
ಕಿರುತೆರೆಯ ಜನಪ್ರಿಯ ಜೋಡಿ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೂತನ ಫೋಟೋ ಮತ್ತು ಕ್ಯಾಪ್ಷನ್ ಈಗ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. 'ಹರ ಹರ ಮಹಾದೇವ' ಧಾರಾವಾಹಿಯ ಶಿವ-ಸತಿಯಾಗಿ ಕಿರುತೆರೆ ವೀಕ್ಷಕರ ಮನಗೆದ್ದಿದ್ದ ಈ ನಟ-ನಟಿ, ಇದೀಗ ತಮ್ಮ ಮುಂದಿನ ನಡೆ ಏನು ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಇಬ್ಬರೂ ಪ್ರಬಲ ಸ್ಪರ್ಧಿಗಳಾಗಿ ಕಣಕ್ಕಿಳಿದು ಹಾವು-ಮುಂಗುಸಿಯಂತೆ ಸೆಣೆಸಾಡಿದ್ದರು. ಮನೆಯಲ್ಲಿ ಅವರ ನಡುವೆ ನಡೆದ ಪ್ರತಿಯೊಂದು ಟಾಸ್ಕ್ ಹಾಗೂ ಜಗಳಗಳು ಇಡೀ ಶೋನ ಟಿಆರ್ಪಿಯನ್ನೇ ಬದಲಾಯಿಸಿದ್ದವು. ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯಂತ ತೀವ್ರ ಸ್ಪರ್ಧೆ ನೀಡಿದ ಕಾಂಪೇಟಿಟರ್ಸ್ ಎನಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇದೀಗ ಬಿಗ್ ಬಾಸ್ 'ಅಗ್ನಿಪರೀಕ್ಷೆ' ಕಾರ್ಯಕ್ರಮದಲ್ಲಿ ಜಡ್ಜ್ಗಳಾಗಿ ಜಂಟಿಯಾಗಿ ಕಾಣಿಸಿಕೊಳ್ಳುತ್ತಿರುವ ಇವರಿಬ್ಬರು, ತಮ್ಮ ವಿಭಿನ್ನ ಶೈಲಿ ಮತ್ತು ತೀರ್ಪಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಇವರ ಕಾಂಬಿನೇಷನ್ ಹಾಗೂ ಸ್ಕ್ರೀನ್ ಪ್ರೆಸೆಂಟ್ ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಕಿರುತೆರೆ ವಲಯದಲ್ಲೂ ಭಾರಿ ಸೌಂಡ್ ಮಾಡುತ್ತಿದೆ.
ಪ್ರತಿಯೊಂದು ಹಂತದಲ್ಲೂ ತಮ್ಮದೇ ಆದ ಹೊಸ ಮಾನದಂಡ ನಿರ್ಮಿಸುತ್ತಾ ಬಂದಿರುವ ಈ ಜೋಡಿ, ‘ಮುಂದಿನ ಹಂತ ಏನು?’ ಎಂದು ನೆಟ್ಟಿಗರನ್ನು ಪ್ರಶ್ನಿಸಿದೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಇವರಿಬ್ಬರೂ ಶೀಘ್ರದಲ್ಲೇ ಪೂರ್ಣಪ್ರಮಾಣದ ಬೆಳ್ಳಿಪರದೆಯ ಮೇಲೆ ನಾಯಕ-ನಾಯಕಿಯಾಗಿ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎಂದು ಬಲವಾಗಿ ಊಹಿಸುತ್ತಿದ್ದಾರೆ.
ಸಂಗೀತಾ ಮತ್ತು ವಿನಯ್, ಮುಂದಿನ ದಿನಗಳಲ್ಲಿ ಯಾವ ರೀತಿಯ ಪ್ರಾಜೆಕ್ಟ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಈ ಜೋಡಿಯ ಮುಂದಿನ ಬಿಗ್ ಅನೌನ್ಸ್ಮೆಂಟ್ ಏನಿರಬಹುದು ಎಂದು ತಿಳಿಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.