
2026 ರ ಐಪಿಎಲ್ನಲ್ಲಿ ಏಪ್ರಿಲ್ 22 ರಂದು ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ಜೈಂಟ್ಸ್ ನಡುವಿನ ಪಂದ್ಯವನ್ನು ರಾಜಸ್ಥಾನ್ ತಂಡ 40 ರನ್ಗಳಿಂದ ಗೆದ್ದುಕೊಂಡಿತು. ಕಡಿಮೆ ಸ್ಕೋರಿಂಗ್ನ ಈ ಪಂದ್ಯದಲ್ಲಿ ರಾಜಸ್ಥಾನ್ ಗೆಲುವಿನ ರವೀಂದ್ರ ಜಡೇಜಾ ಅವರ ಆಲ್ರೌಂಡರ್ ಪ್ರದರ್ಶನ ಪ್ರಮುಖ ಪಾತ್ರವಹಿಸಿತು. ಇದಕ್ಕಾಗಿ ಜಡೇಜಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ಈ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ್ದ ಜಡೇಜಾ, ಈ ಪ್ರಶಸ್ತಿಯನ್ನು ಗುಜರಾತ್ ರಾಜ್ಯದ ಶಿಕ್ಷಣ ಸಚಿವರಿಗೆ ಅರ್ಪಿಸುವುದಾಗಿ ಹೇಳಿದ್ದರು. ಅಷ್ಟಕ್ಕೂ ಜಡೇಜಾ ಈ ಪ್ರಶಸ್ತಿಯನ್ನು ಶಿಕ್ಷಣ ಸಚಿವರಿಗೆ ಅರ್ಪಿಸಿದ್ಯಾಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ಆ ಶಿಕ್ಷಣ ಸಚಿವರು ಬೇರ್ಯಾರು ಅಲ್ಲ. ಜಡೇಜಾ ಅವರ ಮಡದಿ ರಿವಾಬಾ ಜಡೇಜಾ.

ವಾಸ್ತವವಾಗಿ ಲಕ್ನೋ ವಿರುದ್ಧದ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಮಾತನಾಡಿದ್ದ ರಿವಾಬಾ ಜಡೇಜಾ, ಲಕ್ನೋ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದಿದ್ದರು. ರಿವಾಬಾ ಹೇಳಿದಂತೆ ಜಡೇಜಾ ಬ್ಯಾಟಿಂಗ್ನಲ್ಲಿ 43 ರನ್ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರೆ, ಬೌಲಿಂಗ್ನಲ್ಲಿ ಪ್ರಮುಖ ವಿಕೆಟ್ ಉರುಳಿಸಿದರು. ಇದಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ್ದ ಜಡೇಜಾ, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದು ಮತ್ತು ತಂಡದ ಗೆಲುವಿಗೆ ಕೊಡುಗೆ ನೀಡಿದ್ದು ಅದ್ಭುತ ಭಾವನೆ. ಆದರೆ ನಾನು ಹೆಚ್ಚಿನದನ್ನು ಹೇಳುವ ಮೊದಲು, ಈ ಪ್ರಶಸ್ತಿಯನ್ನು ಗುಜರಾತ್ನ ಶಿಕ್ಷಣ ಸಚಿವೆ ಮತ್ತು ನನ್ನ ಪತ್ನಿ ರಿವಾಬಾ ಜಡೇಜಾ ಅವರಿಗೆ ಅರ್ಪಿಸುತ್ತೇನೆ. ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ನಾನು ಉತ್ತಮ ಪ್ರದರ್ಶನ ನೀಡುತ್ತೇನೆ ಎಂದು ಅವರು ಪಂದ್ಯದ ಹಿಂದಿನ ದಿನವೇ ನನಗೆ ಹೇಳಿದ್ದರು. ಅದರಂತೆ ನಾನು ಪಂದ್ಯದಂದು ಉತ್ತಮ ಪ್ರದರ್ಶನ ನೀಡಿದೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದರು.

ಇನ್ನು ಈ ಪಂದ್ಯದಲ್ಲಿ ಜಡೇಜಾ ಬ್ಯಾಟಿಂಗ್ ಮಾಡಲು ಬಂದಾಗ, ರಾಜಸ್ಥಾನ ರಾಯಲ್ಸ್ ತಂಡವು ಭೀಕರ ಸ್ಥಿತಿಯಲ್ಲಿತ್ತು. ತಂಡದ ಅಗ್ರ ನಾಲ್ವರು ಬ್ಯಾಟರ್ಗಳು ಡಗೌಟ್ಗೆ ಮರಳಿದ್ದರು ಮತ್ತು ತಂಡವು 100 ರನ್ ಗಳಿಸಲು ಬಹಳ ದೂರದಲ್ಲಿತ್ತು. ಆ ಕಠಿಣ ಸಂದರ್ಭಗಳಲ್ಲಿ, ಜಡೇಜಾ ಹೆಟ್ಮೆಯರ್ ಜೊತೆಗೆ ಬ್ಯಾಟಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡರು. ಜಡೇಜಾ ಕೊನೆಯವರೆಗೂ ಅಜೇಯರಾಗಿ ಉಳಿದು 29 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 43 ರನ್ ಗಳಿಸಿದರು.

ಬ್ಯಾಟಿಂಗ್ ನಂತರ ಬೌಲಿಂಗ್ನಲ್ಲೂ ಮಿಂಚಿದ ರವೀಂದ್ರ ಜಡೇಜಾ, ನಿಕೋಲಸ್ ಪೂರನ್ ಅವರ ಔಟ್ ಮಾಡಿದರು. ಕುತೂಹಲಕಾರಿಯಾಗಿ, ರವೀಂದ್ರ ಜಡೇಜಾ ಲಕ್ನೋ ವಿರುದ್ಧ ಬ್ಯಾಟಿಂಗ್ ಮಾಡುವಾಗ 29 ಎಸೆತಗಳನ್ನು ಎದುರಿಸಿದ್ದರು. ಬೌಲಿಂಗ್ನಲ್ಲಿ ಜಡೇಜಾ ತಮ್ಮ ನಾಲ್ಕು ಓವರ್ಗಳಲ್ಲಿ ಕೇವಲ 29 ರನ್ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು.