
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಶುರುವಿಗೆ ಕ್ಷಣಗಣನೆ ಆರಂಭ ಆಗಿದೆ. ಇದಕ್ಕೂ ಮೊದಲು ‘ರಾಜಾ ರಾಣಿ’ ರಿಯಾಲಿಟಿ ಶೋ ಫಿನಾಲೆಯಲ್ಲಿ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ಅವರು ಯಾರು? ಅವರ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.

ಗೌತಮಿ ಜಾಧವ್ ಅವರು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತುದ್ದ ‘ಸತ್ಯ’ ಧಾರಾವಾಹಿಯಲ್ಲಿ ಮಿಂಚಿದ್ದರು. ಅವರು ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ. ಧಾರಾವಾಹಿಯಲ್ಲಿ ಅವರದ್ದು ಸಖತ್ ರಗಡ್ ಪಾತ್ರ. ನಿಜ ಜೀವನದಲ್ಲಿ ಅವರು ಯಾವ ರೀತಿ ಇರುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ‘ಬಿಗ್ ಬಾಸ್’ ಸಹಕಾರಿ ಆಗಲಿದೆ.

ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಲಾಯರ್ ಜಗದೀಶ್. ಇತ್ತೀಚೆಗೆ ಇವರ ಹೆಸರು ಸಾಕಷ್ಟು ಚರ್ಚೆಯಲ್ಲಿ ಇತ್ತು. ದರ್ಶನ್ ಅವರನ್ನು ಹೊರಕ್ಕೆ ತರಲು ತಾವು ಪ್ರತಿಭಟನೆ ಮಾಡೋದಾಗಿ ಅವರು ಹೇಳಿಕೊಂಡಿದ್ದರು. ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ, ದರ್ಶನ್ ಇಲ್ಲದೆ ಪ್ರತಿಭಟನೆ ಫ್ಲಾಪ್ ಆಯಿತು.

ಚೈತ್ರಾ ಕುಂದಾಪುರ ಕೂಡ ಈ ಬಾರಿಯ ‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ ಹಿಂದೂಪರ ಭಾಷಣಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕೆಲವು ಸಂದರ್ಭದಲ್ಲಿ ದ್ವೇಷ ಭಾಷಣಗಳನ್ನು ಮಾಡಿದ ಆರೋಪವೂ ಚೈತ್ರಾ ಮೇಲಿದೆ. ಬಿಜೆಪಿ ಟಿಕೇಟ್ ಕೊಡಿಸೋದಾಗಿ ಭಾರಿ ಮೊತ್ತದ ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿದ್ದರು.

ಗೋಲ್ಡ್ ಸುರೇಶ್ ಹೆಸರಿನ ವ್ಯಕ್ತಿ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಕಳೆದ ವರ್ಷ ವರ್ತೂರು ಸಂತೋಷ್ ಚಿನ್ನ ಹೇರಿಕೊಂಡು ಬಂದಿದ್ದರು. ಈ ಬಾರಿ ಗೋಲ್ಡ್ ಸುರೇಶ್ ಅವರ ಎಂಟ್ರಿ ಆಗಿದೆ. ಅವರು ಉತ್ತರ ಕರ್ನಾಟಕದವರು.