
ಕೇರಳಂಗೆ ಮುಂಗಾರು ಪ್ರವೇಶವಾಗಿದ್ದು, ರಾಜ್ಯದಲ್ಲೂ ಮಳೆ ಚುರುಕುಗೊಂಡಿದೆ. ನಿನ್ನೆಯಷ್ಟೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದ್ದು, ಅಲ್ಲಲ್ಲಿ ಭಾರೀ ಸಮಸ್ಯೆಗಳು ಕಂಡು ಬಂದಿವೆ. ಜೂನ್ 9ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ.

ಕೇರಳಂನ ಕಾಸರಗೋಡು ಜಿಲ್ಲೆಯಾದ್ಯಂತ ಭಾರೀ ಮಳೆ ಆಗಿದೆ. ಅಡೂರು ಎಂಬಲ್ಲಿ ನಿರಂತರ ಮಳೆಗೆ ಮಣ್ಣು ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮನೆ ಸಮೀಪ ಆಟವಾಡುತ್ತಿದ್ದಾಗ ಆವರಣದ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಮಣ್ಣಿನಡಿ ಮೂವರು ಮಕ್ಕಳು ಸಿಲುಕಿದ್ದು ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಅಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಧಾರಕಾರ ಮಳೆಗೆ ಬಳ್ಳಾರಿ ನಗರದಲ್ಲಿ ಭಾರೀ ಅಧ್ವಾನ ಆಗಿದೆ. ತಡರಾತ್ರಿ ಸತತವಾಗಿ ಎರಡು ಗಂಟೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿದ್ದ ದವಸ, ಧಾನ್ಯಗಳೆಲ್ಲಾ ನೀರುಪಾಲಾಗಿದೆ. ಮನೆಯಲ್ಲಿನ ನೀರು ಹೊರಹಾಕಲು ಮನೆ ಮಂದಿ ಹರಸಾಹಸ ಪಟ್ಟಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲೂ ಮಳೆ ಆರ್ಭಟ ಜೋರಾಗಿದೆ. ಚಿಂಚೋಳಿ ತಾಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಊರಿಗೆ ಊರೇ ಕೆರೆಯಂತಾಗಿದೆ. ಜನರು ಮನೆಯಿಂದ ಹೊರಬರಲಾಗದೇ ಸಂಕಷ್ಟ ಅನುಭವಿಸ್ತಿದ್ರೆ, ಮತ್ತಷ್ಟು ಮಂದಿ ಮನೆ ತೊರೆದು ಬೇರೆ ಕಡೆ ಸ್ಥಳಾಂತರವಾಗಿದ್ದಾರೆ. ಚಿಮ್ಮನಚೋಡ ಗ್ರಾಮದ ಬಳಿ ಸೇತುವೆ ಕುಸಿದ ಹಿನ್ನೆಲೆ ಚಿಂಚೋಳಿ - ಭಾಲ್ಕಿ ನಡುವಿನ ರಸ್ತೆ ಸಂಪರ್ಕ ಬಂದ್ ಆಗಿದೆ.

ಗದಗದಲ್ಲಿ ಮಳೆ ಹೊಡೆತಕ್ಕೆ ರಸ್ತೆಗಳೇ ಕೆರೆಯಂತಾಗಿವೆ. ಧೋ ಅಂತ ಸುರಿದ ಮಳೆಯಿಂದಾಗಿ ಪಂಚರಹೊಂಡದ ಬಳಿ ಚರಂಡಿ ನೀರು ರಸ್ತೆ ತುಂಬೆಲ್ಲಾ ಹರಿದು ಬಂದಿದೆ. ರಸ್ತೆ ಜಲಮಯ ಆಗಿದ್ರಿಂದ ಮಾರ್ಕೆಟ್ಗೆ ಹೋಗುವ ಜನರು ಹೈರಾಣಾಗಿದ್ದಾರೆ.

ಹಾವೇರಿ ಜಿಲ್ಲೆಯಲ್ಲೂ ವರ್ಷಧಾರೆಯ ಅಬ್ಬರ ಜೋರಾಗಿದೆ. ಅಗಡಿ, ಯತ್ನಿನಹಳ್ಳಿ, ಬಸವನಕಟ್ಟಿ ಸೇರಿದಂತೆ ಹಲವು ಕಡೆ ಧಾರಾಕಾರ ಮಳೆ ಆಗಿದೆ. ಮಳೆ ಹೊಡೆತಕ್ಕೆ ಮನೆಗಳಂತೂ ಚರಂಡಿ ನೀರಿನಿಂದ ಆವರಿಸಿವೆ. ಮನೆಯಲ್ಲಿನ ನೀರು ಹೊರ ಹಾಕೋಕೆ ನಿವಾಸಿಗಳು ಹರಸಾಹಸಪಟ್ಟಿದ್ದಾರೆ.

ಬಿಸಿಲಿಗೆ ಬೆಂದು ಹೋಗಿದ್ದ ಬಾಗಲಕೋಟೆ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಅರ್ಧಗಂಟೆಗೂ ಹೆಚ್ಚು ಕಾಲ ಸರಿದ ಮಳೆಗೆ ನವನಗರದ ರಸ್ತೆಗಳು ಜಲಾವೃತವಾಗಿವೆ. ಜಿಲ್ಲಾ ಕ್ರೀಡಾಂಗಣದ ಬಳಿಯ ರಸ್ತೆಗಳು ಕೂಡ ಕಂಪ್ಲೀಟ್ ಮುಳುಗಿವೆ.
Published On - 8:05 am, Sun, 7 June 26