Sanju Samson: ತಂಡದಲ್ಲಿಲ್ಲ ಚಾನ್ಸ್: ಮೈದಾನದ ಸಿಬ್ಬಂದಿಗಳ ನೆರವಿಗೆ ನಿಂತ ಸಂಜು ಸ್ಯಾಮ್ಸನ್
India vs New zealand: ಭಾರತ ಪ್ಲೇಯಿಂಗ್ XI: ಶಿಖರ್ ಧವನ್ (ನಾಯಕ), ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್, ಉಮ್ರಾನ್ ಮಲಿಕ್.
Updated on: Nov 27, 2022 | 3:59 PM

ಹ್ಯಾಮಿಲ್ಟನ್ನಲ್ಲಿ ನಡೆಯಬೇಕಿದ್ದ ಭಾರತ-ನ್ಯೂಜಿಲೆಂಡ್ ನಡುವಣ 2ನೇ ಏಕದಿನ ಪಂದ್ಯ ಮಳೆಯ ಕಾರಣ ಅರ್ಧದಲ್ಲೇ ರದ್ದಾಗಿದೆ. ತಡವಾಗಿ ಶುರುವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು.

ಆದರೆ ಇತ್ತ ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ಪ್ಲೇಯಿಂಗ್ ಇಲೆವೆನ್ ಅನ್ನು ಘೋಷಿಸಿದಾಗ ಅಚ್ಚರಿ ಕಾದಿತ್ತು. ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಟ್ಟಿದ್ದರು. ಇದಾಗ್ಯೂ ಸ್ಯಾಮ್ಸನ್ ಮೈದಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು. ಅದು ಕಣಕ್ಕಿಳಿಯುವ ಮೂಲಕವಲ್ಲ. ಬದಲಾಗಿ ನೆರವಿಗೆ ನಿಲ್ಲುವ ಮೂಲಕ ಎಂಬುದು ವಿಶೇಷ.

ಹೌದು, ಟಾಸ್ ಮುಗಿಯುತ್ತಿದ್ದಂತೆ ಮಳೆಯ ವಾತಾವರಣ ಆವರಿಸಿತು. ಈ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ಕವರ್ಗಳನ್ನು ಪಿಚ್ಗೆ ಕೊಂಡೊಯ್ಯಲು ಸಿಬ್ಬಂದಿಗಳು ಸಾಕಷ್ಟು ಹರಸಾಹಸ ಪಟ್ಟರು. ಆ ವೇಳೆ ಸಿಬ್ಬಂದಿಗಳ ನೆರವಿಗೆ ಧಾವಿಸಿದ ಸಂಜು ಸ್ಯಾಮ್ಸನ್ ಕವರ್ಗಳನ್ನು ಪಿಚ್ಗೆ ಎಳೆಯಲು ಸಹಾಯ ಮಾಡಿದರು.

ಇದೀಗ ಪಿಚ್ ಕವರ್ ಎಳೆಯುತ್ತಿರುವ ಸಂಜು ಸ್ಯಾಮ್ಸನ್ ಅವರ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ನೆಚ್ಚಿನ ಆಟಗಾರನ ನಡೆಗೆ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವೇ ಹರಿಸಿದ್ದಾರೆ.

ಇನ್ನು ಕಳೆದ ಪಂದ್ಯದಲ್ಲಿ ಕಣಕ್ಕಿಳಿದು 36 ರನ್ಗಳ ಉಪಯುಕ್ತ ಕಾಣಿಕೆ ನೀಡಿದ್ದ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈ ಬಿಡಲು ಮುಖ್ಯ ಕಾರಣ 6ನೇ ಬೌಲರ್ನ ಆಯ್ಕೆ ಎಂದಿದ್ದಾರೆ ನಾಯಕ ಶಿಖರ್ ಧವನ್.

ಮೊದಲ ಏಕದಿನದಲ್ಲಿ ಟೀಮ್ ಇಂಡಿಯಾದ ಬೌಲರ್ಗಳು ವಿಫಲರಾಗಿದ್ದರು. ಹೀಗಾಗಿ ಐವರು ಬೌಲರ್ಗಳ ಬದಲಿಗೆ 2ನೇ ಏಕದಿನ ಪಂದ್ಯದಲ್ಲಿ 6 ಬೌಲರ್ಗಳನ್ನು ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ. ಹೀಗಾಗಿ ಓರ್ವ ಬ್ಯಾಟ್ಸ್ಮನ್ ಹೊರಗಿಟ್ಟು, ಬೌಲರ್ರೊಬ್ಬರಿಗೆ ಅವಕಾಶ ನೀಡಿದ್ದೇವೆ ಎಂದು ಶಿಖರ್ ಧವನ್ ತಿಳಿಸಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವ ಸಂಜು ಸ್ಯಾಮ್ಸನ್ಗೆ ಅವಕಾಶ ಕೈ ತಪ್ಪಿದೆ.
