- Kannada News Photo gallery Cricket photos MLC 2023 Ambati Rayudu pulls out of inaugural season BCCI to formulate policy for retired players
ನಿವೃತ್ತ ಆಟಗಾರರ ವಿರುದ್ಧ ಬಿಸಿಸಿಐ ಬ್ರಹ್ಮಾಸ್ತ್ರ; ಮೇಜರ್ ಲೀಗ್ ಕ್ರಿಕೆಟ್ನಿಂದ ಹಿಂದೆ ಸರಿದ ಅಂಬಟಿ ರಾಯುಡು!
Ambati Rayudu: ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಆಡುವುದಾಗಿ ಹೇಳಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ವೈಯಕ್ತಿಕ ಕಾರಣಗಳಿಂದ ಮೇಜರ್ ಲೀಗ್ ಕ್ರಿಕೆಟ್ ಚೊಚ್ಚಲ ಆವೃತ್ತಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.
Updated on: Jul 08, 2023 | 12:42 PM

ಐಪಿಎಲ್ಗೆ ವಿದಾಯ ಹೇಳಿದ ಬಳಿಕ ಅಮೇರಿಕಾದಲ್ಲಿ ಮೊದಲ ಬಾರಿಗೆ ಆಯೋಜನೆಯಾಗುತ್ತಿರುವ ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಆಡುವುದಾಗಿ ಹೇಳಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ವೈಯಕ್ತಿಕ ಕಾರಣಗಳಿಂದ ಮೇಜರ್ ಲೀಗ್ ಕ್ರಿಕೆಟ್ ಚೊಚ್ಚಲ ಆವೃತ್ತಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

2023ರ ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಯುಡು, ಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟ್ಗೆ ಗುಡ್ ಬೈ ಹೇಳುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆ ಬಳಿಕ ಮೇಜರ್ ಲೀಗ್ ಕ್ರಿಕೆಟ್ ಟಿ20 ಲೀಗ್ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದರು.

ಆದರೆ ಇದೀಗ ರಾಯುಡು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಈ ಬಾರಿಯ ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣವೂ ಇದ್ದು, ಭಾರತ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ವಿದೇಶಿ ಲೀಗ್ಗಳಲ್ಲಿ ಆಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಬಿಸಿಸಿಐ ಮುಂದಾಗಿದೆ.

ಟೀಂ ಇಂಡಿಯಾದ ಮಾಜಿ ಆಟಗಾರರು ವಿದೇಶಿ ಫ್ರಾಂಚೈಸಿ ಕ್ರಿಕೆಟ್ ಲೀಗ್ಗಳಲ್ಲಿ ಆಡುವುದನ್ನು ತಡೆಯಲು ಹೊಸ ನೀತಿಯನ್ನು ರೂಪಿಸಲು ಬಿಸಿಸಿಐ ಪ್ರಯತ್ನಿಸುತ್ತಿದೆ. ಹೊಸ ನೀತಿಯ ಪ್ರಕಾರ, ಭಾರತ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಟೀಂ ಇಂಡಿಯಾ ಆಟಗಾರರು, ಇತರ ಪಂದ್ಯಾವಳಿಗಳಲ್ಲಿ ಆಡಲು ಬಿಸಿಸಿಐನಿಂದ ಎನ್ಒಸಿ ಪಡೆಯಬೇಕಿದೆ.

ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವಂತೆ, ಟೀಂ ಇಂಡಿಯಾದ ಮಾಜಿ ಆಟಗಾರರು ಸಾಗರೋತ್ತರ ಲೀಗ್ಗಳಲ್ಲಿ ಆಡುವುದನ್ನು ತಡೆಯಲು ಆಟಗಾರರ ಒಪ್ಪಂದಗಳಲ್ಲಿ ಕೂಲಿಂಗ್-ಆಫ್ ಅವಧಿಯನ್ನು ಪರಿಚಯಿಸಲು ಬಿಸಿಸಿಐ ಪ್ರಯತ್ನಿಸುತ್ತಿದೆ. ಅಂದರೆ, ಟೀಂ ಇಂಡಿಯಾ ಆಟಗಾರರು ಭಾರತ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಒಂದು ವರ್ಷದವರೆಗೆ ಯಾವುದೇ ಸಾಗರೋತ್ತರ ಪಂದ್ಯಾವಳಿಗಳಲ್ಲಿ ಭಾಗವಹಿಸುವಂತಿಲ್ಲ.

ಹೀಗಾಗಿ ಬಿಸಿಸಿಐ ತನ್ನ ಹೊಸ ನೀತಿಯನ್ನು ಘೋಷಿಸುವ ಮುನ್ನವೇ ರಾಯುಡು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ರಾಯಡು ಜನಪ್ರಿಯ ಟೂರ್ನಮೆಂಟ್ಗಳಾದ SA20 ಮತ್ತು ILT20 ನಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಇವೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಅಥವಾ ಐಪಿಎಲ್ ನಿವೃತ್ತಿಯ ನಂತರ ಆಟಗಾರರು ತಕ್ಷಣವೇ ವಿದೇಶಿ ಲೀಗ್ಗಳಿಗೆ ಸೇರುವ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ ಎಂದು ವರದಿಯಾಗಿದೆ. "ಪೂರ್ವನಿರ್ಧರಿತ ನಿವೃತ್ತಿಯ (ವಿದೇಶಿ ಲೀಗ್ಗಳಲ್ಲಿ ಆಡುವ ಸಲುವಾಗಿ ಭಾರತ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವುದು) ಪ್ರವೃತ್ತಿಯನ್ನು ತಡೆಯಲು ಬಿಸಿಸಿಐ ಈ ಹೊಸ ನೀತಿಯನ್ನು ತರಲು ಮುಂದಾಗಿದೆ ಎಂದು ವರದಿಯಾಗಿದೆ.









