ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದು 41ನೇ ಹುಟ್ಟು ಹಬ್ಬದ ಸಂಭ್ರಮ. ಭಾರತ ಕ್ರಿಕೆಟ್ ತಂಡವನ್ನು ಮೂರು ಮಾದರಿಯಲ್ಲಿ ನಂಬರ್ 1 ಶ್ರೇಯಾಂಕಕ್ಕೆ ತಲುಪಿಸಿದ್ದ ರಾಂಚಿಯ ಹುಡುಗನ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೆ ಮರುಳಾಗಿ ಹೋಗಿತ್ತು. ಮೈದಾನದಲ್ಲಿ ಕೂಲ್ ಆಗಿರುತ್ತಿದ್ದ ಧೋನಿ, ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಿಂದ ಸಖತ್ ಸದ್ದು ಮಾಡುತ್ತಿದ್ದರು. ಅಂತಹ ಧೋನಿ ಇಂದು 41ನೇ ಜನ್ಮದಿನವನ್ನು ಮಡದಿ, ಮಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.
ಮೊದಲ ಬಾರಿಗೆ ಆಯೋಜನೆಯಾಗಿದ್ದ ಐಸಿಸಿ ಟಿ 20 ವಿಶ್ವಕಪ್ ಪಂದ್ಯಾವಳಿಗಾಗಿ ಧೋನಿ ಅವರನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಯಿತು. ಇಡೀ ಪಂದ್ಯಾವಳಿಯ ನಾಯಕತ್ವ ವಹಿಸಿದ್ದ ಧೋನಿ ಅತ್ಯುತ್ತಮ ನಾಯಕತ್ವವನ್ನು ನೀಡಿದರು. ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಜಯಗಳಿಸಲು ಧೋನಿ ನಾಯಕತ್ವವೇ ಕಾರಣ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರಂತಹ ಹಿರಿಯರು ಇಲ್ಲದ ಆ ಪಂದ್ಯದಲ್ಲಿ ಧೋನಿ ಒಬ್ಬಂಟಿಯಾಗಿದ್ದರು. 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ 20 ವಿಶ್ವಕಪ್ ಫೈನಲ್ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿ ಟ್ರೋಫಿಯನ್ನು ಗೆದ್ದುಕೊಂಡಿತು.