- Kannada News Photo gallery Cricket photos Pakistan T20 Captaincy: Shadab Khan to Replace Salman Agha After Asia Cup Debacle
ಭಾರತದ ವಿರುದ್ಧ ಹ್ಯಾಟ್ರಿಕ್ ಸೋಲು; ಪಾಕ್ ಟಿ20 ತಂಡದ ನಾಯಕನ ತಲೆದಂಡ
Pakistan T20 Captaincy: ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನದ ಕಳಪೆ ಪ್ರದರ್ಶನ ನಾಯಕತ್ವ ಬದಲಾವಣೆಗೆ ಕಾರಣವಾಗಿದೆ. ಸಲ್ಮಾನ್ ಆಘಾ ಬದಲಿಗೆ ಆಲ್ರೌಂಡರ್ ಶಾದಾಬ್ ಖಾನ್ ಪಾಕಿಸ್ತಾನ ಟಿ20 ತಂಡದ ನಾಯಕರಾಗುವ ಸಾಧ್ಯತೆಯಿದೆ. ಭುಜದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಶಾದಾಬ್, ಮುಂದಿನ ತಿಂಗಳು ತಂಡಕ್ಕೆ ಮರಳಲಿದ್ದು, ನಾಯಕತ್ವ ವಹಿಸಿಕೊಳ್ಳಲಿದ್ದಾರೆ. PCB ಸಲ್ಮಾನ್ ಆಘಾ ಮೇಲೆ ವಿಶ್ವಾಸ ಕಳೆದುಕೊಂಡಿದೆ.
Updated on: Oct 16, 2025 | 3:58 PM

ಏಷ್ಯಾಕಪ್ನಲ್ಲಿ ಪಾಕಿಸ್ತಾನ ತಂಡ ಫೈನಲ್ ತಲುಪಿತ್ತಾದರೂ, ಟೀಂ ಇಂಡಿಯಾ ವಿರುದ್ಧ ಮಾತ್ರ ಅದರ ಪ್ರದರ್ಶನ ತೀರ ಕಳಪೆಯಾಗಿತ್ತು. ಲೀಗ್ ಹಂತದಿಂದ ಹಿಡಿದು ಫೈನಲ್ವರೆಗೆ ಭಾರತದ ವಿರುದ್ಧ ಆಡಿದ್ದ ಮೂರಕ್ಕೆ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಏಕಪಕ್ಷೀಯ ಸೋಲನುಭವಿಸಿತ್ತು. ಈ ಸೋಲು ಫಾಕ್ ತಂಡವನ್ನು ಭಾರಿ ಮುಜುಗರಕ್ಕೀಡುಮಾಡಿತ್ತು.

ಇದೀಗ ಈ ಸೋಲಿನ ನಂತರ, ಪಾಕಿಸ್ತಾನದ ಟಿ20 ತಂಡದಲ್ಲಿರುವ ಪ್ರಮುಖ ಬದಲಾವಣೆಯಾಗಲಿದೆ ಎಂದು ವರದಿಯಾಗಿದೆ. ಪ್ರಸ್ತುತ ಪಾಕಿಸ್ತಾನ ಟಿ20 ತಂಡವನ್ನು ಮುನ್ನಡೆಸುತ್ತಿರುವ ನಾಯಕ ಸಲ್ಮಾನ್ ಆಘಾ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿ, ಆಲ್ರೌಂಡರ್ ಶದಾಬ್ ಖಾನ್ ಅವರನ್ನು ಟಿ20 ತಂಡವನ್ನು ಮುನ್ನಡೆಸಲು ನೇಮಿಸಬಹುದು ಎಂದು ವರದಿಯಾಗಿದೆ.

ವಾಸ್ತವವಾಗಿ ಈ ವರ್ಷದ ಆರಂಭದಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶದಾಬ್ ಖಾನ್ ಪ್ರಸ್ತುತ ಪಾಕಿಸ್ತಾನ ತಂಡದಿಂದ ಹೊರಗಿದ್ದಾರೆ. ಆದಾಗ್ಯೂ ಈ ಅನುಭವಿ ಆಲ್ರೌಂಡರ್ ಮುಂದಿನ ತಿಂಗಳ ವೇಳೆಗೆ ಫಿಟ್ ಆಗಲಿದ್ದು, ಪಾಕಿಸ್ತಾನ ಟಿ20 ತಂಡಕ್ಕೆ ಮರಳಿದ ನಂತರ ತಂಡದ ನಾಯಕತ್ವವನ್ನು ಅವರಿಗೆ ವಹಿಸಲಾಗುವುದು ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿದೆ.

70 ಏಕದಿನ ಮತ್ತು 112 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಶದಾಬ್, ಜೂನ್ ಆರಂಭದಲ್ಲಿ ಬಾಂಗ್ಲಾದೇಶ ವಿರುದ್ಧದ ತವರು ಸರಣಿಯಲ್ಲಿ ಕೊನೆಯ ಬಾರಿಗೆ ಆಡಿದ್ದರು, ಅಲ್ಲಿ ಅವರು ಭುಜದ ಗಾಯಕ್ಕೆ ತುತ್ತಾಗಿದ್ದರು. ಗಾಯಕ್ಕೆ ಮುನ್ನ, ಅವರು ಟಿ20 ತಂಡದ ಉಪನಾಯಕರಾಗಿದ್ದರು. ಅಲ್ಲದೆ ಶದಾಬ್ ಖಾನ್ ನಾಯಕತ್ವದ ಅನುಭವವನ್ನು ಹೊಂದಿದ್ದು, ಈ ಹಿಂದೆ ಪಾಕಿಸ್ತಾನ ತಂಡದ ನಾಯಕತ್ವ ಮತ್ತು ಪಾಕಿಸ್ತಾನ ಸೂಪರ್ ಲೀಗ್ನ ನಾಯಕತ್ವವನ್ನೂ ವಹಿಸಿದ್ದರು.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸಲ್ಮಾನ್ ಆಘಾ ಅವರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದೆ. ಇದಕ್ಕೆ ಕಾರಣ ಏಷ್ಯಾಕಪ್ನಲ್ಲಿ ಅವರ ನಾಯಕತ್ವ ಮತ್ತು ಆಟಗಾರನಾಗಿ ಅವರ ಪ್ರದರ್ಶನ. ಅಲ್ಲದೆ ತಂಡದಲ್ಲಿ ಅವರ ಸ್ಥಾನದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಮುಂಬರುವ ಟಿ20 ತ್ರಿಕೋನ ಸರಣಿಯಲ್ಲಿ ಶಾದಾಬ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
