
ಚಿತ್ಕಲಾ ಬೀರಾದಾರ್ ಅವರು ‘ಕನ್ನಡತಿ’ ಧಾರಾವಾಹಿಯಲ್ಲಿ ಅಮ್ಮಮ್ಮನ ಪಾತ್ರ ಮಾಡಿದ್ದರು. ಅವರ ಪಾತ್ರದ ನಿಜವಾದ ಹೆಸರು ರತ್ನಮಾಲಾ ಆಗಿತ್ತು. ಈ ಧಾರಾವಾಹಿ ಪೂರ್ಣಗೊಂಡ ಬಳಿಕ ಅವರನ್ನು ಅನೇಕರು ಮಿಸ್ ಮಾಡಿಕೊಂಡಿದ್ದರು. ಈಗ ಅವರು ಮತ್ತೆ ಮರಳಿ ಗೂಡಿಗೆ ಬಂದಿದ್ದಾರೆ.

ರಾಮ್ ಜಿ ನಿರ್ದೇಶನ ಮಾಡುತ್ತಿರುವ ‘ಬೃಂದಾವನ’ ಧಾರಾವಾಹಿಯಲ್ಲಿ ಚಿತ್ಕಲಾ ನಟಿಸುತ್ತಿದ್ದಾರೆ. 36 ಜನರು ಇರುವ ಮನೆಗೆ ಸುಧಾ ಮೂರ್ತಿಯದ್ದೇ (ಚಿತ್ಕಲಾ) ನೇತೃತ್ವ. ಸದ್ಯ ಪ್ರೋಮೋ ಗಮನ ಸೆಳೆಯುತ್ತಿದೆ.

ಚಿತ್ಕಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಧಾರಾವಾಹಿ ಬಗ್ಗೆ, ಪಾತ್ರದ ಬಗ್ಗೆ, ಕಲರ್ಸ್ ಕನ್ನಡ ವೀಕ್ಷಕರನ್ನು ಮತ್ತೆ ಎದುರುಗೊಳ್ಳುತ್ತಿರುವುದಕ್ಕೆ ಅವರು ಎಗ್ಸೈಟ್ ಆಗಿದ್ದಾರೆ.

‘ಹೌದು, ಮರಳಿ ಮತ್ತೆ ಅದೇ ಗೂಡಿಗೆ ಬಂದು ಸೇರಿದೆ. ಈ ಸಾರಿ ನಿಜವಾಗಿಯೂ ಅಮ್ಮಮ್ಮನಾಗಿ ( ಅಜ್ಜಿಯಾಗಿ). ಇದು ಮೊದಮೊದಲ ಲುಕ್, ಆದರೆ ಇದಲ್ಲಾ ಅಸಲಿ ಲುಕ್’ ಎಂದು ಅವರು ಬರಹ ಆರಂಭಿಸಿದ್ದಾರೆ.

‘ಮತ್ತೊಂದು ಹೊಸ ಪ್ರಯಾಣದ ಚಾಲನೆಯಾಯ್ತು. ಮತ್ತೊಮ್ಮೆ ನಿಮ್ಮ ಹರಕೆ, ಹಾರೈಕೆ ಎರಡೂ ಬೇಕಾಗಿದೆ. ‘ಬೃಂದಾವನ' ಹೊಸ ಕನಸು ಹೊತ್ತು ಬಂದಿದೆ. ಅದು ನನಸಾಗಿ ನಿಮ್ಮೆಲ್ಲರ ಮನಸ್ಸು ಸೊರೆಗೊಂಡರಷ್ಟೇ ಸಾಕು’ ಎಂದು ಚಿತ್ಕಲಾ ಬರೆದುಕೊಂಡಿದ್ದಾರೆ..

ಕಲರ್ಸ್ ಕನ್ನಡದಲ್ಲಿ ‘ಗೀತಾ’ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಧಾರಾವಾಹಿ ಕೊನೆಗೊಂಡ ಬಳಿಕ ‘ಬೃಂದಾವನ’ ಧಾರಾವಾಹಿ ಆರಂಭ ಆಗಬಹುದು ಎಂದು ಅನೇಕರು ಭಾವಿಸಿದ್ದಾರೆ.