
ಕರ್ನಾಟಕದಲ್ಲಿ ಶಕ್ತಿ ಯೋಜನೆ ಆರಂಭವಾಗಿದ್ದೆ ಆಗಿದ್ದು, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಮಹಿಳೆಯರು ತುಂಬುತ್ತಿದ್ದಾರೆ. ಮಹಿಳೆಯರಿಗೆ ಉಚಿತವೆನ್ನುವ ಕಾರಣಕ್ಕೆ ಮಹಿಳೆಯರ ಜೊತೆಗೆ ಮನೆ ಮಂದಿಯೆಲ್ಲ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಕೆಎಸ್ಆರ್ಟಿಸಿಗೆ ಕೋಟಿ ಕೋಟಿ ರೂ. ಆದಾಯ ಹರಿದು ಬರುತ್ತಿದೆ.

ಜೂನ್ 11 ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಗೆ ತಂದಿತು. ಅಂದಿನಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.

ಈ ಹಿಂದೆ ಕೆಎಸ್ಆರ್ಟಿಸಿಯಲ್ಲಿ ಪ್ರತಿದಿನ 9.7 ಕೋಟಿ ರೂ. ಆದಾಯ ಬರುತ್ತಿತ್ತು. ಈಗ ಪ್ರತಿದಿನ ಸರಾಸರಿ ಆದಾಯ 13.9 ಕೋಟಿ ರೂ. ಬರುತ್ತಿದೆ. ಅಂದರೆ ಪ್ರತಿದಿನ ಸರಾಸರಿ 4.20 ಕೋಟಿ ರೂ. ಆದಾಯ ಏರಿಕೆ ಆಗಿದೆ. ಆದರೆ ಖರ್ಚು ವೆಚ್ಚಗಳು ಹೆಚ್ಚಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳುತ್ತಾರೆ.

ಈ ಹಿಂದೆ ಪ್ರತಿ ತಿಂಗಳು ಸರಾಸರಿ 250 ಕೋಟಿ ರೂ. ಬರ್ತಿದ್ದ ಆದಾಯ, ಸದ್ಯ ಬರೋಬ್ಬರಿ 400 ಕೋಟಿ ರೂ. ಆಗಿದೆ. ಇನ್ನೂ ಜೂನ್- 11 ರಿಂದ ಕೆಎಸ್ಆರ್ಟಿಸಿ ಬಸ್ನಲ್ಲಿ ಇಲ್ಲಿಯವರೆಗೆ 84,28,02,764 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದರೆ, ಇದರಿಂದ ಕೆಎಸ್ಆರ್ಟಿಸಿಗೆ 2537,91,30,025 ಕೋಟಿ ರೂ. ಆದಾಯ ಬಂದಿದೆ.

ಮಹಿಳೆಯರಿಗೆ ಉಚಿತವೆಂದು ಕುಟುಂಬಸ್ಥರೆಲ್ಲ ಕೆಎಸ್ಆರ್ಟಿಸಿ ಬಸ್ ನಲ್ಲೇ ಪ್ರಯಾಣ ಮಾಡ್ತಿದ್ದಾರೆ. ಇದರಿಂದ ಕೆಎಸ್ಆರ್ಟಿಸಿ ಬಸ್ಗಳು ಕಿಕ್ಕಿರಿದು ತುಂಬುತ್ತಿದೆ. ಬಸ್ನಲ್ಲಿ ಸೀಟ್ಗಳು ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಹೆಚ್ಚಿನ ಬಸ್ಗಳ ವ್ಯವಸ್ಥೆ ಮಾಡಿ ಎಂದು ಪ್ರಯಾಣಿಕರ ಮನವಿ ಬೆನ್ನಲ್ಲೇ ಇದೀಗ ಹೊಸ ಬಸ್ ಗಳನ್ನು ಖರೀದಿ ಮಾಡಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಸದ್ಯದಲ್ಲೇ 1500 ಹೊಸ ಬಸ್ಗಳು ರೋಡಿಗಿಳಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. ಈ ಬಗ್ಗೆ ಮಹಿಳಾ ಮತ್ತು ಪುರುಷ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದು, ನಮಗೆ ಶಕ್ತಿ ಯೋಜನೆಯಿಂದ ತುಂಬಾ ಸಹಾಯ ಆಗಿದೆ. ಪ್ರತಿದಿನ ನಾನು ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತೇನೆ. ಹಣ ಉಳಿತಾಯ ಆಗುತ್ತಿದೆ. ತುಂಬಾ ಜನ ಪ್ರಯಾಣ ಮಾಡುವುದರಿಂದ ಹೊಸ ಬಸ್ಸುಗಳು ಬೇಕಾಗುತ್ತದೆ ಎಂದು ಪ್ರಯಾಣಿಕರು ಹೇಳುತ್ತಾರೆ.

ಒಟ್ಟಿನಲ್ಲಿ ಶಕ್ತಿ ಯೋಜನೆಯಿಂದ ಕೆಎಸ್ಆರ್ಟಿಸಿಗೆ ಶಕ್ತಿ ಬಂದಿರೋದಂತು ಸುಳ್ಳಲ್ಲ. ಆದಷ್ಟು ಬೇಗ ಹೊಸ ಬಸ್ಸುಗಳು ರೋಡಿಗಿಳಿದರೆ ಪ್ರಯಾಣಿಕರಿಗೆ ಸಹಾಯ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.