- Kannada News Photo gallery Cricket photos IPL Mega Auction 2022: Four Reasons Why RCB Can Break Bank For Manish Pandey
IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
IPL Mega Auction 2022: ಆರ್ಸಿಬಿ ಅತ್ಯುತ್ತಮ ಆಟಗಾರನನ್ನು ಮೆಗಾ ಹರಾಜಿನಲ್ಲಿ ಖರೀದಿಸಬೇಕಾಗುತ್ತದೆ. ಅದರಲ್ಲೂ ಮೆಗಾ ಹರಾಜಿನಲ್ಲಿ ಕೆಲ ಆಟಗಾರರಿದ್ದಾರೆ. ಅವರ ಖರೀದಿಯಿಂದ ಆರ್ಸಿಬಿ ತಂಡದ ಈ ಹಿಂದಿನ ಕೆಲ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬಹುದು. ((ಡೈಲಿಹಂಟ್ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)
Updated on: Dec 14, 2021 | 8:54 PM

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಈ ಪಟ್ಟಿಯಲ್ಲಿ ಆರ್ಸಿಬಿ ರಿಟೈನ್ ಮಾಡಿಕೊಂಡಿರುವುದು ಕೇವಲ ಮೂವರು ಆಟಗಾರರನ್ನು ಮಾತ್ರ. ಅದರಂತೆ ಮುಂದಿನ ಸೀಸನ್ನಲ್ಲಿ ಆರ್ಸಿಬಿ ಪರ ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಆಡುವುದು ಖಚಿತ.

ಆದರೆ ಈಗಾಗಲೇ ಬಿಡುಗಡೆ ಮಾಡಿರುವ ಯಾವ ಆಟಗಾರ ಮತ್ತೆ ಆರ್ಸಿಬಿಗೆ ಸಿಗಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಹೀಗಾಗಿ ಆರ್ಸಿಬಿ ಅತ್ಯುತ್ತಮ ಆಟಗಾರನನ್ನು ಮೆಗಾ ಹರಾಜಿನಲ್ಲಿ ಖರೀದಿಸಬೇಕಾಗುತ್ತದೆ. ಅದರಲ್ಲೂ ಮೆಗಾ ಹರಾಜಿನಲ್ಲಿ ಕೆಲ ಆಟಗಾರರಿದ್ದಾರೆ. ಅವರ ಖರೀದಿಯಿಂದ ಆರ್ಸಿಬಿ ತಂಡದ ಈ ಹಿಂದಿನ ಕೆಲ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬಹುದು. ಅಂತಹ ಒಬ್ಬ ಆಟಗಾರ ಮನೀಷ್ ಪಾಂಡೆ. ಇಲ್ಲಿ ಮನೀಷ್ ಪಾಂಡೆಯೇ ಆರ್ಸಿಬಿ ಯಾಕೆ ಬೇಕು ಎಂಬುದಕ್ಕೆ ನಾನಾ ಕಾರಣಗಳಿವೆ.

1- ಕರ್ನಾಟಕದ ಆಟಗಾರ: ಕಳೆದ ಎರಡು ಸೀಸನ್ನಲ್ಲಿ ಆರ್ಸಿಬಿ ಪರ ಆಡಿದ್ದು ಏಕೈಕ ಕನ್ನಡಿಗ ದೇವದತ್ ಪಡಿಕ್ಕಲ್. ಇದೀಗ ಪಡಿಕ್ಕಲ್ ಕೂಡ ಮೆಗಾ ಹರಾಜಿನಲ್ಲಿರುವ ಕಾರಣ ಅವರನ್ನು ಮತ್ತೆ ಖರೀದಿಸಲು ಸಾಧ್ಯವಾಗುತ್ತೊ ಗೊತ್ತಿಲ್ಲ. ಆದರೆ ಮನೀಷ್ ಪಾಂಡೆಯ ಖರೀದಿಯೊಂದಿಗೆ ಆರ್ಸಿಬಿ ಓಪನಿಂಗ್ ಆಟಗಾರನ ಸಮಸ್ಯೆಯನ್ನು ನೀಗಿಸಬಹುದು. ಏಕೆಂದರೆ ಈ ಹಿಂದೆ ಪಾಂಡೆ ಆರ್ಸಿಬಿ ಪರ ಆರಂಭಿಕನಾಗಿ ಆಡಿದ್ದರು. 2009 ರಲ್ಲಿ ಆರ್ಸಿಬಿ ಪರ ಪಾಂಡೆ ಭರ್ಜರಿ ಪ್ರದರ್ಶನ ನೀಡಿದ್ದರು. ಆ ವರ್ಷ ಆರ್ಸಿಬಿ ಫೈನಲ್ಗೂ ಪ್ರವೇಶಿಸಿತ್ತು ಎಂಬುದು ವಿಶೇಷ. ಇನ್ನು ಸಂದರ್ಭಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಮನೀಷ್ ಅತ್ಯುತ್ತಮ ಹಿಟ್ಟರ್ ಎಂಬುದಕ್ಕೆ ಕೆಕೆಆರ್, ಎಸ್ಆರ್ಹೆಚ್ ಪರ ಆಡಿದ ಸ್ಪೋಟಕ ಇನಿಂಗ್ಸ್ಗಳೇ ಸಾಕ್ಷಿ. ಹೀಗಾಗಿ ಕನ್ನಡಿಗ ಸ್ಥಾನವನ್ನು ಹಾಗೂ ಆರಂಭಿಕನ ಕೊರತೆಯನ್ನು ಪಾಂಡೆ ಮೂಲಕ ತುಂಬಬಹುದು.

