- Kannada News Photo gallery Cricket photos Team India pacer Umesh Yadav duped by friend of Rs 44 lakhs Kannada News zp
Umesh Yadav: ಸ್ನೇಹಿತನಿಂದಲೇ ಉಮೇಶ್ ಯಾದವ್ಗೆ 44 ಲಕ್ಷ ರೂ. ವಂಚನೆ..!
Umesh Yadav: ಉಮೇಶ್ ಯಾದವ್ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿ ಆಯ್ಕೆಯಾದ ಬಳಿಕ, ಜುಲೈ 15, 2014 ರಂದು ತಮ್ಮ ನಿರುದ್ಯೋಗಿ ಸ್ನೇಹಿತ ಠಾಕ್ರೆ ಅವರನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು.
Updated on: Jan 21, 2023 | 8:29 PM

ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್ ತನ್ನ ಸ್ನೇಹಿತನಿಂದಲೇ ವಂಚನೆಗೊಳಗಾಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಜಮೀನು ಖರೀದಿಸುವ ನೆಪದಲ್ಲಿ ಸ್ನೇಹಿತ ವಂಚಿಸಿದ್ದು, ಇದೀಗ ಮಹಾರಾಷ್ಟ್ರದಲ್ಲಿ ದೂರು ದಾಖಲಿಸಲಾಗಿದೆ.

ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಜಮೀನು ಖರೀದಿಸುವ ಸಲುವಾಗಿ ಅವರ ಸ್ನೇಹಿತ ಶೈಲೇಶ್ ಠಾಕ್ರೆ ಭಾರತೀಯ ಆಟಗಾರನಿಗೆ 44 ಲಕ್ಷ ರೂಪಾಯಿ ವಂಚಿಸಿದ್ದಾರೆ. ಇದೀಗ ಉಮೇಶ್ ಯಾದವ್ ನೀಡಿದ ದೂರಿನ ಮೇರೆಗೆ ಶೈಲೇಶ್ ಠಾಕ್ರೆ ವಿರುದ್ಧ ವಂಚನೆಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಮೇಶ್ ಯಾದವ್ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿ ಆಯ್ಕೆಯಾದ ಬಳಿಕ, ಜುಲೈ 15, 2014 ರಂದು ತಮ್ಮ ನಿರುದ್ಯೋಗಿ ಸ್ನೇಹಿತ ಠಾಕ್ರೆ ಅವರನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು. ಗೆಳೆಯನ ಮೇಲಿನ ವಿಶ್ವಾಸದಲ್ಲಿ ಹಣಕಾಸಿನ ಎಲ್ಲಾ ವ್ಯವಹಾರಗಳನ್ನು ನಿಭಾಯಿಸುವ ಸ್ವಾತಂತ್ರವನ್ನು ಕೂಡ ನೀಡಿದ್ದರು.

ಅದರಂತೆ ಉಮೇಶ್ ಯಾದವ್ ಅವರ ಬ್ಯಾಂಕ್ ಖಾತೆ, ಆದಾಯ ತೆರಿಗೆ ಮತ್ತು ಇತರ ಹಣಕಾಸು ಕಾರ್ಯಗಳನ್ನು ಶೈಲೇಶ್ ನೋಡಿಕೊಳ್ಳುತ್ತಿದ್ದರು. ಇದೇ ವೇಳೆ ನಾಗ್ಪುರದಲ್ಲಿ ಒಂದು ಖಾಲಿ ಜಮೀನು ಮಾರಾಟ ಮಾಡುತ್ತಿದ್ದಾರೆ. 44 ಲಕ್ಷ ರೂ.ಗೆ ಸಿಗುತ್ತದೆ ಎಂದು ಉಮೇಶ್ ಯಾದವ್ಗೆ ತಿಳಿಸಿದ್ದರು.

ಹೀಗಾಗಿ ಉಮೇಶ್ ಯಾದವ್ ಶೈಲೇಶ್ ಠಾಕ್ರೆ ಖಾತೆಗೆ 44 ಲಕ್ಷ ರೂ. ವರ್ಗಾಯಿಸಿದ್ದಾರೆ. ಆದರೆ, ಠಾಕ್ರೆ ತಮ್ಮ ಹೆಸರಿನಲ್ಲಿ ನಿವೇಶನ ಖರೀದಿಸಿದ್ದಾರೆ. ಇದೀಗ ನಿವೇಶನವನ್ನು ವರ್ಗಾಯಿಸುವಂತೆ ಕೇಳಿಕೊಂಡರೂ ಆತ ಅದನ್ನು ಹಿಂತಿರುಗಿಸಲು ಒಪ್ಪುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸದ್ಯ ಶೈಲೇಶ್ ಠಾಕ್ರೆ ವಿರುದ್ಧ ಉಮೇಶ್ ಯಾದವ್ ಕೊರಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಗಾಗಿ ಶಿಕ್ಷೆ) ಮತ್ತು 420 (ವಂಚನೆ ಮತ್ತು ಆಸ್ತಿ ಲಪಟಾಯಿಸಲು ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.









