- Kannada News Photo gallery Cricket photos T20 World Cup 2024: Rohit Sharma Meets Rahul Dravid and Ajit Agarkar
Team India: ರೋಹಿತ್ ಶರ್ಮಾ ಜೊತೆ ಅಗರ್ಕರ್ ಚರ್ಚೆ: ಹಾರ್ದಿಕ್ ಪಾಂಡ್ಯಗೆ ನಡುಕ ಶುರು..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2024) ಮುಂಬೈ ಇಂಡಿಯನ್ಸ್ ಪರ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಿರುವ ಹಾರ್ದಿಕ್ ಪಾಂಡ್ಯ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಈ ವೈಫಲ್ಯದ ನಡುವೆ ಇದೀಗ ಹಾರ್ದಿಕ್ ಪಾಂಡ್ಯಗೆ ಟಿ20 ವಿಶ್ವಕಪ್ ತಂಡದಿಂದ ಹೊರಬೀಳುವ ಭೀತಿ ಎದುರಾಗಿದೆ. ಹೀಗಾಗಿ ಐಪಿಎಲ್ನ ದ್ವಿತೀಯಾರ್ಧದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಮುಂದಿದೆ.
Updated on: Apr 17, 2024 | 1:30 PM

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಭೇಟಿಯಾಗಿದ್ದಾರೆ. ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಮೂವರು ಸಭೆ ನಡೆಸಿದ್ದು, ಈ ವೇಳೆ ಮುಂಬರುವ ಟಿ20 ವಿಶ್ವಕಪ್ಗಾಗಿ ತಂಡದ ಆಯ್ಕೆ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಶೇಷ ಸಭೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಯ್ಕೆ ಬಗ್ಗೆ ಕೂಡ ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಏಕೆಂದರೆ ಟಿ20 ವಿಶ್ವಕಪ್ ತಂಡದಲ್ಲಿ ಆಲ್ರೌಂಡರ್ ಆಗಿ ಪಾಂಡ್ಯ ಆಯ್ಕೆಯಾಗಬೇಕಿದ್ದರೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ. ಆದರೆ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಪಾಂಡ್ಯ ಅವರ ಪ್ರದರ್ಶನ ನಿರಾಶದಾಯಕ.

ಆರು ಪಂದ್ಯಗಳಲ್ಲಿ ಕೇವಲ 11 ಓವರ್ಗಳನ್ನು ಮಾತ್ರ ಎಸೆದಿರುವ ಹಾರ್ದಿಕ್ ಪಾಂಡ್ಯ ಪಡೆದಿರುವುದು 3 ವಿಕೆಟ್ಗಳು ಮಾತ್ರ. ಇದೇ ವೇಳೆ ಪ್ರತಿ ಓವರ್ಗೆ 12ರ ಸರಾಸರಿಯಲ್ಲಿ ಒಟ್ಟು 132 ರನ್ ನೀಡಿದ್ದಾರೆ. ಅಲ್ಲದೆ 6 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 131 ರನ್ಗಳು ಮಾತ್ರ.

ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುತ್ತಿರುವ ಶಿವಂ ದುಬೆ ಭರ್ಜರಿ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಸಂಚಲನ ಸೃಷ್ಟಿಸಿರುವ ದುಬೆ 163 ರ ಸ್ಟ್ರೈಕ್ ರೇಟ್ನಲ್ಲಿ ಒಟ್ಟು 242 ರನ್ ಕಲೆಹಾಕಿದ್ದಾರೆ.

ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ ವಿಶ್ವಕಪ್ ತಂಡದಲ್ಲಿ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಬೇಕಾ? ಶಿವಂ ದುಬೆಗೆ ಅವಕಾಶ ನೀಡಬೇಕಾ ಎಂಬ ಗೊಂದಲ ಬಿಸಿಸಿಐ ಆಯ್ಕೆ ಸಮಿತಿ ಮುಂದಿದೆ.

ಈ ಬಗ್ಗೆ ರೋಹಿತ್ ಶರ್ಮಾ ಅವರೊಂದಿಗೆ ಅಜಿತ್ ಅಗರ್ಕರ್ ಚರ್ಚಿಸಿದ್ದು, ಈ ಕುರಿತಾದ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಈ ತಿಂಗಳ ಕೊನೆಯಲ್ಲಿ ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಸಭೆಯ ಬಳಿಕ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಘೋಷಿಸುವ ಸಾಧ್ಯತೆಯಿದೆ.



















