
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 15 ರಂದು ಆರಂಭವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಆತಿಥೇಯ ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಇಬ್ಬರು ಅನುಭವಿ ಬ್ಯಾಟ್ಸ್ಮನ್ಗಳು ಗಾಯದಿಂದ ಬಳಲುತ್ತಿದ್ದು, ಇವರಿಬ್ಬರು ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

ಶ್ರೀಲಂಕಾದ ಇಬ್ಬರು ಅನುಭವಿ ಬ್ಯಾಟ್ಸ್ಮನ್ಗಳಾದ ಕುಸಲ್ ಮೆಂಡಿಸ್ ಹಾಗೂ ಪಾತುಮ್ ನಿಸ್ಸಂಕಾ ಗಾಲೆ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಗಾಯದಿಂದಾಗಿ ಕುಸಲ್ ಮೆಂಡಿಸ್ ಮೊದಲ ಟೆಸ್ಟ್ ಆಡುವುದಿಲ್ಲ ಎಂಬ ಸುದ್ದಿ ಗುರುವಾರವೇ ಹೊರಬಿದ್ದಿತ್ತು. ಇದೀಗ ಪಾತುಮ್ ನಿಸ್ಸಂಕಾ ಕೂಡ ಮೊದಲ ಟೆಸ್ಟ್ ಆಡುತ್ತಿಲ್ಲ ಎನ್ನಲಾಗಿದೆ.

ಲಂಕಾ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಕುಸಲ್ ಮೆಂಡಿಸ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ರನ್ ಗಳಿಸುವ ಪ್ರಯತ್ನದಲ್ಲಿ ಗಾಯಕ್ಕೆ ತುತ್ತಾಗಿದ್ದ ಕುಸಲ್ ಮೆಂಡಿಸ್ ಪ್ರಸ್ತುತ ಚೇತರಿಕೆಯ ಹಾದಿಯಲ್ಲಿದ್ದಾರೆ. ಮೊದಲ ಟೆಸ್ಟ್ಗೆ ಇನ್ನು ವಾರಕ್ಕೂ ಹೆಚ್ಚು ಸಮಯವಿದೆಯಾದರೂ, ಅಷ್ಟೊರಳಗೆ ಕುಸಲ್ ಮೆಂಡಿಸ್ ಚೇತರಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.

ಇತ್ತ ಶ್ರೀಲಂಕಾ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಪಾಥಮ್ ನಿಸ್ಸಾಂಕಾ ಮಣಿಕಟ್ಟಿನ ಗಾಯದಿಂದ ಬಳಲುತ್ತಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಈ ಗಾಯಕ್ಕೆ ತುತ್ತಾಗಿದ್ದ ಪಾಥಮ್, ಜುಲೈ 2026 ರ ಆರಂಭದಲ್ಲಿ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ನಿಸ್ಸಾಂಕಾ ಕೂಡ ಮೊದಲ ಟೆಸ್ಟ್ ಆಡುತ್ತಿಲ್ಲ.

ಇಬ್ಬರು ಪ್ರಮುಖ ಬ್ಯಾಟ್ಸ್ಮನ್ಗಳ ಅನುಪಸ್ಥಿತಿಯು ಶ್ರೀಲಂಕಾ ತಂಡಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. ಮತ್ತೊಂದೆಡೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪೈಪೋಟಿಯಲ್ಲಿ ಉಳಿಯಲು ಭಾರತ ಈ ಸರಣಿಯನ್ನು 2-0 ಅಂತರದಿಂದ ಗೆಲ್ಲಲೇಬೇಕಾಗಿದೆ. ಹೀಗಿರುವಾಗ ಇವರಿಬ್ಬರ ಅಲಭ್ಯತೆ ಒಂದರ್ಥದಲ್ಲಿ ಭಾರತ ತಂಡಕ್ಕೆ ಮೊದಲ ಟೆಸ್ಟ್ ಗೆಲುವಿಗೆ ಉತ್ತಮ ಅವಕಾಶವನ್ನು ಒದಗಿಸಿಕೊಟ್ಟಿದೆ.