- Kannada News Photo gallery Cricket photos WTC Final 2023: Who Will Be Captain, If Rohit Sharma Misses Out
WTC Final 2023: ರೋಹಿತ್ ಶರ್ಮಾಗೆ ಗಾಯ: ಯಾರಾಗ್ತಾರೆ ಉಪ ನಾಯಕ?
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ನಾಳೆಯಿಂದ (ಜೂ.7) ಶುರುವಾಗಲಿದೆ. ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.
Updated on:Jun 06, 2023 | 11:46 PM

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಗಾಯವಾಗಿದೆ. ಅಂತಿಮ ದಿನದ ಅಭ್ಯಾಸದ ವೇಳೆ ಹಿಟ್ಮ್ಯಾನ್ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಇದರ ಬೆನ್ನಲ್ಲೇ ಅವರು ಪ್ರಾಕ್ಟೀಸ್ ಅನ್ನು ಅಂತ್ಯಗೊಳಿಸಿದರು.

ಇದಾಗ್ಯೂ ಅವರ ಫೈನಲ್ ಪಂದ್ಯದಿಂದ ಹೊರಗುಳಿಯುವುದಿಲ್ಲ ಎಂದು ತಿಳಿದು ಬಂದಿದೆ. ಗಾಯವು ಗಂಭೀರವಲ್ಲದ ಕಾರಣ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದಾರೆ. ಆದರೆ ಹೆಬ್ಬೆರಳಿಗೆ ಗಾಯವಾಗಿರುವುದರಿಂದ ಮುನ್ನೆಚ್ಚರಿಕೆ ಸಲುವಾಗಿ ಫೀಲ್ಡಿಂಗ್ ವೇಳೆ ಕೆಲ ಕಾಲ ಹೊರಗುಳಿಯುವ ಸಾಧ್ಯತೆಯಿದೆ.

ಒಂದು ವೇಳೆ ರೋಹಿತ್ ಶರ್ಮಾ ಫೀಲ್ಡಿಂಗ್ ವೇಳೆ ಮೈದಾನದಿಂದ ಹೊರಗುಳಿದರೆ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ. ಏಕೆಂದರೆ ಈ ಹಿಂದೆ ಉಪನಾಯಕರಾಗಿದ್ದ ಕೆಎಲ್ ರಾಹುಲ್ ಹಾಗೂ ಜಸ್ಪ್ರೀತ್ ಬುಮ್ರಾ ಪ್ರಸ್ತುತ ತಂಡದಲ್ಲಿಲ್ಲ.

ಇತ್ತ ಬಿಸಿಸಿಐ ಕೂಡ ಈ ಬಾರಿ ತಂಡವನ್ನು ಪ್ರಕಟಿಸಿದಾಗ ಉಪನಾಯಕನನ್ನು ಹೆಸರಿಸಿಲ್ಲ. ಹೀಗಾಗಿಯೇ ಹಿಟ್ಮ್ಯಾನ್ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಈ ಕುತೂಹಲಕಾರಿ ಪ್ರಶ್ನೆಗೆ ಸಿಗುವ ಉತ್ತರ, ಅದು ಟೀಮ್ ಇಂಡಿಯಾ ನಾಯಕನ ನಿರ್ಧಾರ. ಅಂದರೆ ರೋಹಿತ್ ಶರ್ಮಾ ಮೈದಾನದಿಂದ ಹೊರ ಹೋಗುವ ಮುನ್ನ ತಂಡವನ್ನು ಯಾರು ಮುನ್ನಡೆಸಬೇಕೆಂದು ನಿರ್ಧರಿಸಿ ಅವರಿಗೆ ಜವಾಬ್ದಾರಿವಹಿಸಲಿದ್ದಾರೆ.

ಈ ಹಿಂದೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದ ವೇಳೆ ರೋಹಿತ್ ಶರ್ಮಾ ಕೆಲ ಕಾಲ ಮೈದಾನದಿಂದ ಹೊರಗಿದ್ದರು. ಈ ವೇಳೆ ತಂಡವನ್ನು ಚೇತೇಶ್ವರ ಪೂಜಾರ ಮುನ್ನಡೆಸಿದ್ದರು.

ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದ ನಡುವೆ ರೋಹಿತ್ ಶರ್ಮಾ ಹೊರಗುಳಿದರೆ ಚೇತೇಶ್ವರ ಪೂಜಾರ ಅವರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಬಹುದು. ಏಕೆಂದರೆ ಪೂಜಾರ ಇಂಗ್ಲೆಂಡ್ನ ಕೌಂಟಿ ಟೂರ್ನಿಯಲ್ಲಿ ಸಸೆಕ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದ್ದಾರೆ.

ಹಾಗೆಯೇ ಪ್ರಸ್ತುತ ತಂಡದಲ್ಲಿ ಅಜಿಂಕ್ಯ ರಹಾನೆ ಕೂಡ ಇದ್ದು, ಪೂಜಾರ ಅಥವಾ ರಹಾನೆ ಟೀಮ್ ಇಂಡಿಯಾದ ಹಂಗಾಮಿ ನಾಯಕರಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಇಶಾನ್ ಕಿಶನ್ (ವಿಕೆಟ್ ಕೀಪರ್).
Published On - 11:29 pm, Tue, 6 June 23