2- ಮಧ್ಯಮ ಕ್ರಮಾಂಕದ ಶಕ್ತಿ: ಮನೀಷ್ ಪಾಂಡೆ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ ಆಟಗಾರ. ಇದೀಗ ಆರ್ಸಿಬಿ ತಂಡದಿಂದ ಎಬಿ ಡಿವಿಲಿಯರ್ಸ್ ಹೊರನಡೆದಿದ್ದಾರೆ. ಒಂದು ವೇಳೆ ಆರ್ಸಿಬಿ ಆರಂಭಿಕ ಆಟಗಾರನನ್ನು ಕಂಡುಕೊಂಡರೆ, ಮಧ್ಯಮ ಕ್ರಮಾಂಕದಲ್ಲೂ ಮನೀಷ್ ಪಾಂಡೆ ಅವರನ್ನು ಬಳಸಿಕೊಳ್ಳಬಹುದು. ಹೀಗಾಗಿ ಆರಂಭಿಕ ಅಥವಾ ಮಧ್ಯಮ ಕ್ರಮಾಂಕ..ಎರಡೂ ಆಯ್ಕೆಯನ್ನು ಮನೀಷ್ ಪಾಂಡೆ ಆಯ್ಕೆಯಿಂದ ಪಡೆಯಬಹುದು.

3- ಅತ್ಯುತ್ತಮ ಫೀಲ್ಡರ್: ಟಿ20 ಕ್ರಿಕೆಟ್ನಲ್ಲಿ ಒಂದೊಂದು ರನ್ ಕೂಡ ಅಮೂಲ್ಯ. ಪ್ರಸ್ತುತ ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅತ್ಯುತ್ತಮ ಫೀಲ್ಡರ್ಗಳಾಗಿ ಗುರುತಿಸಿಕೊಂಡಿದ್ದಾರೆ. ಇತ್ತ ಮನೀಷ್ ಪಾಂಡೆ ಕೂಡ ಬೌಂಡರಿ ಲೈನ್ನ ವೇಗದ ಸರದಾರ. ಮಿಂಚಿನ ಓಟದ ಮೂಲಕ ಬೌಂಡರಿ ಲೈನ್ನಲ್ಲಿ ಅದ್ಭುತ ಫೀಲ್ಡಿಂಗ್ ಮಾಡುವ ಮನೀಷ್ ಪಾಂಡೆ ಸೇರಿದರೆ ಆರ್ಸಿಬಿ ತಂಡದ ಫೀಲ್ಡಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ.

4- ಕ್ಯಾಪ್ಟನ್: ಸದ್ಯದ ಆರ್ಸಿಬಿ ತಂಡದ ಅತೀ ದೊಡ್ಡ ಚಿಂತೆ ಮುಂದಿನ ನಾಯಕ ಯಾರೆಂಬುದು. ಆದರೆ ಇತ್ತ ದೇಶೀಯ ಟಿ20 ಟೂರ್ನಿಯಲ್ಲಿ (ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಮನೀಷ್ ಪಾಂಡೆ ಕರ್ನಾಟಕವನ್ನು ಫೈನಲ್ಗೆ ಕೊಂಡೊಯ್ದಿದ್ದರು. ಅಷ್ಟೇ ಅಲ್ಲದೆ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಪ್ರಿಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಇನ್ನು ಪಾಂಡೆಯ ನಾಯಕತ್ವದಲ್ಲಿ ಕರ್ನಾಟಕ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಮನೀಷ್ ಪಾಂಡೆ ಆಯ್ಕೆಯಿಂದಾಗಿ ಆರ್ಸಿಬಿ ನಾಯಕತ್ವ ಚಿಂತೆಯನ್ನು ಕೂಡ ದೂರ ಮಾಡಬಹುದು.

ಒಟ್ಟಿನಲ್ಲಿ ಆರ್ಸಿಬಿ ತಂಡಕ್ಕೆ ಮನೀಷ್ ಪಾಂಡೆ ಆಯ್ಕೆಯಾದರೆ ಒಂದೇ ಖರೀದಿಯಲ್ಲಿ ಹಲವು ಆಯ್ಕೆಗಳು ಸಿಗುವುದಂತು ಸತ್ಯ.

ವಿರಾಟ್ ಕೊಹ್ಲಿ ಜೊತೆ ಮನೀಷ್ ಪಾಂಡೆ









