
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ಕಪ್ ಗೆಲ್ಲುವ ಸನಿಹದಲ್ಲಿ ಇದ್ದಾರೆ. ಅವರು ಉತ್ತಮ ಆಟ ಪ್ರದರ್ಶನ ನೀಡಿದ್ದಾರೆ. ‘ಬಿಗ್ ಬಾಸ್ 11’ರಲ್ಲಿ ಕಪ್ ಗೆಲ್ಲುವ ಕನಸು ಕಂಡಿರುವ ಅವರಿಗೆ ಸಾಕಷ್ಟು ಅಡೆತಡೆಗಳು ಕೂಡ ಇವೆ. ಅವರು ಕಪ್ ಗೆಲ್ಲೋದು ಅಷ್ಟು ಸುಲಭದಲ್ಲಿ ಇಲ್ಲ.

‘ಬಿಗ್ ಬಾಸ್’ನಲ್ಲಿ ಉತ್ತಮ ಆಟಗಾರ ಹಾಗೂ ಮಾತುಗಾರ ಎನಿಸಿಕೊಂಡಿದ್ದಾರೆ ತ್ರಿವಿಕ್ರಂ. ಅವರು ಅನೇಕ ಬಾರಿ ಟಾಸ್ಕ್ನಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ಇನ್ನು ನೆಗೆಟಿವ್ ವಿಚಾರಗಳೂ ಇವೆ. ಭವ್ಯಾ ಜೊತೆ ಇದ್ದಿದ್ದು ಅವರ ಜರ್ನಿಗೆ ಪ್ಲಸ್ ಹಾಗೂ ಮೈನಸ್ ಎರಡೂ ಆಗಿದೆ. ತ್ರಿವಿಕ್ರಂ ಆಟಕ್ಕೆ ಭವ್ಯಾ ಹಿನ್ನಡೆ ಆದರು ಎನ್ನುವ ಆರೋಪವೂ ಇದೆ. ಇದರ ಜೊತೆ ಇಬ್ಬರ ನಡುವಿನ ಆಪ್ತತೆ ಅವರಿಗೆ ಹೆಚ್ಚು ಹೈಲೈಟ್ ಆಗಲು ಸಹಕಾರಿ ಆಗಿದೆ.

ಇನ್ನು ಟಾಸ್ಕ್ ವಿಚಾರಕ್ಕೆ ಬಂದರೆ ಕೆಲವೊಮ್ಮೆ ಅವರಿಗಿಂತ ಇತರ ಆಟಗಾರರೇ ಹೆಚ್ಚು ಉತ್ತಮ ಪ್ರದರ್ಶನ ನೀಡಿದ ಉದಾಹರಣೆ ಇದೆ. ಫಿನಾಲೆ ವಾರಕ್ಕೆ ನೇರವಾಗಿ ಟಿಕೆಟ್ ಪಡೆಯೋ ಟಾಸ್ಕ್ನಲ್ಲಿ ಹನುಮಂತ ಅವರು ತ್ರಿವಿಕ್ರಂಗಿಂತ ಉತ್ತಮವಾಗಿ ಆಡಿದ್ದು ಒಳ್ಳೆಯ ಉದಾಹರಣೆ. ಈ ರೀತಿಯ ಹಲವು ತಪ್ಪನ್ನು ಅವರು ಮಾಡಿದ್ದಾರೆ.

ಇನ್ನು, ಯಾವುದೇ ರೀತಿಯ ಮನರಂಜನೆಯನ್ನು ಅವರು ನೀಡಿಲ್ಲ. ಇದನ್ನು ತ್ರಿವಿಕ್ರಂ ಅವರೇ ಈ ಮೊದಲು ಒಪ್ಪಿಕೊಂಡಿದ್ದಾರೆ. ಟಾಸ್ಕ್ ಆಡೋಕೆ ಅವಕಾಶ ಸಿಗದೆ ಇದ್ದಾಗ ಅವರ ಬಾಯಲ್ಲಿ ಈ ಮಾತು ಬಂದಿತ್ತು. ‘ನಾವು ಮನರಂಜನೆಯಲ್ಲಿ ಏನೂ ಇಲ್ಲ, ಕೊನೆಯ ಪಕ್ಷ ಟಾಸ್ಕ್ ಆದರೂ ಆಡೋಕೆ ಕೊಡಬೇಕು’ ಎಂದು ಅವರು ಹೇಳಿಕೊಂಡಿದ್ದರು.