
ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ ಆ ಬಳಿಕ ಟಿ20 ವಿಶ್ವಕಪ್ಗೆ ಸಜ್ಜಾಗಲಿದೆ. ಇನ್ನು ಟೀಂ ಇಂಡಿಯಾದ ಈ ವರ್ಷದ ಕ್ಯಾಲೆಂಡರ್ನಲ್ಲಿ ಶ್ರೀಲಂಕಾ ಪ್ರವಾಸವೂ ಸೇರಿದೆ. ಆ ಪ್ರಕಾರ ಟೀಂ ಇಂಡಿಯಾ ಆಗಸ್ಟ್ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಟೆಸ್ಟ್ ಸರಣಿಯ ಜೊತೆಗೆ ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ಟೀಂ ಇಂಡಿಯಾ ಆಗಸ್ಟ್ನಲ್ಲಿ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದ್ದು, ಟೆಸ್ಟ್ ಪಂದ್ಯಗಳ ನಂತರ ಹೆಚ್ಚುವರಿಯಾಗಿ ಟಿ20 ಪಂದ್ಯಗಳನ್ನು ಆಡಲಿದೆ. ಟಿ20 ಸರಣಿಯ ವಿಶೇಷತೆ ಏನೆಂದರೆ, ಈ ಸರಣಿಯಿಂದ ಸಂಗ್ರಹವಾದ ಹಣವನ್ನು ಚಂಡಮಾರುತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಹಾಯ ಮಾಡಲು ಬಳಸಲಾಗುತ್ತದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವಾ ಇದನ್ನು ದೃಢಪಡಿಸಿದ್ದು, ‘ಬಿಸಿಸಿಐನ ಈ ನಿರ್ಧಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಈ ಹೆಚ್ಚುವರಿ ಟಿ20 ಪಂದ್ಯಗಳು ಚಂಡಮಾರುತ ಪರಿಹಾರ ಮತ್ತು ಪುನರ್ನಿರ್ಮಾಣ ಪ್ರಯತ್ನಗಳಿಗೆ ಅಗತ್ಯವಾದ ಹಣವನ್ನು ಸಂಗ್ರಹಿಸುತ್ತವೆ. ಈ ಹಣವು ಉಂಟಾದ ನಷ್ಟವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ’ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಶಮ್ಮಿ ಸಿಲ್ವಾ, ವಾಸ್ತವವಾಗಿ ಬಿಸಿಸಿಐ ಡಿಸೆಂಬರ್ ಅಂತ್ಯದಲ್ಲಿಯೇ ಎರಡು ಟಿ20 ಪಂದ್ಯಗಳನ್ನು ಆಡುವ ಮೂಲಕ ಸೈಕ್ಲೋನ್ ಸಂತ್ರಸ್ತರಿಗೆ ಹಣ ಸಂಗ್ರಹ ಮಾಡಿಕೊಡಲು ಸಿದ್ಧವಾಗಿತ್ತು. ಆದರೆ ಆಗ ಈ ಪಂದ್ಯಗಳನ್ನು ಆಯೋಜಿಸಲು ಸಮಯವಿರಲಿಲ್ಲ. ವಿಶೇಷವಾಗಿ ನಮಗಾಗಿ ಯಾವುದೇ ಪ್ರಸಾರಕರು ಸಿಕ್ಕಿರಲಿಲ್ಲ. ಹೀಗಾಗಿ ಆಗಸ್ಟ್ನಲ್ಲಿಯೇ ಹೆಚ್ಚುವರಿ ಪಂದ್ಯಗಳನ್ನು ನಡೆಸಲಾಗುತ್ತದೆ ಎಂದಿದ್ದಾರೆ.

ಏತನ್ಮಧ್ಯೆ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಮತ್ತು ಏಕದಿನ ಸರಣಿಯ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಪಂದ್ಯಗಳು ಸೆಪ್ಟೆಂಬರ್ 1, 3 ಮತ್ತು 6 ರಂದು ನಡೆಯಲಿದ್ದು, ಟಿ20 ಪಂದ್ಯಗಳು ಸೆಪ್ಟೆಂಬರ್ 9, 12 ಮತ್ತು 13 ರಂದು ನಡೆಯಲಿವೆ.