
ದುಬೈನಲ್ಲಿ ನಡೆದ ಅಂಡರ್ 19 ಏಷ್ಯಾಕಪ್ ಫೈನಲ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿದ್ದ ಪಾಕಿಸ್ತಾನ ತಂಡ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ಪಾಕಿಸ್ತಾನ ತಂಡಕ್ಕೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ವಿಜೇತ ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ 1 ಕೋಟಿ ರೂಪಾಯಿಗಳ ವಿಶೇಷ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಅಂಡರ್ ಏಷ್ಯಾಕಪ್ ಫೈನಲ್ನಲ್ಲಿ ಭಾರತವನ್ನು 191 ರನ್ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಯುವ ಪಾಕಿಸ್ತಾನ ತಂಡ, ಸಹಾಯಕ ಸಿಬ್ಬಂದಿಗಳೊಂದಿಗೆ ಇಸ್ಲಾಮಾಬಾದ್ಗೆ ಆಗಮನಿಸಿತು. ಇಡೀ ತಂಡಕ್ಕೆ ಅದ್ಧೂರಿ ಸ್ವಾಗತವೂ ದೊರೆಯಿತು. ಇದೇ ವೇಳೆ ಸಮಾರಂಭದಲ್ಲಿ ಷರೀಫ್ ಈ ಘೋಷಣೆ ಮಾಡಿದ್ದಾರೆ.

ಸ್ವಾಗತ ಸಮಾರಂಭದ ನಂತರ ತಂಡದ ಮಾರ್ಗದರ್ಶಕ ಮತ್ತು ವ್ಯವಸ್ಥಾಪಕ ಸರ್ಫ್ರಾಜ್ ಅಹ್ಮದ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಪ್ರಧಾನಿ ಪ್ರತಿ ಆಟಗಾರನಿಗೆ 10 ಮಿಲಿಯನ್ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ ಎಂದಿದ್ದಾರೆ. ಇದಕ್ಕೂ ಮೊದಲು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಏಷ್ಯಾ ಕಪ್ ವಿಜೇತ ಜೂನಿಯರ್ ತಂಡದ ಆಟಗಾರರಿಗೆ ತಲಾ 5 ಮಿಲಿಯನ್ ರೂಪಾಯಿ ನಗದು ಬಹುಮಾನಗಳನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಪಾಕ್ ತಂಡಕ್ಕೆ ಆತ್ಮೀಯ ಸ್ವಾಗತ ನೀಡಲಾಯಿತು. ಸಾಮಾನ್ಯವಾಗಿ ಹಿರಿಯ ತಂಡಗಳಿಗೆ ಇಂತಹ ಸ್ವಾಗತ ನೀಡಲಾಗುತ್ತದೆ. ಆದರೆ ಫೈನಲ್ನಲ್ಲಿ ಭಾರತವನ್ನು ಸೋಲಿಸಿರುವುದು ಪಾಕಿಗಳಿಗೆ ಇನ್ನಿಲ್ಲದ ಸಂತೋಷ ನೀಡಿದೆ. ಹೀಗಾಗಿ ಯುವ ತಂಡಕ್ಕೆ ಅದ್ಧೂರಿ ಸ್ವಾಗತ ನೀಡಿದ್ದಾರೆ.

ಭಾನುವಾರ ನಡೆದ ಅಂಡರ್-19 ಏಷ್ಯಾಕಪ್ ಏಕಪಕ್ಷೀಯ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಎಂಟು ವಿಕೆಟ್ಗಳಿಗೆ 347 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 26.2 ಓವರ್ಗಳಲ್ಲಿ 156 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ ತಂಡಕ್ಕೆ ಚೊಚ್ಚಲ ಏಷ್ಯಾಕಪ್ ಟ್ರೋಫಿ ಲಭಿಸಿತು.