ಆಚಾರ್ಯ ಚಾಣಕ್ಯ ಮಾನವನ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ವಿಚಾರಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ಇಂತಹಾ ಅಂಶಗಳನ್ನು ಮಾಡದೇ ಇರುವುದು ಉತ್ತಮ, ಹೀಗೆ ಬದುಕಿದರೆ ಅನುಕೂಲ ಎಂಬ ಇತ್ಯಾದಿ ನೆಲೆಯಲ್ಲಿ ಚಾಣಕ್ಯ ನೀತಿಯನ್ನು ಬೋಧಿಸಿದ್ದಾರೆ. ಇಂದು ಅಂತಹ ಒಂದು ವಿಚಾರದ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಚಾಣಕ್ಯ ನೀತಿಯ ಪ್ರಕಾರ ಒಬ್ಬ ವ್ಯಕ್ತಿಯು ಹಣ ಬಂದಾಗ ಕೆಲವು ಅಂಶಗಳನ್ನು ಎಚ್ಚರದಲ್ಲಿ ಇಟ್ಟುಕೊಂಡಿರಬೇಕು. ಅದರಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ತೊಂದರೆಗಳನ್ನು ಎದುರಿಸಬೇಕಾಗಬಹುದು. ಹಣ ಬಂದಾಗ ಹೀಗೆ ಮಾಡಬೇಡಿ ಎಂಬ ಬಗ್ಗೆ ವಿವರ ಇಲ್ಲಿದೆ.
ದುರ್ಬಲ ವ್ಯಕ್ತಿಗೆ ಕಿರುಕುಳ ನೀಡಬೇಡಿ- ಚಾಣಕ್ಯ ನೀತಿಯ ಪ್ರಕಾರ, ಅನೇಕ ಜನರು ತಮ್ಮ ಕೈಗೆ ಹಣ ಬಂದಾಗ ತಮ್ಮ ಸ್ಥಾನ ಮತ್ತು ಪ್ರತಿಷ್ಠೆಯ ಲಾಭವನ್ನು ಪಡೆಯುತ್ತಾರೆ. ದುರ್ಬಲರಿಗೆ ಕಿರುಕುಳ ನೀಡುತ್ತಾರೆ. ಹಣವನ್ನು ದುರುದ್ದೇಶಕ್ಕೆ ಬಳಸುತ್ತಾರೆ. ದುರ್ಬಲ ವ್ಯಕ್ತಿಯ ಮೇಲೆ ದಬ್ಬಾಳಿಕೆ ತೋರುತ್ತಾರೆ. ಅವಮಾನಿಸುತ್ತಾರೆ. ಅಂತಹ ಜನರು ದೀರ್ಘಕಾಲ ಹಣವನ್ನು ಹೊಂದಿರುವುದಿಲ್ಲ. ಲಕ್ಷ್ಮೀ ದೇವಿ ಅಂಥವರಿಂದ ಬೇಸರಗೊಳ್ಳುತ್ತಾಳೆ.
ದುರಾಸೆ ಬೇಡ- ಚಾಣಕ್ಯ ನೀತಿಯಂತೆ, ಶ್ರಮದಿಂದ ಹಣ ಸಂಪಾದನೆ ಮಾಡಬೇಕು. ಆ ದಾರಿ ತಪ್ಪಬಾರದು. ಇತರರ ಹಣವನ್ನು ಎಂದೂ ಅಪೇಕ್ಷಿಸಬಾರದು. ದುರಾಸೆಯ ಜನರು ಎಂದೂ ತೃಪ್ತ ಭಾವ ಹೊಂದುವುದಿಲ್ಲ. ಅಂತಹ ವ್ಯಕ್ತಯ ಬಳಿ ಹಣ ನಿಲ್ಲುವುದೂ ಇಲ್ಲ. ದುರಾಸೆಯ ಭಾವ ಇಟ್ಟುಕೊಂಡವರಿಗೆ ಲಕ್ಷ್ಮೀ ದೇವಿಯ ಅನುಗ್ರಹ ಇರುವುದಿಲ್ಲ.
ಕೆಟ್ಟ ಸಹವಾರ ಬಿಡಿ- ಚಾಣಕ್ಯ ನೀತಿ ಹೇಳುವಂತೆ ಕೆಟ್ಟವರ ಸಹವಾಸದಿಂದ ದೂರವಿರಿ. ಹಾಗೊಂದು ವೇಳೆ ಕೆಟ್ಟವರ ಜೊತೆ ಸಹವಾಸ ಇಟ್ಟುಕೊಂಡಿದ್ದರೆ ಅದರಿಂದ ಆ ವ್ಯಕ್ತಿಗೆ ಹಣದಿಂದ ಹಾನಿಯೇ ಹೆಚ್ಚು. ತಪ್ಪು ಸಹವಾಸದ ಜೊತೆಗೆ ವಾಸಿಸುವವರ ಜೊತೆಗೆ ಲಕ್ಷ್ಮೀ ದೇವಿ ನಿಲ್ಲುವುದಿಲ್ಲ. ನೀವು ಜೀವನದಲ್ಲಿ ಯಶಸ್ಸು ಸಾಧಿಸಲು ಬಯಸಿದರೆ ಕೆಟ್ಟ ಸಹವಾಸದಿಂದ ದೂರ ಇರಿ.
ಹೆಚ್ಚು ಖರ್ಚು ಮಾಡಬೇಡಿ- ಹಣ ಬಂದಾಗ, ಅನೇಕ ಜನರು ಅಗತ್ಯ ಇಲ್ಲದೇ ಇದ್ದರೂ ಅಧಿಕ ಹಣ ಖರ್ಚು ಮಾಡುತ್ತಾರೆ. ಇದು ಲಕ್ಷ್ಮೀ ದೇವಿಯನ್ನು ಅವಮಾನಿಸಿದಂತೆ. ಅದಕ್ಕಾಗಿ ಅಗತ್ಯಕ್ಕೆ ತಕ್ಕಂತೆ ಹಣ ಖರ್ಚು ಮಾಡಿ. ಲಕ್ಷ್ಮೀಯನ್ನು ಗೌರವದಿಂದ ಕಾಣಿರಿ. ಅನಗತ್ಯವಾಗಿ ಹಣ ದುಂದುವೆಚ್ಚ ಮಾಡುವವರ ಬಳಿಯೂ ಲಕ್ಷ್ಮೀದೇವಿ ಉಳಿಯುವುದಿಲ್ಲ.