- Kannada News Photo gallery Cricket photos IND vs AFG Rahul Dravid reveals reason behind Ishan Kishan shreyas iyer snub for T20Is
IND vs AFG: ಶ್ರೇಯಸ್- ಕಿಶನ್ ವಿಚಾರದಲ್ಲಿ ಕೊನೆಗೂ ಮೌನ ಮುರಿದ ಕೋಚ್ ದ್ರಾವಿಡ್
IND vs AFG: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಎರಡೂ ತಂಡಗಳು ಸಿದ್ಧವಾಗಿವೆ. ಮೊದಲ ಪಂದ್ಯ ಜನವರಿ 11 ರಂದು ಮೊಹಾಲಿ ಮೈದಾನದಲ್ಲಿ ನಡೆಯಲಿದೆ. ಪಂದ್ಯಕ್ಕೆ ಒಂದು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅನೇಕ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ್ದಾರೆ.
Updated on: Jan 10, 2024 | 8:08 PM

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಎರಡೂ ತಂಡಗಳು ಸಿದ್ಧವಾಗಿವೆ. ಮೊದಲ ಪಂದ್ಯ ಜನವರಿ 11 ರಂದು ಮೊಹಾಲಿ ಮೈದಾನದಲ್ಲಿ ನಡೆಯಲಿದೆ. ಪಂದ್ಯಕ್ಕೆ ಒಂದು ದಿನ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅನೇಕ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಕೊಹ್ಲಿ ಆಡುವ ಬಗ್ಗೆ ಖಚಿತ ಮಾಹಿತಿ ನೀಡಿದ ದ್ರಾವಿಡ್, ವೈಯಕ್ತಿಕ ಕಾರಣಗಳಿಂದಾಗಿ ಕೊಹ್ಲಿ ಆಡುತ್ತಿಲ್ಲ ಎಂಬುದನ್ನು ಬಹಿರಂಗಪಡಿಸಿದರು. ಕೊಹ್ಲಿ ಆಡದಿರಲು ಪ್ರಮುಖ ಕಾರಣವೆಂದರೆ, ಜನವರಿ 11 ರಂದು ಕೊಹ್ಲಿ ಪುತ್ರಿ ವಮಿಕಾ ಹುಟ್ಟುಹಬ್ಬ ಎಂಬುದು ಎಲ್ಲರಿಗೂ ಗೊತ್ತು. ಅದಕ್ಕಾಗಿಯೇ ಅವರು ಕುಟುಂಬದೊಂದಿಗೆ ಈ ಸಂಭ್ರಮವನ್ನು ಆಚರಿಸಲು ಬಯಸಿದ್ದು, ಮೊದಲ ಟಿ20 ಪಂದ್ಯದಿಂದ ಹಿಂದೆ ಸರಿದಿದ್ದಾರೆ.

ಹಾಗೆಯೇ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಿದ ಬಳಿಕ ಉದ್ಭವಿಸಿದ ಪ್ರಮುಖ ಪ್ರಶ್ನೆಯೆಂದರೆ ಅದು ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಈ ಸರಣಿಗೆ ಏಕೆ ಆಯ್ಕೆಯಾಗಿಲ್ಲ ಎಂಬುದು. ಇದಕ್ಕೆ ಉತ್ತರಿಸಿದ ದ್ರಾವಿಡ್, ಮಾಧ್ಯಮಗಳಲ್ಲಿ ಏನು ವರದಿಯಾಗುತ್ತಿದೆಯೋ ಅದು ನಿಜವಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಮುಂದುವರೆದು ಮಾತನಾಡಿದ ಅವರು, ಇಶಾನ್ ಕಿಶನ್ ಟೀಂ ಇಂಡಿಯಾದಿಂದ ವಿಶ್ರಾಂತಿ ಕೇಳಿದ್ದಾರೆ. ಅದಕ್ಕಾಗಿಯೇ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ ಎಂದಿದ್ದಾರೆ. ಹಾಗೆಯೇ ತಂಡದಲ್ಲಿ ಅನೇಕ ಬ್ಯಾಟ್ಸ್ಮನ್ಗಳಿರುವುದರಿಂದಾಗಿ ಶ್ರೇಯಸ್ ಅಯ್ಯರ್ ಈ ಸರಣಿಯನ್ನು ಆಡುತ್ತಿಲ್ಲ ಎಂದಿದ್ದಾರೆ. ಅಲ್ಲದೆ ಈ ಇಬ್ಬರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಹರಿದಾಡುತ್ತಿರುವ ಸುದ್ದಿಯಲ್ಲಿ ಹುರುಳಿಲ್ಲ ಎಂಬುದನ್ನು ರಾಹುಲ್ ಒತ್ತಿ ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಈ ಹಿಂದೆ ಭಾರತ ತಂಡದೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಅಲ್ಲಿ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. ಇದಕ್ಕೂ ಮುನ್ನ ಅವರು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಉಪನಾಯಕರಾಗಿದ್ದರು. ಆದಾಗ್ಯೂ, ಅವರು ದಕ್ಷಿಣ ಆಫ್ರಿಕಾ ವಿರುದ್ಧ ಯಾವುದೇ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಏಕೆಂದರೆ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುವ ಸುಲವಾಗಿ ಅವರ ಸೀಮಿತ ಮಾದರಿಯಿಂದ ಹಿಂದೆ ಸರಿದಿದ್ದರು.

ಇನ್ನು ಇಶಾನ್ ಕಿಶನ್ ಕೂಡ ಕಾರಣಾಂತರಗಳಿಂದ ಆಫ್ರಿಕಾ ಸರಣಿಯ ಮಧ್ಯದಲ್ಲಿಯೇ ತವರಿಗೆ ಮರಳಿದ್ದರು. ಇದಾದ ಬಳಿಕ ತಂಡ ಘೋಷಣೆಯಾದಾಗ ಇವರಿಬ್ಬರ ಹೆಸರು ಇರಲಿಲ್ಲ. ಆಗ ಈ ಇಬ್ಬರ ಮೇಲೆ ನಿರಂತರ ಊಹಾಪೋಹಗಳು ಎದ್ದಿದ್ದವು. ಆದರೆ ಇದೀಗ ಮುಖ್ಯ ಕೋಚ್ ಸ್ವತಃ ಮುಂದೆ ಬಂದು ಸಂಪೂರ್ಣ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮುಖ್ಯ ಕೋಚ್ ದ್ರಾವಿಡ್ ಕೂಡ ಸ್ಪಷ್ಟಪಡಿಸಿದ್ದಾರೆ. ಆದರೆ ಶುಭ್ಮನ್ ಗಿಲ್ ಬಗ್ಗೆ ದ್ರಾವಿಡ್ ಏನನ್ನೂ ಹೇಳಿಲ್ಲ. ಆದರೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡುವ ಸಾಧ್ಯತೆ ಹೆಚ್ಚು.



















