- Kannada News Photo gallery Cricket photos Year Ender 2022: Full list of Indian Cricket team captains in 2022 Kannada News zp
Year Ender 2022: ಈ ವರ್ಷ 7 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Year Ender 2022: ಸರಣಿಗಳಿಂದ ಸರಣಿಗೆ ಟೀಮ್ ಇಂಡಿಯಾ ನಾಯಕರುಗಳು ಬದಲಾಗಿರುವುದು ವಿಶೇಷ. ಹಾಗಿದ್ರೆ ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕ್ಯಾಪ್ಟನ್ಗಳು ಯಾರೆಲ್ಲಾ ನೋಡೋಣ...
Updated on: Dec 31, 2022 | 8:30 PM

ಒಂದು ತಂಡದಲ್ಲಿ 7 ನಾಯಕರುಗಳು ಇರುತ್ತಾರೆಯೇ? ಆದರೆ 2022ರ ಟೀಮ್ ಇಂಡಿಯಾದ ಸನ್ನಿವೇಶವನ್ನು ಗಮನಿಸಿದರೆ ಯಾಕೆ ಇರಬಾರದಾ ಎಂದು ಕೇಳಬಹುದಷ್ಟೇ. ಏಕೆಂದರೆ ಟೀಮ್ ಇಂಡಿಯಾ 2022 ರಲ್ಲಿ ಬರೋಬ್ಬರಿ 7 ನಾಯಕರುಗಳನ್ನು ಕಣಕ್ಕಳಿಸಿದೆ. ಅಂದರೆ ಟೀಮ್ ಇಂಡಿಯಾವನ್ನು ಒಂದು ವರ್ಷದೊಳಗೆ 7 ಕ್ಯಾಪ್ಟನ್ಗಳು ಮುನ್ನಡೆಸಿದ್ದಾರೆ.

ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಇಂತಹದೊಂದು ಪರ್ವ ಶುರುವಾಗಿತ್ತು. ಏಕೆಂದರೆ ಕಿಂಗ್ ಕೊಹ್ಲಿ ಇರುವವರೆಗೂ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಆಗಿರಲಿಲ್ಲ. ಆದರೆ ಆ ಬಳಿಕ ತಿಂಗಳುಗಳ ಅಂತರದಲ್ಲಿ, ಅಂದರೆ ಸರಣಿಗಳಿಂದ ಸರಣಿಗೆ ಟೀಮ್ ಇಂಡಿಯಾ ನಾಯಕರುಗಳು ಬದಲಾಗಿರುವುದು ವಿಶೇಷ. ಹಾಗಿದ್ರೆ ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕ್ಯಾಪ್ಟನ್ಗಳು ಯಾರೆಲ್ಲಾ ನೋಡೋಣ...

1- ವಿರಾಟ್ ಕೊಹ್ಲಿ: ಕಳೆದ ವರ್ಷಾಂತ್ಯದವರೆಗೂ ಟೀಮ್ ಇಂಡಿಯಾ ನಾಯಕರಾಗಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ ವಿರುದ್ದದ ಸರಣಿಯೊಂದಿಗೆ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

2- ರೋಹಿತ್ ಶರ್ಮಾ: ವಿರಾಟ್ ಕೊಹ್ಲಿಯ ರಾಜೀನಾಮೆ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಖಾಯಂ ನಾಯಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಸೇರಿದಂತೆ ಪ್ರಮುಖ ಸರಣಿಗಳಲ್ಲಿ ಹಿಟ್ಮ್ಯಾನ್ ತಂಡವನ್ನು ಮುನ್ನಡೆಸಿದ್ದರು.

3- ಕೆಎಲ್ ರಾಹುಲ್: ವಿರಾಟ್ ಕೊಹ್ಲಿಯ ರಾಜೀನಾಮೆ ಬಳಿಕ ಟೀಮ್ ಇಂಡಿಯಾದ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣ ಅವರು ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಉಪನಾಯಕರಾಗಿದ್ದ ಕೆಎಲ್ ರಾಹುಲ್ ಅವರು ಟೀಮ್ ಇಂಡಿಯಾ ನಾಯಕರಾಗಿ ಪದಾರ್ಪಣೆ ಮಾಡಿದ್ದರು.

4- ರಿಷಬ್ ಪಂತ್: ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಗೆ ಕೆಎಲ್ ರಾಹುಲ್ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದರು. ಹೀಗಾಗಿ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಿದ್ದರು.

5- ಹಾರ್ದಿಕ್ ಪಾಂಡ್ಯ: ಭಾರತ ತಂಡವು ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಕಾರಣ ಐರ್ಲೆಂಡ್ಗೆ ಮೀಸಲು ಟೀಮ್ ಇಂಡಿಯಾವನ್ನು ಕಳುಹಿಸಲಾಗಿತ್ತು. ಎರಡು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು.

6- ಜಸ್ಪ್ರೀತ್ ಬುಮ್ರಾ: ಇಂಗ್ಲೆಂಡ್ ವಿರುದ್ದ ನಡೆದ ಏಕೈಕ ಟೆಸ್ಟ್ ಪಂದ್ಯದಿಂದ ಕೊರೋನಾ ಕಾರಣದಿಂದ ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದರು. ಹೀಗಾಗಿ ಭಾರತ ತಂಡವನ್ನು ಜಸ್ಪ್ರೀತ್ ಬುಮ್ರಾ ಮುನ್ನೆಡೆಸುತ್ತಿದ್ದರು.

7- ಶಿಖರ್ ಧವನ್: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಹೊರಗುಳಿದಿದ್ದರು. ಹೀಗಾಗಿ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಿದ್ದರು.

ಅಂದರೆ 2022 ರಲ್ಲಿ ಬಿಸಿಸಿಐ ಟೀಮ್ ಇಂಡಿಯಾ ಪರ ಒಟ್ಟು 7 ಕ್ಯಾಪ್ಟನ್ಗಳನ್ನು ಕಣಕ್ಕಿಳಿಸಿ ಹೊಸ ದಾಖಲೆ ಬರೆದಿದೆ. ಇದಕ್ಕೂ ಮುನ್ನ 1959 ರಲ್ಲಿಯೂ ಭಾರತ ಟೆಸ್ಟ್ ತಂಡವನ್ನು 5 ಆಟಗಾರರು ಮುನ್ನಡೆಸಿದ್ದರು. ಆದರೆ 2022 ರಲ್ಲಿ ಒಟ್ಟು 7 ಆಟಗಾರರು ಭಾರತ ತಂಡದ ನಾಯಕರಾಗಿ ಕಾಣಿಸಿಕೊಂಡಿರುವುದು ವಿಶೇಷ.



















