶದಿಂದಲೂ ಭಕ್ತರು ಆಗಮಿಸುತ್ತಾರೆ. ಗ್ರಾಮದ ದೇಗುಲದಿಂದ ಹೊರವಲಯದಲ್ಲಿರುವ ಮಾರಮ್ಮ ದೇವಿಯ ಪ್ರದೇಶದವರೆಗೆ ಭವ್ಯ ಮೆರವಣಿಗೆ ನಡೆಯುತ್ತದೆ.

ಈ ವೇಳೆ ಹರಕೆ ಹೊತ್ತ ಭಕ್ತರು ಹೂವು, ಹಣ್ಣು ಮತ್ತು ಕೆಲವರು ಕೋಳಿಗಳನ್ನು ತೂರಿ ಹರಕೆ ತೀರಿಸುವ ಆಚರಣೆ ಕಾಲಾನುಕಾಲದಿಂದ ನಡೆದುಕೊಂಡು ಬಂದಿದೆ.

ಇನ್ನು ಮಧ್ಯಾಹ್ನದ ಮಾರಮ್ಮ ಎಂದೇ ಕರೆಯುವ ಈ ದೇವಿಯ ಉತ್ಸವ ಮಧ್ಯಾಹ್ನದ ವೇಳೆ ಅದ್ಧೂರಿಯಾಗಿ ನಡೆಯುತ್ತದೆ. ಸಂಜೆ ವೇಳೆ ತುಂಬುಲು ಪ್ರದೇಶದಲ್ಲಿನ ದೇಗುಲ ಬಳಿ ಒಬ್ಬರ ಮೇಲೊಬ್ಬರು ಏರಿ ಕಲ್ಲಿನ ಕಂಬವೇರಿ ದೀಪ ಬೆಳಗುತ್ತಾರೆ. ಆ ಮೂಲಕ ಮಳೆ, ಬೆಳೆ ಸಮೃದ್ಧಿಯಾಗಿದ್ದು, ಜನರ ಬದುಕು ಬೆಳಗಲಿ ಎಂದು ಆರಾಧ್ಯ ದೇವಿಯಲ್ಲಿ ಪ್ರಾರ್ಥಿಸುತ್ತಾರೆ.

ಸಂಕಷ್ಟ ಪರಿಹಾರಕ್ಕಾಗಿ ಭಕ್ತರು ವಿವಿಧ ಹರಕೆಗಳನ್ನು ಹೊತ್ತಿರುತ್ತಾರೆ. ಜಾನುವಾರು, ಕುರಿ-ಕೋಳಿ ಸಾಕಣೆಯೇ ಪ್ರಮುಖ ಕಸುಬಾಗಿರುವ ಈ ಭಾಗದ ಜನರು ಕುರಿ-ಕೋಳಿ ರಕ್ಷಣೆಗೂ ಹರಕೆ ಹೊತ್ತಿರುತ್ತಾರೆ. ಹೀಗಾಗಿ, ರಕ್ಷಿಸಿದ ದೇವಿಗೆ ಭಕ್ತರು ಕುರಿ, ಕೋಳಿಗಳನ್ನೇ ಅರ್ಪಿಸುವ ಮೂಲಕ ಹರಕೆ ತೀರಿಸುತ್ತಾರಂತೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಗಡಿ ಭಾಗದಲ್ಲಿ ಈ ಭಾಗದ ಬುಡಕಟ್ಟು ಸಮುದಾಯದ ಸಂಸ್ಕೃತಿ ಅನಾವರಣಗೊಂಡಿದೆ. ಪರಂಪರಾಗತವಾಗಿ ಆಚರಿಸಿಕೊಂಡು ಬಂದ ಜಾತ್ರೆ, ಉತ್ಸವಗಳು ಇಂದಿಗೂ ಯಥಾವತ್ತಾಗಿ ನಡೆಯುತ್ತಿವೆ. ವಿಶೇಷ ಉತ್ಸವಗಳು ಈ ಭಾಗದ ಜನರ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿದೆ.
Published On - 6:15 pm, Wed, 4 September 24




