
ಟಿ20 ವಿಶ್ವಕಪ್ ಹತ್ತಿರವಾದಂತೆ ಟೀಂ ಇಂಡಿಯಾದ ಸಮಸ್ಯೆಗಳ ಪಟ್ಟಿಯೂ ದೊಡ್ಡದಾಗುತ್ತಿದೆ. ಗಾಯದ ಸಮಸ್ಯೆಯಿಂದಾಗಿ ಜಸ್ಪ್ರೀತ್ ಬುಮ್ರಾ ವಿಶ್ವಕಪ್ನಿಂದ ಹೊರಗುಳಿದಿರುವುದು ನಿಮಗೆಲ್ಲ ಗೊತ್ತೆ ಇದೆ. ಅವರ ಜಾಗಕ್ಕೆ ಮತ್ತೊಬ್ಬ ಬೌಲರ್ನನ್ನು ಕರೆತರುವ ಚಿಂತನೆಯಲ್ಲಿರುವಾಗಲೇ ಟೀಮ್ ಇಂಡಿಯಾದ ಮತ್ತೊಬ್ಬ ವೇಗದ ಬೌಲರ್ ಗಾಯಗೊಂಡಿರುವ ಸುದ್ದಿ ಮುನ್ನೆಲೆಗೆ ಬಂದಿದೆ.

ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಟೀಂ ಇಂಡಿಯಾದ ವೇಗದ ಬೌಲರ್ ದೀಪಕ್ ಚಹಾರ್ ಕಾಲಿಗೆ ಗಾಯವಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ಆಡಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳನ್ನು ಉಲ್ಲೇಖಿಸಿ, ಚಹರ್ ಅವರ ಕಾಲಿಗೆ ಗಾಯವಾಗಿರುವ ಕಾರಣ ಅವರಿಗೆ ಮೊದಲ ಏಕದಿನ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ. ಗಾಯವನ್ನು ಗಂಭೀರವಾಗಿ ಪರಿಗಣಿಸದಿದ್ದರೂ, ಅವರಿಗೆ ಕೆಲವು ದಿನಗಳ ವಿಶ್ರಾಂತಿಯನ್ನು ಸೂಚಿಸಲಾಗಿದೆ. ಇದರಿಂದಾಗಿ ಅವರು ಏಕದಿನ ಸರಣಿಯ ಉಳಿದ ಎರಡು ಪಂದ್ಯಗಳಲ್ಲಿ ಆಡುವುದು ಕಷ್ಟಕರವಾಗಿದೆ.

ಬಲಗೈ ವೇಗಿ ಚಹರ್ ಫೆಬ್ರವರಿಯಲ್ಲಿ ಗಾಯಗೊಂಡ ನಂತರ ಆಗಸ್ಟ್ನಲ್ಲಿ ತಂಡಕ್ಕೆ ಮತ್ತೆ ಪುನರಾಗಮನ ಮಾಡಿದ್ದರು. ಜೊತೆಗೆ ಅವರನ್ನು ಟಿ20 ವಿಶ್ವಕಪ್ಗಾಗಿ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಅಲ್ಲದೆ ಬುಮ್ರಾ ಗಾಯಗೊಂಡಿರುವ ಕಾರಣ ಅವರನ್ನು ಬದಲಿ ಸ್ಪರ್ಧಿಯಾಗಿ ಪರಿಗಣಿಸಲಾಗಿತ್ತು. ಆದರೆ ಈಗ ಹೊರಬಿದ್ದಿರುವ ಸುದ್ದಿ ಎಲ್ಲರಲ್ಲೂ ಆತಂಕ ಹುಟ್ಟಿಸಿದೆ.

ಇಂಜುರಿಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಚಹರ್ ಅದ್ಭುತ ಪ್ರದರ್ಶನ ನೀಡಿದ್ದರು. ಜಿಂಬಾಬ್ವೆ ಪ್ರವಾಸದಲ್ಲಿ ಚಹರ್ 2 ಪಂದ್ಯಗಳಲ್ಲಿ 5 ವಿಕೆಟ್ ಪಡೆದರೆ, ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ T20 ಸರಣಿಯಲ್ಲಿ 3 ವಿಕೆಟ್ ಪಡೆದರು. ಅಲ್ಲದೆ ಕಳೆದ ಪಂದ್ಯದಲ್ಲಿ 31 ರನ್ ಗಳಿಸಿದ್ದರು.