ICC ನನ್ನ ಪಾದಗಳನ್ನು ತೊಳೆದು ನೀರು ಕುಡಿಯಬೇಕು: ಶೊಯೆಬ್ ಅಖ್ತರ್ ಅತಿರೇಕ
Shoaib Akhtar: 2003ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿರುದ್ಧ ಶೊಯೆಬ್ ಅಖ್ತರ್ ಗಂಟೆಗೆ 161.3 ಕಿಲೋಮೀಟರ್ ವೇಗದಲ್ಲಿ ಚೆಂಡೆಸದಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ವೇಗದ ಎಸೆತವಾಗಿದೆ. ಕಳೆದ 21 ವರ್ಷಗಳಿಂದ ಈ ದಾಖಲೆಯನ್ನು ಮುರಿಯಲು ಯಾವುದೇ ಬೌಲರ್ಗೆ ಸಾಧ್ಯವಾಗಿಲ್ಲ. ಇದೀಗ ಈ ದಾಖಲೆಯನ್ನು ಮುರಿಯಬಲ್ಲ ಬೌಲರ್ನನ್ನು ನಾನು ಪರಿಚಯಿಸಬಲ್ಲೆ ಎಂದಿದ್ದಾರೆ ಶೊಯೆಬ್ ಅಖ್ತರ್.
Updated on: Dec 17, 2024 | 10:10 AM

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಚೆಂಡೆಸೆದ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್ ಹೆಸರಿನಲ್ಲಿದೆ. 2003 ರ ಏಕದಿನ ವಿಶ್ವಕಪ್ನಲ್ಲಿ 161.3 ಕಿಲೋಮೀಟರ್ ವೇಗದಲ್ಲಿ ಚೆಂಡೆಸೆಯುವ ಮೂಲಕ ಅಖ್ತರ್ ಈ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ನಿರ್ಮಾಣವಾಗಿ 21 ವರ್ಷಗಳ ಕಳೆದರೂ ಯಾರಿಂದಲೂ ಸಹ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ಆದರೆ ಈ ದಾಖಲೆಯನ್ನು ಮುರಿಯಲು ಸಾಧ್ಯ ಎಂದಿದ್ದಾರೆ ಶೊಯೆಬ್ ಅಖ್ತರ್.

TNKS ಪಾಡ್ಕ್ಯಾಸ್ಟ್ನಲ್ಲಿ ಕಾಣಿಸಿಕೊಂಡ ಶೊಯೆಬ್ ಅಖ್ತರ್ಗೆ ತಮ್ಮ ವಿಶ್ವ ದಾಖಲೆಯನ್ನು ಯಾರಾದರೂ ಮುರಿಯಬಹುದೇ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಅಖ್ತರ್, ಖಂಡಿತವಾಗಿಯೂ ಸಾಧ್ಯ. ಈ ವಿಷಯದಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ ಎಂದು ನಾನು ಈಗಲೂ ಭಾವಿಸುತ್ತೇನೆ ಎಂದಿದ್ದಾರೆ.

ಒಂದು ವೇಳೆ ನಾನು ಪ್ರಪಂಚದಾದ್ಯಂತದ ಯುವ ಪ್ರತಿಭಾ ಬೌಲರ್ಗಳನ್ನು ಒಟ್ಟುಗೂಡಿಸಿದರೆ, ಈ ದಾಖಲೆಯನ್ನು ಕೇವಲ 6 ತಿಂಗಳೊಳಗೆ ಮುರಿದು ತೋರಿಸುತ್ತೇನೆ. ಏಕೆಂದರೆ ಯುವ ಬೌಲರ್ಗಳಿಂದ 160-170 ವರೆಗೆ ಬೌಲ್ ಮಾಡಲು ಸಾಧ್ಯ ಎಂದು ಶೊಯೆಬ್ ಅಖ್ತರ್ ಹೇಳಿದ್ದಾರೆ.

ನಾನು ಪ್ರಪಂಚದಾದ್ಯಂತದ ಎರಡು-ಮೂರು ಸಾವಿರ ಬೌಲರ್ಗಳನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾದರೆ, ನನ್ನ ದಾಖಲೆಯನ್ನು ನಾನೇ ಮುರಿಯುವಂತಹ ಬೌಲರ್ನನ್ನು ಪರಿಚಯಿಸುತ್ತೇನೆ. ಏನೂ ಆಗದಿದ್ದರೆ ಗಂಟೆಗೆ 150, 140 ಮತ್ತು 145 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಹೆಚ್ಚಿನ ಸಂಖ್ಯೆಯ ವೇಗದ ಬೌಲರ್ಗಳನ್ನು ನಾನು ನಿಮಗೆ ನೀಡುತ್ತೇನೆ ಎಂದು ಶೊಯೆಬ್ ಅಖ್ತರ್ ಹೇಳಿದ್ದಾರೆ.

ನಾನು ಕ್ರಿಕೆಟ್ ಜಗತ್ತಿಗೆ ಅತ್ಯುತ್ತಮ ಬೌಲರ್ಗಳನ್ನು ನೀಡಬಲ್ಲೆ. ಅವರನ್ನು ನೀವು ಆಡಿಸುತ್ತೀರೋ ಇಲ್ಲವೋ ನಿಮಗೆ ಬಿಟ್ಟದ್ದು, ಆದರೆ ನಾನು ಪರಿಚಯಿಸುವ ಬೌಲರ್ಗಳನ್ನು ಆಡಿಸುವಂತೆ ಪೋಲ್ ನಡೆಸುತ್ತೇನೆ. ಈ ಮೂಲಕ ಅತ್ಯುತ್ತಮ ಬೌಲರ್ನ ಆಡಿಸುವಂತಹ ವ್ಯವಸ್ಥೆ ಸೃಷ್ಟಿಸುತ್ತೇನೆ ಎಂದು ಶೊಯೆಬ್ ಅಖ್ತರ್ ಹೇಳಿದ್ದಾರೆ.

ಒಂದು ವೇಳೆ ನನ್ನ ಗರಡಿಯಲ್ಲಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ಗಳು ದೊಡ್ಡ ಸಂಖ್ಯೆಯಲ್ಲಿ ಬಂದರೆ, ಐಸಿಸಿ ನನ್ನ ಪಾದಗಳನ್ನು ತೊಳೆದು ನೀರು ಕುಡಿಯಬೇಕು ಎಂದು ಇದೇ ವೇಳೆ ಶೊಯೆಬ್ ಅಖ್ತರ್ ಅತಿರೇಕದ ಮಾತುಗಳನ್ನಾಡಿದ್ದಾರೆ. ಇದೀಗ ಅಖ್ತರ್ ಅವರ ಹೇಳಿಕೆಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಏಕೆಂದರೆ ಇನ್ನೂ ಸಹ ಬೌಲಿಂಗ್ ಅಕಾಡೆಮಿ ಅಥವಾ ಯುವ ಪ್ರತಿಭಾ ಬೌಲರ್ಗಳಿಗಾಗಿ ವ್ಯವಸ್ಥೆ ಸೃಷ್ಟಿಸದೇ ಶೊಯೆಬ್ ಅಖ್ತರ್ ಅತಿರೇಕದ ಮಾತುಗಳನ್ನಾಡುತ್ತಿದ್ದಾರೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



